ಭೂಮಿಕಾ ಆರ್ಟ್ಸ್ ಮೈಸೂರು ಲಾಂಛನದಲ್ಲಿ ಚಿತ್ರಕಥೆ-ಸಂಭಾಷಣೆ-ನಿರ್ದೇಶನ ಡಾ|| ಡಿ.ಎ. ಉಪಾಧ್ಯ, ರವರ ಮೂಢಾಯಣ ಚಿತ್ರದ ಡಬ್ಬಿಂಗ್ ಕಾರ್ಯ ಪೂರ್ಣಗೊಂಡಿದೆ. ಈ ಚಿತ್ರದ ಛಾಯಾಗ್ರಹಣ- ಚಂದ್ರಶೇಖರ್, ಸಂಕಲನ-ದಾಮೋದರ್, ಕಲೆ-ಮಂಜು, ನಿರ್ವಹಣಡ - ಎಸ್.ಎನ್. ಪಾಟೀಲ್, ಮೈಸೂರಿನ ಶ್ರೀ ಅಲ್ಲಮಪ್ರಭು ಲಲಿತಕಲಾ ಅಕಾಡೆಮಿಯ ಡೀನ್ ಡಾ|| ಡಿ.ಎ. ಉಪಾಧ್ಯ ರವರ ಬಾಳ ಅರ್ಬುದ ಎಂಬ ಕಾದಂಬರಿ ಆಧಾರಿತ ಚಲನಚಿತ್ರ ಮೂಢಾಯಣ. ಇದು ಮೂಢನಂಬಿಕೆಯ ವಿರುದ್ಧ ಹೋರಾಡುವ ಬಾಲಕನೊಬ್ಬನ ಕಥೆಯಾಗಿದೆ. ಬಾಲಕ ತನ್ನ ಗ್ರಾಮವನ್ನು ಮೂಢನಂಬಿಕೆ ಮುಕ್ತ ಗ್ರಾಮವಾಗಿಸುತ್ತಾನೆ. ಬಾಲಕನ ಹೋರಾಟವನ್ನು ಗುರುತಿಸಿ, ಭಾರತಸರ್ಕಾರ ಅವನಿಗೆ ರಾಷ್ಟ್ರ ಪ್ರಶಸ್ತಿ ನೀಡುತ್ತದೆ.
ಬಾಲಕ ರಾಷ್ಟ್ರಪ್ರಶಸ್ತಿಯನ್ನು ತಿರಸ್ಕರಿಸುತ್ತಾನೆ. ಕಾರಣ ತನ್ನ ಗ್ರಾಮವೊಂದು ಮೂಢನಂಬಿಕೆ ಮುಕ್ತವಾದರೆ ಸಾಲದು, ಇಡೀ ದೇಶವೇ ಮೂಢನಂಬಿಕೆ ಮುಕ್ತವಾಗಬೇಕೆಂಬುದು ಬಾಲಕನ ಹೆಬ್ಬಯಕೆಯಾಗಿರುತ್ತದೆ. ಅದಕ್ಕಾಗಿ ಸರ್ಕಾರ ಮೂಢನಂಬಿಕೆಗಳನ್ನು ತಡೆಯುವ ಕಾನೂನು ಜಾರಿಗೆ ತಂದರೆ ಮಾತ್ರ ತಾನು ರಾಷ್ಟ್ರ ಪ್ರಶಸ್ತಿ ಸ್ವೀಕರಿಸುವುದಾಗಿ ಹೇಳುತ್ತಾನೆ. ಆಗ ಸರ್ಕಾರ ಬಾಲಕನ ಬೇಡಿಕೆಗೆ ಮಣಿದು, ಮೂಢನಂಬಿಕೆಗಳನ್ನು ತಡೆಯುವ ಕಾನೂನು ಜಾರಿಗೆ ತರುತ್ತದೆ. ಆಗ ಮತ್ತೆ ಬಾಲಕನನ್ನು ಆಮಂತ್ರಿಸಿ ಅವನಿಗೆ ರಾಷ್ಟ್ರಪ್ರಶಸ್ತಿ ನೀಡುತ್ತದೆ.
ಈ ಚಿತ್ರದಲ್ಲಿ ಮಾ|| ಮನು, ಮಂಡ್ಯ ರಮೇಶ್, ಕಲ್ಯಾಣಿ, ಜೂ.ನರಸಿಂಹರಾಜು, ಭವ್ಯಶ್ರೀರೈ, ಐಶ್ವರ್ಯ, ನಾ.ಶ್ರೀನಿವಾಸ್, ಪಿ.ಎ. ಉಪಾಧ್ಯ, ರಾಧಾ, ನಾಗರತ್ನ ಮುಂತಾದವರಿದ್ದಾರೆ. ಚಿತ್ರವು ಗದಗ ಜಿಲ್ಲೆಯ ಅಬ್ಬೀಗೇರೆ ಗ್ರಾಮದಲ್ಲಿ ಸಂಪೂರ್ಣ ಚಿತ್ರೀಕರಣ ನಡೆದಿದೆ.