ಯುಗಾದಿ ಹಬ್ಬದ ಕೊಡುಗೆಯಾಗಿ ಇದೇ ೨೭ ರಂದು ಮಾಲಾಶ್ರೀ ಅಭಿನಯದ ಅದ್ದೂರಿ ಚಿತ್ರ ಕಿರಣ್ ಬೇಡಿ ಬಿಡುಗಡೆ ಮಾಡುತ್ತಿರುವ ನಿರ್ಮಾಪಕ ರಾಮು, ಬರುವವಾರ ಮತ್ತೊಂದು ಹೊಸ ಚಿತ್ರ ಆರಂಭಿಸಲಿದ್ದಾರೆ.
ರಾಮು ಎಂಟರ್ಪ್ರೈಸಸ್ ಲಾಂಛನದಲ್ಲಿ ಉಪೇಂದ್ರ ಅಭಿನಯಿಸುವ ಮತ್ತೊಂದು ಅದ್ದೂರಿ ಚಿತ್ರ ರಜನಿ ಏಪ್ರಿಲ್ ೩ ರಿಂದ ಚಿತ್ರೀಕರಣ ಆರಂಭಿಸಲಿದೆ.
ರಾಮು ನಿರ್ಮಾಣದ ೨೭ನೇ ಚಿತ್ರ ಇದಾಗಲಿದ್ದು, ಮೈಸೂರು ಹಾಗೂ ಬೆಂಗಳೂರು ಸುತ್ತಮುತ್ತ ಸತತ ೬೦ ದಿನಗಳ ಕಾಲ ಚಿತ್ರೀಕರಣ ನಡೆಯಲಿದ್ದು, ಒಂದೇ ಹಂತದಲ್ಲಿ ಮುಕ್ತಾಯಗೊಳ್ಳಲಿದೆ ಎಂದು ನಿರ್ಮಾಪಕ ರಾಮು ತಿಳಿಸಿದ್ದಾರೆ.
ಚಿತ್ರಕ್ಕೆ ರಾಂ-ನಾರಾಯಣ್ ಸಂಭಾಷಣೆ, ಜನಾರ್ದನ್ ಛಾಯಾಗ್ರಹಣ, ಹಂಸಲೇಖಾ ಸಂಗೀತ, ಇಸ್ಮಾಯಿಲ್ ಕಲೆ, ಶ್ರೀನಿವಾಸ್ಕುಮಾರ್ ನಿರ್ದೇಶನ ಸಹಾಯ, ಅನಿಲ್, ಸೋಮು ನಿರ್ಮಾಣ-ನಿರ್ವಹಣೆಯಿದ್ದು, ಚಿತ್ರದ ಸಾಹಸ ಚಿತ್ರಕಥೆ ಮತ್ತು ನಿರ್ದೇಶನ ಥ್ರಿಲ್ಲರ್ ಮಂಜು.
ತಾರಾಗಣದಲ್ಲಿ ಉಪೇಂದ್ರ, ಆರತಿ ಛಾಬ್ರಿಯಾ, ಚರಣ್ರಾಜ್, ದೊಡ್ದಣ್ಣ, ಅವಿನಾಶ್, ರಮೇಶ್ಭಟ್, ರಂಗಾಯಣ ರಘು, ಕೋಮಲ್ಕುಮಾರ್, ಸಾಧುಕೋಕಿಲ, ಬುಲೆಟ್ ಪ್ರಕಾಶ್, ಸತ್ಯಜಿತ್, ಪವಿತ್ರಾ ಲೋಕೇಶ್, ಚಿತ್ರಾಶೆಣೈ, ತುಳಸಿ, ಮುಕುಲ್ದೇವ್ (ಮುಂಬೈ), ದಂಡಪಾಣಿ (ಚೆನ್ನೈ) ಶರತ್ ಲೋಹಿತಾಶ್ವ ಮುಂತಾದವರಿದ್ದಾರೆ.