ಹೆಬ್ಬೆಟ್ ರಾಮಕ್ಕ ಖ್ಯಾತಿಯ ನಿರ್ದೇಶಕ ಎನ್.ಆರ್. ನಂಜುಂಡೇಗೌಡ ಅವರ ಸಾರಥ್ಯದ ಕಾಸಿನಸರ ಚಿತ್ರ ಮಾ.3 ರ ಶುಕ್ರವಾರ ರಾಜ್ಯಾದ್ಯಂತ ತೆರೆಕಾಣುತ್ತಿದೆ. ವಿಜಯ ರಾಘವೇಂದ್ರ ಅವರು ಒಬ್ಬ ಪ್ರಗತಿಪರ ರೈತನಾಗಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ಹರ್ಷಿಕಾ ಪೂಣಚ್ಛ ನಾಯಕಿಯಾಗಿ ನಟಿಸಿದ್ದಾರೆ.
ಗ್ರಾಮೀಣ ಸೊಗಡಿನಲ್ಲಿ ನಡೆಯುವ ಕೌಟುಂಬಿಕ ಸಂಬಂಧಗಳ ಸುತ್ತ ಹೆಣೆಯಲಾದ ಕಥಾಹಂದರ ಇರುವ ಈ ಚಿತ್ರದಲ್ಲಿ ಸಾವಯುವ ಕೃಷಿಯ ಬಗ್ಗೆ ಹೇಳಲಾಗಿದೆ. ಗ್ರಾಮೀಣ ಭಾಗದಿಂದಲೇ ಬಂದ ದೊಡ್ಡನಾಗಯ್ಯ ಅವರು ಈ ಚಿತ್ರ ನಿರ್ಮಾಣ ಮಾಡಿದ್ದಾರೆ.
ನಾಯಕ ವಿಜಯ ವಿಜಯ್ ರಾಘವೇಂದ್ರ ಮಾತನಾಡಿ, ಈ ಸಿನಿಮಾ ಹಲವಾರು ಅಂಶಗಳಿಂದ ಜನರಿಗೆ ಇಷ್ಟವಾಗುತ್ತದೆ. ಈ ಥರದ ಬದುಕೂ ಇದೆ, ಇದರ ಮೇಲೆ ನಮ್ಮ ಜೀವನ ಅವಲಂಬಿತವಾಗಿದೆ ಎಂದು ನಾಡಿನ ಜನರಿಗೆ ಹೇಳುವ ಚಿತ್ರ. ಈ ವಿಷಯವನ್ನು ನಿರ್ದೇಶಕ ರು ಎಮೋಷನಲ್ ಕಥೆಯೊಂದಿಗೆ ಹೇಳಹೊರಟಿದ್ದಾರೆ. ಕಾಸಿನಸರ ತುಂಬಾ ತೂಕವಾದ ಹೆಸರು, ಅದರ ಹಿಂದೆ ದೊಡ್ಡ ಶ್ರಮವಿದೆ. ಇಲ್ಲಿ ಕಾಸಿನಸರ ಎನ್ನುವುದು ಬರೀ ಒಡವೆಯಲ್ಲ. ಅದಕ್ಕೊಂದು ಒಳಾರ್ಥವಿದೆ. ಶ್ರೀಧರ್ ಸಂಭ್ರಮ್ ಅವರು ಭರಣಿಯ ಮಳೆ ಹೊಯ್ದು ಹಾಡನ್ನು ಅದ್ಭುತವಾಗಿ ಮಾಡಿದ್ದಾರೆ. ವೇಣು ಚಿತ್ರವನ್ನು ಅಷ್ಟೇ ಅದ್ಭುತವಾಗಿ ಸೆರೆಹಿಡಿದಿದ್ದಾರೆ. ಚಿತ್ರದಲ್ಲಿ ಸುಂದರೇಶ ಎಂಬ ವ್ಯವಸಾಯದ ಮೇಲೆ ಭರವಸೆ ಇಟ್ಟಿರುವ ರೈತ ಹೋರಾಟಗಾರನಾಗಿ ನಟಿಸಿದ್ದೇನೆ ಎಂದರು.
ನಾಯಕಿ ಹರ್ಷಿಕಾ ಪೂಣಚ್ಛ ಮಾತನಾಡಿ, ಮೂರು ವರ್ಷದ ನಂತರ ನನ್ನ ಅಭಿನಯದ ಸಿನಿಮಾ ತೆರೆಗೆ ಬರ್ತಿದೆ. ಈ ಚಿತ್ರದಲ್ಲಿ ನಾನು ಕೃಷಿ ವಿದ್ಯಾರ್ಥಿನಿ ಸಂಪಿಗೆಯ ಪಾತ್ರ ಮಾಡಿದ್ದೇನೆ. ಗ್ರಾಜುಯೇಟ್ ಆದರೂ ಗಂಡನಿಗೆ ಸಪೋರ್ಟ್ ಆಗಿ ನಿಲ್ಲುವ ಪಾತ್ರ. ಅಭಿನಯಕ್ಕೆ ಸಾಕಷ್ಟು ಪ್ರಾಮುಖ್ಯತೆ ಇರೋ ಪಾತ್ರ ಎಂದರು.
ನಿರ್ದೇಶಕ ನಂಜುಂಡೇಗೌಡ ಮಾತನಾಡಿ, ಇಲ್ಲಿ ಕಾಸಿನ ಸರಕ್ಕೆ ಅದರದೇ ಮೌಲ್ಯ, ಪರಂಪರೆ, ಸಂಪ್ರದಾಯವಿದೆ. ಅದೇ ರೀತಿ ಕೃಷಿಗೂ ತನ್ನದೇ ಆದ ಪರಂಪರೆ ಸಂಪ್ರದಾಯವಿದೆ. ಇದೆ ಶುಕ್ರವಾರ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಸಾಂಪ್ರದಾಯಿಕ, ಸಾವಯುವ ಕೃಷಿಯನ್ನು ಬಿಟ್ಟರೆ ಮುಂದೆ ನಮಗೆಲ್ಲ ಬಹುದೊಡ್ಡ ಅಪಾಯ ಕಾದಿದೆ ಎನ್ನುವುದು ಈಗಾಗಲೆ ಸಾಬೀತಾಗಿದೆ. ನಮ್ಮ ಮಣ್ಣನ್ನು ರಕ್ಷಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ನಿರ್ಮಾಪಕರಾದ ದೊಡ್ಡನಾಗಯ್ಯ ಮಾತನಾಡಿ, ನಾನೂ ಒಬ್ಬ ರೈತನ ಮಗ. ಇಂದಿನ ದಿನಗಳಲ್ಲಿ ಕೌಟುಂಬಿಕ ಸಂಬಂಧಗಳು ದೂರವಾಗುತ್ತಿವೆ. ಜನ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಇವುಗಳ ಮಹತ್ವವನ್ನು ಈ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಿದ್ದೇವೆ ಎಂದರು. ಸಂಗೀತ ನಿರ್ದೇಶಕ ಶ್ರೀಧರ್ ವಿ.ಸಂಭ್ರಮ ಹಾಡು, ಸಂಗೀತದ ಕುರಿತಂತೆ ಮಾತನಾಡಿದರು.