ಕಳೆದ ೩೦ ವರ್ಷಗಳಿಂದಲೂ ಚಿತ್ರರಂಗದ ಪ್ರತಿಭಾವಂತರನ್ನು ಗುರುತಿಸಿ ಗೌರವಿಸುವ ಪದ್ಧತಿ ಬೆಳೆಸಿಕೊಂಡು ಬಂದಿರುವ ಕರ್ನಾಟಕ ಚಿತ್ರರಸಿಕರ ಸಂಘವು ೨೦೦೮-೦೯ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಕಳೆದ ೧೬ರಂದು ಬೆಂಗಳೂರಿನ ಟೌನ್ ಹಾಲ್ನಲ್ಲಿ ಏರ್ಪಡಿಸಿತ್ತು. ಸಂಘದ ಅಧ್ಯಕ್ಷರಾದ ಎ.ಆರ್. ರಾಜು ಅವರ ನೇತೃತ್ವದಲ್ಲಿ ನಡೆದ ಈ ಸಮಾರಂಭದ ಅಧ್ಯಕ್ಷತೆಯನ್ನು ವಿಧಾನ ಪರಿಷತ್ ಸದಸ್ಯ ನಟ ಡಾ| ಶ್ರೀನಾಥ್ ವಹಿಸಿದ್ದರು. ಬೆಂಗಳೂರು ದೂರದರ್ಶನದ ಹಿರಿಯ ನಿರ್ದೇಶಕ ಮಹೇಶ್ ಜೋಶಿ ಮುಖ್ಯ ಅತಿಥಿಗಳಾಗಿದ್ದರು. ಪೂಜಾ ಗಾಂಧಿ ಹಾಗೂ ವಿಜಯ ರಾಘವೇಂದ್ರ ಶ್ರೇಷ್ಠ ನಾಯಕ-ನಾಯಕಿ ಪ್ರಶಸ್ತಿ ಸ್ವೀಕರಿಸಿದರೆ, ಶ್ರೇಷ್ಠ ಸಾಹಿತಿ, ಸಂಗೀತ ನಿರ್ದೇಶಕರಾಗಿ ನಾಗೇಂದ್ರ ಪ್ರಸಾದ್-ಗುರುಕಿರಣ್, ಶ್ರೇಷ್ಠ ಗಾಯಕ-ಗಾಯಕಿಯಾಗಿ ರಾಜೇಶ್ ಕೃಷ್ಣನ್-ನಂದಿತಾ, ಶ್ರೇಷ್ಠ ಯುವ ಪ್ರತಿಭೆಗಳಾಗಿ ಪಂಕಜ್-ರೂಪಿಕಾ, ಶ್ರೇಷ್ಠ ನಿರ್ಮಾಪಕರಾಗಿ ಎಸ್.ವಿ. ಬಾಬು ಪ್ರಶಸ್ತಿ ಪಡೆದರು. ಶ್ರೇಷ್ಠ ಸಾಹಸ ನಿರ್ದೇಶಕರಾಗಿ ಡಿಫರೆಂಟ್ ಡ್ಯಾನಿ, ಶ್ರೇಷ್ಠ ಸಂಭಾಷಣೆಕಾರರಾಗಿ ಶಿವಮಣಿ ಸೇರಿ ಒಟ್ಟು ೨೪ ಪ್ರಶಸ್ತಿ ಫಲಕಗಳನ್ನು ವಿತರಿಸಲಾಯಿತು. ಶ್ರೇಷ್ಠ ನಿರ್ದೇಶಕರಾಗಿ ಆಯ್ಕೆಯಾಗಿದ್ದ ಎಸ್. ನಾರಾಯಣ್ ಸಮಾರಂಭಕ್ಕೆ ಬಂದಿರಲಿಲ್ಲ. ಪ್ರಶಸ್ತಿ ವಿತರಿಸಿ ಮಾತನಾಡಿದ ಡಾ|| ಶ್ರೀನಾಥ್ ೩೦ ವರ್ಷಗಳ ಹಿಂದೆ ಪ್ರಾರಂಭವಾದ ಈ ಸಂಸ್ಥೆಯ ಮೊದಲ ವರ್ಷದ ಸಮಾರಂಭದಲ್ಲಿ ನಾನು ಪ್ರಶಸ್ತಿ ಸ್ವೀಕರಿಸಿದ್ದೆ. ಈಗ ನಾನೇ ಪ್ರಶಸ್ತಿ ವಿತರಿಸುತ್ತಿದ್ದೇನೆ. ಇದು ನನ್ನ ಜೀವನದ ಮರೆಯಲಾಗದ ದಿನ ಎಂದರು. ಸಂಘದ ಅಧ್ಯಕ್ಷರಾದ ಎ.ಆರ್. ರಾಜು ಮಾತನಾಡುತ್ತಾ ಹಲವಾರು ಕಲಾವಿದರು ಪ್ರಶಸ್ತಿ ಪಟ್ಟಿಯಲ್ಲಿದ್ದರೂ, ನಮ್ಮವರಿಗೆ ಬಂದು ಪ್ರಶಸ್ತಿ ಸ್ವೀಕರಿಸುವ ಸೌಜನ್ಯತೆ ಕೂಡ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
Manohar. R.(Manu),
chitrataramanu@gmail.com
Photo Journalist
M: 9845549026
: 9844904440