ಕನ್ನಡದಲ್ಲಿ ಸದಭಿರುಚಿ ಚಿತ್ರಗಳನ್ನು ನಿರ್ಮಾಣ ಮಾಡುತ್ತಿರುವ ಸಂಸ್ಥೆಗಳಲ್ಲಿ ಉಷಾಕಿರಣ್ ಮೂವೀಸ್ ಕೂಡ ಒಂದು. ಆ ಸಂಸ್ಥೆಯ ಲಾಂಛನದಲ್ಲಿ ಖ್ಯಾತ ನಿರ್ಮಾಪಕ ರಾಮೋಜಿರಾವ್ ನಿರ್ಮಿಸಿರುವ `ಸವಾರಿ’ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ತೆಲುಗಿನಲ್ಲಿ ಜನಪ್ರಿಯವಾದ ಚಿತ್ರ `ಗಮ್ಯಂ`. ಈ ಚಿತ್ರ ಕನ್ನಡದಲ್ಲಿ `ಸವಾರಿ’ ಹೆಸರಿನಿಂದ ನಿರ್ಮಾಣವಾಗಿದ್ದು ನೋಡುಗರನ್ನು ರಂಜಿಸಲಿದೆ. ಈ ಸವಾರಿ ಬಹುಬಾಷಾ ವಿಹಾರಿ ಕೂಡ. ತೆಲುಗು, ಕನ್ನಡವಷ್ಟೇ ಅಲ್ಲದ್ದೇ ದೇಶದ ಇತರ ಭಾಷೆಗಳಲ್ಲೂ ಈ ಚಿತ್ರ ನಿರ್ಮಾಣವಾಗುತ್ತಿದೆ.
ವನದೇವತೆಯ ತವರಿನಂತಿರುವ ಸಕಲೇಶಪುರ, ಕುದುರೆ ಮುಖ ಹಾಗೂ ಆಸ್ತಿಕರ ಸ್ವರ್ಗವಾಗಿರುವ ಕುಕ್ಕೆ ಸುಬ್ರಹ್ಮಣ್ಯ, ಯಡಿಯೂರು ಸೇರಿದಂತೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ಸವಾರಿಯ ಚಿತ್ರೀಕರಣ ನಡೆದಿದೆ. ಮಣಿಕಾಂತ್ ಕದ್ರಿ ಸಂಗೀತದಲ್ಲಿ ಮೂಡಿ ಬಂದಿರುವ ಚಿತ್ರದ ಹಾಡುಗಳು ಜನಪ್ರಿಯವಾಗಿದೆ.
ಕಳೆದ ಸಾಲಿನ ರಾಷ್ಟ್ರ ಪ್ರಶಸ್ತಿ ಪಡೆದ ಕಿರುಚಿತ್ರ ಮಲಯಾಳಂನ `ಆದಿಯಂ’. ಈ ಕಿರುಚಿತ್ರದ ನಿರ್ದೇಶಕರಾದ ಜೇಕಬ್ ವರ್ಗೀಸ್ `ಸವಾರಿ’ಯನ್ನು ನಿರ್ದೇಶಿಸಿದ್ದಾರೆ. ನಾಗೇಂದ್ರಪ್ರಸಾದ್, ಕವಿರಾಜ್ ಬರೆದ ಐದುಗೀತೆಗಳಿಗೆ ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದಾರೆ. ವೇಲ್ ರಾಜ್ ಛಾಯಾಗ್ರಹಣ, ಎ.ಶ್ರೀಕರ್ ಪ್ರಸಾದ್ ಸಂಕಲನ, ಸುನೀಲ್ ರಾಜ್, ಹೇಮಂತ್ ಸಹ ನಿರ್ದೇಶನ, ಅನಿಲ್ ನಿರ್ಮಾಣ ನಿರ್ವಹಣೆ, ಬಾಬಿ, ರೇಖಾ, ರಘು ನೃತ್ಯ, ಕೌರವ ವೆಂಕಟೇಶ್, ಡಿಫ಼ರೆಂಟ್ ಡ್ಯಾನಿ, ಗಣೇಶ್ ಸಾಹಸವಿರುವ ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ನಾಯಕನ ಪಾತ್ರ ನಿರ್ವಹಿಸಿದ್ದಾರೆ. ರಘು ಮುಖರ್ಜಿ, ಕಮಲಿನಿ ಮುಖರ್ಜಿ, ಸಾಧು ಕೋಕಿಲಾ, ಪವಿತ್ರಾಲೋಕೇಶ್, ಸಿ.ಆರ್.ಸಿಂಹ, ಮಿಲೀನ್ ಗುನಾಂಜಿ, ಸುಮನ್ರಂಗನಾಥ್, ದತ್ತಣ್ಣ ಮುಂತಾದವರು ಚಿತ್ರದ ತಾರಾಬಳಗದಲಿದ್ದಾರೆ. ಈ ಚಿತ್ರಕ್ಕೆ ಉಷಾಕಿರಣ್ ಮೂವೀಸ್ನೊಂದಿಗೆ ಅರ್ಕಾ ಮೀಡಿಯಾ ಸಂಸ್ಥೆಯ ಸಹ ನಿರ್ಮಾಣವಿದೆ.