ಈಗಾಗಲೇ ಕನ್ನಡದಲ್ಲಿ ಹಲವಾರು ಚಿತ್ರಗಳಿಗೆ ಸಹನಿರ್ದೇಶಕರಾಗಿ ಕೆಲಸ ಮಾಡಿರುವ ನಾಗರಾಜ್ ಎಂ.ಗೌಡ ಇದೇ ಮೊದಲಬಾರಿಗೆ ಕಥೆ ಬರೆದು ನಿರ್ದೇಶನ ಮಾಡುತ್ತಿರುವ ಚಿತ್ರ ಡಿಸೆಂಬರ್ 24. ಇತ್ತೀಚೆಗೆ ಈ ಚಿತ್ರದ ಫಸ್ಟ್ಲುಕ್ನ್ನು ನಟಿ ಪ್ರಿಯಾಂಕ ಉಪೇಂದ್ರ ಅವರು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ತನಿಖೆ, ಪಾಗಲ್ಪ್ರೇಮಿ, ರಾಜಾಧಿರಾಜ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ಅಭಿನಯಸಿರುವ ಅಪ್ಪು ಬಡಿಗೇರ ಈ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಡಿಸೆಂಬರ್ ತಿಂಗಳಲ್ಲೇ ಈ ಚಿತ್ರದ ಚಿತ್ರೀಕರಣ ಪ್ರಾರಂಭವಾಗುತ್ತಿರುವುದು ವಿಶೇಷ. ಬೆಂಗಳೂರು, ಮಾಗಡಿ, ಹುಲಿಯೂರು ದುರ್ಗ, ಯಲ್ಲಾಪುರ ಹಾಗೂ ಚಿಕ್ಕಮಗಳೂರು ಸೇರಿದಂತೆ ಹಲವಾರು ಪ್ರವಾಸಿ ತಾಣಗಳಲ್ಲಿ ಈ ಚಿತ್ರದ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಈ ಚಿತ್ರದಲ್ಲಿ ಸ್ಟಾರ್ ನಟರೊಬ್ಬರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಪ್ರತಿದಿನ ಹುಟ್ಟುವ ನೂರರಲ್ಲಿ ಮೂವರು ಮಕ್ಕಳು ಉಸಿರಾಟದ ತೊಂದರೆಯಿಂದಲೇ ಸಾಯುತ್ತಿವೆ. ಇದಕ್ಕೆ ಕಾರಣವಾದರೂ ಏನು, ಇದಕ್ಕೆ ಇಂಡಿಯನ್ ಮೆಡಿಕಲ್ ರೀಸರ್ಚ್ನಿಂದಲೂ ಮೆಡಿಸಿನ್ ಕಂಡುಹಿಡಿದಿಲ್ಲ. 2015 ರಿಂದ 2019 ರವರೆಗೆ ನಡೆದ ಕೆಲವೊಂದು ನೈಜ ಘಟನೆಗಳನ್ನು ಇಟ್ಟುಕೊಂಡು ಮಾಡಲಾಗುತ್ತಿರುವ ಈ ಚಿತ್ರ ಪಕ್ಕಾ ಫ್ಯಾಮಿಲಿ, ಲವ್, ಫ್ರೆಂಡ್ಷಿಪ್, ಹಾರರ್ ಹಾಗೂ ಥ್ರಿಲ್ಲರ್ ಎಲಿಮೆಂಟ್ಸ್ಗಳನ್ನು ಒಳಗೊಂಡಿರುತ್ತದೆ.
ಎಂ.ಜೆ.ಎಸ್.ಪ್ರೊಡಕ್ಷನ್ಸ್ ಲಾಂಛನದಲ್ಲಿ ಬಸವರಾಜ್ ಎಸ್. ನಂದಿ ದೇವಹಾಸನ್ ಅವರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಪ್ರವೀಣ್ ನಿಕೇತನ್ ಸಂಗೀತ, ಬಸವರಾಜ್ ಎಸ್. ನಂದಿ ಛಾಯಾಗ್ರಹಣ, ನಗಾರಿ ವಿಕಾಸ್, ನಾಗರಾಜ್ ಎಂ.ಜಿ.ಗೌಡ, ಕಿರಣ್ಕುಮಾರ್ ಜಿ. ಚಿತ್ರಕಥೆ, ಸಿರಿ ವೈ.ಎಸ್.ಆರ್. ಸಂಭಾಷಣೆ, ಸುರೇಶ್ ಡಿ.ಹೆಚ್. ಅವರ ಸಂಕಲನವಿದೆ. ಅಪ್ಪು ಬಡಿಗೇರ್, ಶೈಲಜಾ, ರಘುಶೆಟ್ಟಿ, ಜಗದೀಶ್ ಹೆಚ್.ಜಿ.ದೊಡ್ಡಿ, ಕಿರಣ್ಗೌಡ. ರೀಶನ್ ಚೊಟ್ಟಾಳಿ, ಯಮ್ಮಂಡೆ. ಕುಮಾರ್ ಎಸ್, ಆನಂದ್ ಪಾಟೀಲ್ ಇನ್ನು ಮುಂತಾದವರ ತಾರಾಬಳಗ ಈ ಚಿತ್ರಕ್ಕಿದೆ.