ಭಾರತೀಯ ಚಿತ್ರರಂಗವೇ ಕನ್ನಡ ಚಿತ್ರರಂಗದ ಕಡೆಗೆ ತಿರುಗಿ ನೋಡುವಂತೆ ಮಾಡಿದ ಚಿತ್ರ ಕಬ್ಜ ಇದೀಗ 25 ದಿನಗಳ ಯಶಸ್ವಿ ಪ್ರದರ್ಶನ ಕಂಡಿದೆ. ಇದೇ ಸಂದರ್ಭದಲ್ಲಿ ನಿರ್ಮಾಪಕ, ನಿರ್ದೇಶಕ ಆರ್.ಚಂದ್ರು ಅವರು “ಕಬ್ಜ-2” ಚಿತ್ರವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.
ಕನ್ನಡ, ತೆಲುಗು,ತಮಿಳು, ಮಲೆಯಾಳಂ ಹಾಗು ಹಿಂದಿ ಭಾಷೆಯಲ್ಲಿ ಕಬ್ಜ-2 ಚಿತ್ರದ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಈ ಬಾರಿ ಮತ್ತಷ್ಟು ಅದ್ದೂರಿಯಾಗಿ, ವೈಭವಯುತವಾಗಿ ಚಿತ್ರವನ್ನು ನಿರೂಪಿಸುವುದಾಗಿ ಚಂದ್ರು ಘೋಷಿಸಿದ್ದಾರೆ.
ಖಾಲಿ ಕುರ್ಚಿಯ ಪಕ್ಕದಲ್ಲಿ ನಿಂತಿರುವ ಬಂದೂಕಿನ ಪೋಸ್ಟರ್ ಗಮನ ಸೆಳೆದಿದೆ. ಖಾಲಿ ಖುರ್ಚಿಯಲ್ಲಿ ಯಾರು ಕುಳಿತುಕೊಂಡು ಭೂಗತಲೋಕವನ್ನು ಮುಂದೆ ಯಾರು ಆಳುತ್ತಾರೆ ಎನ್ನುವುದನ್ನು ಕಬ್ಜ -2 ಚಿತ್ರದ ಮೂಲಕ ಆರ್. ಚಂದ್ರು ಅವರು ಹೇಳಹೊರಟಿದ್ದಾರೆ.
“ಕಬ್ಜ”ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಉಪೇಂದ್ರ, ಸುದೀಪ್ ಅವರಿಬ್ಬರೂ ಮುಖಾಮುಖಿಯಾದ ಸಮಯದಲ್ಲಿ ಶಿವರಾಜ್ಕುಮಾರ್ ಎಂಟ್ರಿಯಾಗುವ ಕುತೂಹಲದೊಂದಿಗೆ ಚಿತ್ರಕ್ಕೆ ತೆರೆ ಎಳೆಯಲಾಗಿತ್ತು. ಇದೀಗ ಮತ್ತೆ ಅಲ್ಲಿಂದ ಕಥೆ ಪಪ್ರಾರಂಭವಾಗಿ ನಾನಾ ತಿರುವು ಪಡೆದುಕೊಳ್ಳಲಿದೆ ಎಂದು ಹೇಳಿದರು. ನಿರ್ದೇಶಕ, ನಿರ್ಮಾಪಕ ಆರ್.ಚಂದ್ರು.
ಮಾಜಿ ಸಚಿವ ಎಚ್.ಎಂ ರೇವಣ್ಣ ಮತ್ತು ಸಮಾಜಸೇವಕ ರಾಮಚಂದ್ರೇಗೌಡ. ಅವರ ಸಮ್ಮುಖದಲ್ಲಿ ಕಬ್ಜ-2 ಚಿತ್ರದ ಪೋಸ್ಟರ್ ಅನಾವರಣಗೊಳಿಸಿದ ಚಂದ್ರು, ಶೀಘ್ರದಲ್ಲಿಯೇ ಚಿತ್ರದ ಚಿತ್ರೀಕರಣ ಆರಂಭಿಸಲಾಗುವುದು. ಈ ಬಾರಿ ಬೇರೆ ಬೇರೆ ಭಾಷೆಯ ನಟರು ಚಿತ್ರದಲ್ಲಿ ಇರಲಿದ್ದಾರೆ. ಮೊದಲ ಭಾಗಕ್ಕಿಂತ ಎರಡನೇ ಭಾಗ ಮತ್ತಷ್ಟು ಅದ್ದೂರಿಯಾಗಿ ಮೂಡಿಬರಲಿದೆ. ಇದಕ್ಕಾಗಿ ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ ಎಂದಿದ್ದಾರೆ. ಅಲ್ಲದೆ ಕಬ್ಜ-2 ಚಿತ್ರದಲ್ಲಿ ಯಾವ ಯಾವ ಭಾಷೆಯ, ಯಾವೆಲ್ಲಾ ನಟರು ಇರಲಿದ್ದಾರೆ ಎನ್ನುವುದನ್ನು ಕಾದುನೋಡಿ, ಈ ಬಾರಿ ಪ್ಯಾನ್ ಇಂಡಿಯಾ ಅಲ್ಲ. ಪ್ಯಾನ್ ವಲ್ಡ್ ಸಿನಿಮಾ ಮಾಡುತ್ತಿದ್ದೇನೆ ಎನ್ನುವ ಮೂಲಕ ಪ್ರೇಕ್ಷಕರಲ್ಲಿ ದೊಡ್ಡ ಮಟ್ಟದ ಕುತೂಹಲ ಹುಟ್ಟುಹಾಕಿದ್ದಾರೆ.
ತಾಜ್ ಮಹಲ್ ಚಿತ್ರ ಮಾಡುವಾಗ ತಾಯಿಯಿಂದ ನೂರು ರೂಪಾಯಿ ಪಡೆದು ಬೆಂಗಳೂರಿಗೆ ಬಂದ ನಾನು ಇಂದು ನೂರು ಕೋಟಿ ಚಿತ್ರ ನಿರ್ಮಾಣ ಮಾಡುವ ಹಂತಕ್ಕೆ ಬಂದಿದ್ದೇನೆ ಇದಕ್ಕೆ ಎಲ್ಲರ ಸಹಕಾರ ಕಾರಣ ಎಂದರು.
ಕಬ್ಜ ಚಿತ್ರ ಮೊದಲೇ ಹೇಳಿದ ಹಾಗೆ ತಂತ್ರಜ್ಞರ ಸಿನಿಮಾ. ಈ ಹಿನ್ನೆಲೆಯಲ್ಲಿ ಚಿತ್ರಕ್ಕಾಗಿ ದುಡಿದವರಿಗೆ ಫಲಕ ನೀಡುವ ಮೂಲಕ ಚಿತ್ರಕ್ಕೆ ಕೆಲಸ ಮಾಡಿದ ಪ್ರತಿಯೊಬ್ಬರನ್ನು ಆರ್.ಚಂದ್ರು ಗೌರವಿಸಿದರು.
ಇದೇ ವೇಳೆ ಚಿತ್ರದ 25ನೇ ದಿನದ ಸಂಭ್ರಮವನ್ನು ಚಿತ್ರತಂಡದೊಂದಿಗೆ ಹಂಚಿಕೊಂಡರು. ಈ ವೇಳೆ ಚಂದ್ರು ಕುಟುಂಬ, ಕಲಾವಿದರಾದ ಬಿ.ಸುರೇಶ್, ನಿನಾಸಂ ಅಶ್ವಥ್, ಸಹ ನಿರ್ದೇಶಕರಾದ ಮಂಜುನಾಥ್ ಮೌರ್ಯ, ಶಿವು ಹಿರೇಮಠ್ ಸೇರಿ ಇಡೀ ಚಿತ್ರತಂಡ ಸಂತಸದ ಕ್ಷಣದಲ್ಲಿ ಭಾಗಿಯಾಯಿತು.