ನಿರ್ದೇಶಕ ಲಕ್ಕಿಶಂಕರ್ ‘ಗಾಂಧಿನಗರ’ಕ್ಕೆ ವಿರುದ್ಧವಾದ ಸಿನಿಮಾ ಮಾಡಿದ್ದಾರಾ? ಈ ಆಂಗಲ್ನಿಂದ ಸಿನಿಮಾ ನೋಡಿದರೆ ಇಲ್ಲವೇ ಇಲ್ಲ ಎನಿಸುತ್ತದೆ.
ಕಾರಣ ಮಾಮೂಲಿ ಎನಿಸುವ- ಅಂಡರ್ವರ್ಲ್ಡ್ ಕತೆ. ಒಬ್ಬ ಅಮಾಯಕ ವಿನಾಕಾರಣ ತಪ್ಪು ಮಾಡುತ್ತಾನೆ. ಅದು ಅವನದಲ್ಲದಿದ್ದರೂ ತಪ್ಪು ಎಂದು ಬಿಂಬಿಸಲಾಗುತ್ತದೆ. ಅಲ್ಲೊಂದು ಕೊಲೆ ಆಗಿರುತ್ತದೆ. ಅದನ್ನು ಈತನೇ ಮಾಡಿದ್ದಾನೆ ಎಂದು ಜೈಲಿಗೆ ತಳ್ಳುತ್ತಾನೆ. ಆ ಮೇಲೆ ಆತನಿಗೆ ಇಡೀ ಏರಿಯಾ ಜನ ಹೆದರುತ್ತಾರೆ. ಊರಿಗೆ ಊರೇ ಉಧೋ ಎನ್ನುತ್ತದೆ. ಅಲ್ಲಿಂದ ಶುರುವಾಗುತ್ತದೆ ನಾಯಕನ ಜಮಾನಾ!
ಚಿತ್ರದ ನಾಯಕ ನಿತೇಶ್ಗೆ ನಟನೆಯೊಂದನ್ನು ಬಿಟ್ಟು ಬೇರೆಲ್ಲಾ ಗೊತ್ತು. ಹಾರುತ್ತಾನೆ, ಕುಣಿಯುತ್ತಾನೆ. ಅಳುವಾಗ ನಗುತ್ತಾನೆ, ನಗುವಾಗ ಅಳುತ್ತಾನೆ ಅತ್ತಂತೆ ನಟಿಸಿ, ಪ್ರೇಕ್ಷಕರನ್ನು ನಗಿಸುತ್ತಾನೆ. ಅತ್ತು ಅತ್ತು ಸುಸ್ತಾದವರ ಕರ್ಚಿಫ್ ಆಗುತ್ತಾನೆ ಎನ್ನುವುದನ್ನು ಬಿಟ್ಟರೆ ಉಳಿದದ್ದೆಲ್ಲ ಫರ್ಫೆಕ್ಟ್ ಮಗಾ!
ನಾಯಕಿಗೆ ನಗುವುದೊಂದು ಚೆನ್ನಾಗಿ ಗೊತ್ತಿದೆ. ಉಳಿದಂತೆ ಯಾವ ಸನ್ನಿವೇಶದಲ್ಲೂ ಪಾತ್ರ ರಿಜಿಸ್ಟರ್ ಆಗುವುದಿಲ್ಲ. ನಟಿಸಲು ಅವಕಾಶ ಇದ್ದರೂ ಆಕೆ ನಿಂತಲ್ಲೇ ನಿಲ್ಲುತ್ತಾಳೆ. ಜಾಕಿ ಶರಾಫ್ ಕನ್ನಡ ಪದಕ್ಕೆ ದೊಡ್ಡ ನಮಸ್ಕಾರ. ಅವರ ಭಾಷೆಯನ್ನು ಕೇಳುವುದಕ್ಕಿಂತ ನೋಡುವುದೇ ಚೆಂದ. ಅವರಿಗಿಂತ ಎಕೆ ೪೭ ಚಿತ್ರದಲ್ಲಿನ ಓಂಪುರಿಯವರ ಕನ್ನಡವೇ ಸಾವಿರ ಪಾಲು ವಾಸಿ!
ಇಡೀ ಚಿತ್ರದ ಕೇಂದ್ರಬಿಂದು ಛಾಯಾಗ್ರಾಹಕ ನಿರಂಜನ್ ಬಾಬು. ಹೊಸ ಹೊಸ ಸಾಧ್ಯತೆಗಳನ್ನು ಅವರ ಕ್ಯಾಮರಾ ಕೈಚಳಕದಲ್ಲಿ ನೋಡಬಹುದು. ಇಳಯರಾಜ ಅವರ ಮಗನ ಸಂಗೀತದಲ್ಲಿ ಎರಡು ಹಾಡುಗಳು ಮಾತ್ರ ಕೇಳುವಂತಿದೆ. ಏಳೇಳು ಜನ್ಮಕೂ... ತನ್ಮಯ ನಾನೂ... ಹಾಡುಗಳಲ್ಲಿ ವಿಶೇಷತೆ ಎದ್ದುಕಾಣುತ್ತದೆ.