ಎಂದಿನಂತೆ ಶಿಸ್ತಿನ ಸಿಪಾಯಿ ನಿರ್ದೇಶಕ ಎಸ್. ನಾರಾಯಣ್ ’ಶೈಲೂ’ ಚಿತ್ರವನ್ನು ಅಂದುಕೊಂಡ ಹಾಗೆ ಚಿತ್ರೀಕರಣವನ್ನು ಮುಗಿಸಿ ಮಾತಿನ ಮನೆಯಲ್ಲಿ ಚಿತ್ರವನ್ನು ತೊಡಗಿಸಿದ್ದಾರೆ. ಈ ಚಿತ್ರವು ಸ್ಕೈಲೈನ್ ಸ್ಟುಡಿಯೋದಲ್ಲಿ ಕೆಲವು ದಿವಸಗಳಿಂದ ಮಾತಿನ ಭಾಗದ ರೆಕಾರ್ಡಿಂಗ್ ಮಾಡುತ್ತಿದೆ. ೧೦ ವರ್ಷಗಳ ಬಳಿಕ ’ಜಮೀನ್ದಾರ’ ನಂತರ ಕೆ. ಮಂಜು ಅವರ ನಿರ್ಮಾಣದಲ್ಲಿ ನಿರ್ದೇಶಕರು ರಿಮೇಕ್ ಚಿತ್ರಕ್ಕೂ ಕನ್ನಡದ ಸೊಬಗು ಸೌಂದರ್ಯವನ್ನು ತಂದಿದ್ದಾರೆ. ’ಶೈಲೂ’ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಮಲಯಾಳಿ ಹುಡುಗಿ ಭಾಮಾ ಜೊತೆಗೆ ರಂಗಾಯಣ ರಘು ಹಾಗೂ ಸುಚೇಂದ್ರ ಪ್ರಸಾದ್ ಸಹ ಮುಖ್ಯ ಭೂಮಿಕೆಯಲ್ಲಿ ಇರುವ ಚಿತ್ರ ಮುನ್ನಾರ್ ಅಂತಹ ಪ್ರಕೃತಿ ಸೌಂದರ್ಯದ ಮಡಿಲಲ್ಲಿ ಹತ್ತಾರು ದಿವಸ ಚಿತ್ರೀಕರಣವನ್ನು ಮುಗಿಸಿ ಇಡೀ ಚಿತ್ರಕ್ಕೆ ಒಂದು ವಿಶೇಷ ಛಾಪು ಮೂಡುವಂತೆ ಮಾಡಲಾಗಿದೆ. ಬೆಂಗಳೂರು, ಮೈಸೂರು, ಗೋಪಾಲಸ್ವಾಮಿ ಬೆಟ್ಟ ಹಾಗೂ ಇನ್ನಿತರ ಸ್ಥಳಗಳಲ್ಲಿ ಚಿತ್ರೀಕರಣ ಮಾಡಿರುವ ’ಶೈಲೂ’ ನಿರ್ಮಾಪಕ ಕೆ. ಮಂಜು ಅವರ ಹಲವು ಸಿನಿಮಾಗಳ ಸಾಲಿನಲ್ಲಿ ಪ್ರಮುಖವಾದದ್ದು.
ನಾಯಕ ನಟ ಗಣೇಶ್ ಈ ಚಿತ್ರಕ್ಕಾಗಿ ತೂಕ ಇಳಿಸಿಕೊಳ್ಳವುದೇ ಅಲ್ಲದೆ ತಮ್ಮ ಮೈ ಬಣ್ಣವನ್ನೂ ಕೂಡ ಬದಲಾಯಿಸಿಕೊಂಡು ನಾರಾಯಣ್ ಅವರ ಗರಡಿಯಲ್ಲಿ ಹೆಮ್ಮೆಯಿಂದ ಅಭಿನಯಿಸುತ್ತಿರುವುದಾಗಿ ಹೇಳಿಕೊಳ್ಳುತ್ತಾರೆ.
ಜಾಸ್ಸಿ ಗಿಫ್ಟ್ ಅವರ ಸಂಗೀತ, ಜಗದೀಶ್ ವಾಲಿ ಅವರ ಛಾಯಾಗ್ರಹಣ ಇರುವ ’ಶೈಲೂ’ ಚಿತ್ರಕ್ಕೆ ನಿರ್ದೇಶಕ ಎಸ್. ನಾರಾಯಣ್, ಕವಿರಾಜ್, ನಾಗೇಂದ್ರ ಪ್ರಸಾದ್ ಗೀತ ಸಾಹಿತ್ಯವನ್ನು ರಚಿಸಿದ್ದಾರೆ.
ವಿಠ್ಠಲ, ಯತಿರಾಜ್ ಹಾಗೂ ಗಜೇಂದ್ರ ಸಹ ತಾರಾಗಣದಲ್ಲಿದ್ದಾರೆ.