ಹಳ್ಳಿ ರಾಜಕೀಯದ ಹಿನ್ನೆಲೆಯಲ್ಲಿ ಈಗಿನ ಯುವಕರಿಗೆ ಸಂದೇಶ ಹೇಳುವಂತಹ ಮತ್ತೊಂದು ಚಿತ್ರ ಈಗ ಬಿಡುಗಡೆಗೆ ಸಿದ್ದವಾಗಿದೆ. ಛೇರ್ಮನ್ ಎಂಬ ಹೆಸರಿನ ಈ ಚಿತ್ರವನ್ನು ಬಸವರಾಜ್ ಹಿರೇಮಠ್ ನಿರ್ದೇಶಿಸಿದ್ದಾರೆ. ಈ ಹಿಂದೆ ಅಮರೇಶ್ವರ ಮಹಾತ್ಮೆ ಎಂಬ ಚಿತ್ರವನ್ನು ನಿರ್ಮಾಣ ಮಾಡಿದ್ದ ಬಸವರಾಜ್ ಹಿರೇಮಠ್ ಅವರು ಇದೇ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ರಾಯಚೂರು, ಬೆಂಗಳೂರು, ಮಂಗಳೂರು ಹಾಗೂ ಹುಬ್ಬಳ್ಳಿ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದ್ದು, ಕಳೆದ ವಾರವಷ್ಟೇ ಈ ಚಿತ್ರದ ಟೈಟಲ್ ಸಾಂಗ್ ಅನ್ನು ಮರಿ ಟೈಗರ್ ಖ್ಯಾತಿಯ ವಿನೋದ್ ಪ್ರಭಾಕರ್ ರಿಲೀಸ್ ಮಾಡಿದರು. ಯಕ್ಕಾ ನಿನ್ನ ಮಗಳು ಚಿಕ್ಕವಳಾಗಲ್ವಾ ಖ್ಯಾತಿಯ ಶಿವು ಬೆರಗಿ ಈ ಚಿತ್ರಕ್ಕೆ ೪ ಹಾಡುಗಳನ್ನು ರಚಿಸಿದ್ದಾರೆ.
ದಾಕ್ಷಾಯಿಣಿ ಮೂವಿ ಮೇಕರ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಎಸ್. ವಿಜಯ್ ಛಾಯಾಗ್ರಹಣ, ಶಿವಪರ್ವ ಸಂಗೀತ, ಹಲಗೂರು ವೆಂಕಟೇಶ್ ಸಂಭಾಷಣೆ, ಶಿವು ಬೆರಗಿ ಸಾಹಿತ್ಯ, ಅಕುಲ್ ನೃತ್ಯ ನಿರ್ದೇಶನ, ರಘುನಾಥ್ ಎಲ್. ಸಂಕಲನವಿದೆ. ಮನು, ರಾಜಾಶ್ರೀ, ಅನು, ಮುತ್ತು, ಬಾಲರಾಜ್ ವಾಡಿ, ಕುಶನ್ ಗೌಡ, ಗವಿ ಕನಕಗಿರಿ, ಶಿವಕುಮಾರ್ ಆರಾಧ್ಯ, ಆಶಾನಾಯಕ್, ಲಿಖಿತೇಶ್, ಪ್ರೇಮ, ಬಸರಾಜ್ ತಿರ್ಲಾಪುರ್, ಮಾಸ್ಟರ್ ಮಂಜುನಾಥ್, ಮುಂತಾದವರ ತಾರಾಬಳಗವಿದೆ.