ಮಮತ ರಾಹುತ್ ನಾಯಕಿಯಾಗಿ ನಟಿಸುತ್ತಿರುವ, ಸಿದ್ದು ಪೂರ್ಣಚಂದ್ರ ನಿರ್ದೇಶನದ " ತಾರಿಣಿ" ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಶ್ರೀ ನಾಗಬ್ರಹ್ಮ ದೇವಸ್ಥಾನದಲ್ಲಿ ನೆರವೇರಿತು. ಶ್ರೀಗಜನಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸುರೇಶ್ ಕೊಟ್ಯಾನ್ ಚಿತ್ರಾಪು ಅವರು ನಿರ್ಮಿಸುತ್ತಿರುವ ಈ ಚಿತ್ರದ ಮೊದಲ ಸನ್ನಿವೇಶಕ್ಕೆ ಗಂಡಸಿ ಸದಾನಂದಸ್ವಾಮಿ ಆರಂಭಫಲಕ ತೋರಿದರು. ನಟ ಪ್ರಣಯಮೂರ್ತಿ ಕ್ಯಾಮೆರಾ ಚಾಲನೆ ಮಾಡಿದರು.
"ತಾರಿಣಿ" ಮಹಿಳಾ ಪ್ರಧಾನ ಚಿತ್ರವಾಗಿದೆ. ಹಲವು ಪ್ರಶಸ್ತಿಗಳನ್ನು ಗಳಿಸಿ, ರಾಷ್ಟ್ರ ಹಾಗೂ ರಾಜ್ಯಮಟ್ಟದಲ್ಲಿ ಖ್ಯಾತಿ ಗಳಿಸಿದ್ದ "ದಾರಿ ಯಾವುದಯ್ಯ ವೈಕುಂಠಕೆ" ಚಿತ್ರ ಸೇರಿದಂತೆ ಅನೇಕ ಸದಭಿರುಚಿ ಚಿತ್ರಗಳನ್ನು ನಿರ್ದೇಶಿಸಿರುವ ಸಿದ್ದು ಪೂರ್ಣಚಂದ್ರ "ತಾರಿಣಿ" ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ನಿರ್ದೇಶಕರೆ ಬರೆದಿದ್ದಾರೆ. ರಾಜು ಹೆಮ್ಮಿಗೆಪುರ ಛಾಯಾಗ್ರಹಣ, ದೀಪಕ್ ಸಿ.ಎಸ್ ಸಂಕಲನ, ಬಸವರಾಜ್ ಆಚಾರ್ಯ ಕಲಾ ನಿರ್ದೇಶನ, ನಾಗರತ್ನ ಕೆ.ಹೆಚ್ ವಸ್ತ್ರಾಲಂಕಾರ ಹಾಗೂ ಎಸ್ ರಘುನಾಥ್ ರಾವ್ ಅವರ ಸ್ಥಿರಚಿತ್ರಣ ಈ ಚಿತ್ರಕ್ಕಿದೆ.
ಈಗಾಗಲೇ ಚಿತ್ರೀಕರಣ ಆರಂಭವಾಗಿದ್ದು, ಬೆಂಗಳೂರಿನಲ್ಲೇ ಹೆಚ್ಚಿನ ಚಿತ್ರೀಕರಣ ನಡೆಯಲಿದೆ.
"ತಾರಿಣಿ" ಯಾಗಿ ಮಮತ ರಾಹುತ್ ನಟಿಸುತ್ತಿದ್ದು, ನಾಯಕನಾಗಿ ರೋಹಿತ್ ಅಭಿನಯಿಸುತ್ತಿದ್ದಾರೆ. ಭವಾನಿ ಪ್ರಕಾಶ್, ಸುಧಾ ಪ್ರಸನ್ನ, ಡಾ||ಸುರೇಶ್ ಚಿತ್ರಾಪು, ಪ್ರಮಿಳಾ ಸುಬ್ರಹ್ಮಣ್ಯಂ, ವಿಜಯಲಕ್ಷ್ಮಿ, ದೀಪಿಕಾಗೌಡ, ಸನ್ನಿ, ಕುಮಾರ ಬೇಂದ್ರೆ, ತೇಜಸ್ವಿನಿ, ರಾಜು ಕಲ್ಕುಣಿ, ಶ್ರೀಸಾಯಿ ಮಂಜು, ಸುಚಿತ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.