ಸುಮಾರು ೯೦ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನೃತ್ಯನಿರ್ದೇಶಕನಾಗಿ ಕಾರ್ಯನಿರ್ವಹಿಸಿ ಹೆಸರು ಮಾಡಿರುವ ಎಂ.ಆರ್. ಕಪಿಲ್ ಅವರು ಇತ್ತೀಚೆಗಷ್ಟೇ ೪ ದಶಕಗಳ ಇತಿಹಾಸ ಹೊಂದಿರುವ ಫಲಿತಾಶ ಎನ್ನುವ ಶೀರ್ಷಿಕೆಯನ್ನಿಟ್ಟುಕೊಂಡು ಹೊಸ ಚಿತ್ರವೊಂದನ್ನು ನಿರ್ದೇಶಿಸಿದ್ದರು. ಆ ಚಿತ್ರದ ಪೋಸ್ಟ್ ಪ್ರೊಡಕ್ಷನ್ಸ್ ಕಾರ್ಯ ಅಂತಿಮ ಹಂತದಲ್ಲಿರುವಾಗಲೇ ಇದೀಗ ಮತ್ತೊಂದು ಚಿತ್ರದ ನಿರ್ದೇಶನಕ್ಕೆ ಅವರು ಕೈಹಾಕಿದ್ದಾರೆ.
ಹಿರಿಯ ಸಾಹಿತಿ ಡಾ.ದೊಡ್ಡರಂಗೇಗೌಡ ಅವರ ಅಪ್ಪಟ ಅಭಿಮಾನಿಯೊಬ್ಬನ ಜೀವನದ ಕಥಾನಕವನ್ನು ಹೊಂದಿರುವ ಈ ಚಿತ್ರವು ಮುಂದಿನ ತಿಂಗಳು ಸೆಟ್ಟೇರಲು ಸಿದ್ದವಾಗುತ್ತಿದೆ. ಹಳ್ಳಿ ಸೊಗಡು ಎಂಬ ಹೆಸರಿನ ಈ ಚಿತ್ರದಲ್ಲಿ ಯುವನಟ ಆರವ್ ಸೂರ್ಯ ಹಾಗೂ ಅಕ್ಷರ ನಾಯಕ-ನಾಯಕಿಯರಾಗಿ ಕಾಣಿಸಿಕೊಳ್ಳಲಿದ್ದಾರೆ. ಮಧುಗಿರಿ ತಾ. ಕುರುಬರಹಳ್ಳಿ ಗ್ರಾಮದವರಾದ ಡಾ.ದೊಡ್ಡರಂಗೇಗೌಡ ಅವರು ತಮ್ಮ ೭೦ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಅವರಿಗೆ ಕೊಡುಗೆಯಾಗಿ ಈ ಚಿತ್ರವನ್ನು ಅರ್ಪಿಸುತ್ತಿದ್ದೇವೆ ಎಂದು ನಿರ್ದೇಶಕರಾದ ಕಪಿಲ್ ತಿಳಿಸಿದ್ದಾರೆ.
ಈ ಚಿತ್ರದ ನಾಯಕ ಒಬ್ಬ ಸಂಗೀತ ಪ್ರೇಮಿಯಾಗಿದ್ದು, ಸಾಹಿತಿ ಡಾ.ದೊಡ್ಡರಂಗೇಗೌಡ ಅವರ ಅಪ್ಪಟ ಅಭಿಮಾನಿಯಾಗಿರುತ್ತಾನೆ. ಆತ ನಂಬಿದ ಸಂಗೀತವೇ ಆತನ ಜೀವನವನ್ನು ಕಾಪಾಡುತ್ತದೆ. ಸಂಗೀತಕ್ಕೆ ಎಂಥಾ ಶಕ್ತಿ ಇದೆ ಎಂದು ಈ ಚಿತ್ರದ ಮೂಲಕ ನಿರ್ದೇಶಕರು ಹೇಳಹೊರಟಿದ್ದಾರೆ. ದೊಡ್ಡರಂಗೇಗೌಡರು ಈ ಚಿತ್ರದಲ್ಲಿ ತಮ್ಮದೇ ಪಾತ್ರವನ್ನು ನಿರ್ವಹಿಸಲಿದ್ದಾರೆ. ಕಪಿಲ್ ಅವರೇ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನೃತ್ಯ ಹಾಗೂ ನಿರ್ದೇಶನ ಮಾಡುತ್ತಿದ್ದು, ಪತ್ರಕರ್ತೆಯಾದ ಬಿ.ಎನ್.ಪಂಕಜಾ ಅವರು ಸಂಭಾಷಣೆಗಳನ್ನು ರಚಿಸಿದ್ದಾರೆ. ಬರುವ ಆ. ೨೮ಕ್ಕೆ ಈ ಚಿತ್ರದ ಮುಹೂರ್ತ ನಡೆಯಲಿದೆ. ರಾಗರಮಣ ಅವರ ಸಂಗೀತ ನಿರ್ದೇಶನವಿರುವ ಈ ಚಿತ್ರದ ಹಾಡುಗಳ ಧ್ವನಿಮುದ್ರಣ ಕಾರ್ಯ ಆ.೭ರಂದು ನೆರವೇರಲಿದೆ. ರಾಜೇಂದ್ರ ಸೂರಿ ಪ್ರೊಡಕ್ಷನ್ಸ್ ಅಡಿಯಲ್ಲಿ ಪಿ. ಸತೀಶ್ಕುಮಾರ್ ಮೆಹತಾ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಹೆಚ್.ಎನ್. ದತ್ತಾತ್ರೇಯ, ಮಹಂತೇಶ ಕೆ.ಎಸ್, ಬಿ.ಎನ್. ಸ್ವಾಮಿ ಹಾಗೂ ರಜತ್ ರಂಗನಾಥ್ ಈ ಚಿತ್ರದ ಸಹ ನಿರ್ಮಾಪಕರು.
ತಾರಾಗಣದಲ್ಲಿ ಆರವ್ ಸೂರ್ಯ, ಅಕ್ಷರಾ, ಶಂಕರ್ ಭಟ್, ಜ್ಯೋತಿ, ಡಿಂಗ್ರಿ ನಾಗರಾಜ್, ಮೈಸೂರು ರಮಾನಂದ್, ಶಂಕನಾದ ಅರವಿಂದ, ಮೈಕಲ್ ಮಧು, ಹೆಚ್.ಎನ್. ದತ್ತಾತ್ರೇಯ, ಮಾಲತೇಶ್ ಕೆ.ಎಸ್., ಹೆಚ್.ಎನ್. ಸಿದ್ದಪ್ಪ ಮತ್ತು ಡಾ. ವೆಂಕಟರಮಣ ಸೇರಿದಂತೆ ಇನ್ನೂ ಮುಂತಾದವರಿದ್ದಾರೆ.