`ಅಮರ್` ಚಿತ್ರಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಥ್
Posted date: 09 Wed, Jan 2019 – 10:25:59 AM

 ರೆಬೆಲ್‌ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ನಾಯಕರಾಗಿ ನಟಿಸುತ್ತಿರುವ ’ಅಮರ್’ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸುವ ಮೂಲಕ ಸಾಥ್ ನೀಡಿದ್ದಾರೆ. ದರ್ಶನ್, ಅಭಿಷೇಕ್ ಅಂಬರೀಶ್, ದೇವರಾಜ್ ಹಾಗೂ ನಿರೂಪ್ ಭಂಡಾರಿ ಅಭಿನಯದಲ್ಲಿ ಹಾಡೊಂದರ ಚಿತ್ರೀಕರಣ ನಗರದ ದಿ ಕ್ಲಬ್‌ನಲ್ಲಿ ನಡೆಯಿತು. ಧನಂಜಯ್ ಈ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಹಾಡಿನ ಚಿತ್ರೀಕರಣವಲ್ಲದೆ ಮಾತಿನ ಭಾಗದ ಚಿತ್ರೀಕರಣದಲ್ಲೂ ದರ್ಶನ್ ಅವರು ಅಭಿನಯಿಸಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣ, ರಾಜರಾಜೇಶ್ವರಿ ನಗರ ಮುಂತಾದ ಕಡೆ ಮಾತಿನ ಬಾಗದ ಚಿತ್ರೀಕರಣ ನಡೆದಿದೆ. ನಿರೂಪ್ ಭಂಡಾರಿ ಸಹ ಚಿತ್ರದ ವಿಶೇಷ ಪತ್ರದಲ್ಲಿ ಅಭಿನಯಿಸಿದ್ದಾರೆ.

ಬೆಂಗಳೂರು, ಮೈಸೂರು, ಮಡಿಕೇರಿ, ಮಂಗಳೂರು, ಮಣಿಪಾಲ, ಊಟಿ, ಕೇರಳ, ಕೊಯಮತ್ತೂರು, ಹಾಗೂ ಸ್ವಿಜರ್ ಲ್ಯಾಂಡ್‌ನಲ್ಲೂ ಚಿತ್ರದ ಚಿತ್ರೀಕರಣವಾಗಿದೆ. ಫ಼ೆಭ್ರವರಿ ೧೧ರಿಂದ ಸಿಂಗಾಪುರದಲ್ಲಿ ಚಿತ್ರೀಕರಣ ನಡೆಯಲಿದೆ.  ಅತಿಹೆಚ್ಚು ಲೊಕೇಶನ್‌ಗಳಲ್ಲಿ ಚಿತ್ರೀಕರಣಗೊಳ್ಳುತ್ತಿರುವ ಚಿತ್ರ ಎಂಬ ಹೆಗ್ಗಳಿಕೆ ಪಡೆದಿದೆ. ಈ ಚಿತ್ರವನ್ನು ಸಂದೇಶ್ ಪ್ರೊಡಕ್ಷನ್ಸ್  ಅಡಿಯಲ್ಲಿ ಸಂದೇಶ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ ಅಂಬರೀಶ್ ಅಭಿನಯದ ಹಲವಾರು ಚಿತ್ರಗಳನ್ನು ನಿರ್ಮಿಸಿದ್ದ  ಸಂದೇಶ ನಾಗರಾಜ್ ಅವರು ಈಗ ಅವರ ಪುತ್ರನ ಸಿನಿಮಾಗೆ ಹಣ ಹೂಡುತ್ತಿದ್ದಾರೆ.

ನಾಗಶೇಖರ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನವಿದೆ. ಸತ್ಯ ಹೆಗಡೆ ಛಾಯಾಗ್ರಹಣ, ಹರ್ಷ ಸಂಕಲನ, ಧನಂಜಯ್, ಇಮ್ರಾನ್, ಕಲೈ ನೃತ್ಯ ನಿರ್ದೇಶನ ಹಾಗೂ ರವಿವರ್ಮ, ಥ್ರಿಲ್ಲರ್ ಮಂಜು, ಅಂಬು ಅರಿವು ಅವರ ಸಾಹಸ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಅಭಿಷೇಕ್ ಅಂಬರೀಶ್, ತಾನ್ಯಾ ಹೋಪ್, ಸುಧಾರಾಣಿ, ದೇವರಾಜ್, ದೀಪಕ್ ಶೆಟ್ಟಿ, ಅರುಣ್ ಸಾಗರ್, ಚಿಕ್ಕಣ್ಣ, ಸಾಧುಕೋಕಿಲ, ನಿರೂಪ್ ಭಂಡಾರಿ ಮುಂತಾದವರಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.

GALLERY
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed