ಕಳೆದ ಹಲವಾರು ವರ್ಷಗಳಿಂದ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ಸ್ನೇಹಮಯಿ ಕೃಷ್ಣ ಅವರು ೨೦೧೬ರಲ್ಲಿ ಶವದ ಮುಂದೆ ಎಂಬ ಚಲನಚಿತ್ರವನ್ನು ತಮ್ಮ ದಿವ್ಯಶ್ರೀ ಚಿತ್ರ ನಿರ್ಮಾಣ ಸಂಸ್ಥೆಯಿಂದ ನಿರ್ಮಾಣ ಮಾಡಿದ್ದರು. ಇದೀಗ ಮಕ್ಕಳ ಸಾಹಸದ ಕಥಾನಕವನ್ನು ಒಳಗೊಂಡಿರುವ ಸೂಪರ್ ಹೀರೋ ಎಂಬ ಚಲನಚಿತ್ರವನ್ನು ನಿರ್ಮಿಸಲು ಹೊರಟಿದ್ದಾರೆ. ಇದೇ ಮೇ 20ರಿಂದ ಆರಂಭಿಸಿ ಮೈಸೂರು, ಶ್ರೀರಂಗಪಟ್ಟಣ, ನಂಜನಗೂಡು, ನರಸೀಪುರ ಸುತ್ತಮುತ್ತ ಈ ಚಿತ್ರಕ್ಕೆ ಚಿತ್ರೀಕರಣ ನಡೆಸುವ ಯೋಜನೆ ಹಾಕಿಕೊಂಡಿದ್ದಾರೆ. ವಿದ್ಯಾರ್ಥಿಯೊಬ್ಬ ತನ್ನ ಚಾಣಾಕ್ಷತನದಿಂದ ದರೋಡೆಕೋರರ ಪಾಲಾಗಿದ್ದ ಬ್ಯಾಂಕಿನ 10 ಕೊಟಿ ರೂ. ಹಣವನ್ನು ಪತ್ತೆಹಚ್ಚುವ ಸಾಹಸದ ಕಥಾನಕವನ್ನು ಈ ಚಿತ್ರದಲ್ಲಿ ಹೇಳಲಾಗಿದೆ.
ಈ ಚಿತ್ರಕ್ಕೆ ಸ್ನೇಹಮಯಿ ಕೃಷ್ಣ ಅವರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಗಳನ್ನು ರಚಿಸಿದ್ದು, ನಿರ್ಮಾಣ ಹಾಗೂ ನಿರ್ದೇಶನದ ಜವಾಬ್ದಾರಿಯನ್ನೂ ಸಹ ಹೊತ್ತಿದ್ದಾರೆ. ಈ ಚಿತ್ರದಲ್ಲಿ ಒಟ್ಟು ೪ ಹಾಡುಗಳಿದ್ದು ವಿನಯ್ ರಂಗದೊಳ್ ಅವರ ಸಂಗೀತ ಸಂಯೋಜನೆ, ಸರಿಗಮಪ ವಿಶಾಖ ಅವರ ಸಾಹಿತ್ಯವಿದೆ. ಚೇತನ್ಶರ್ಮ ಅವರ ಛಾಯಾಗ್ರಹಣ, ಯತಿರಾಜ್ ಅವರ ನೃತ್ಯ ಸಂಯೋಜನೆ, ದಿನೇಶ್ ಅವರ ಪ್ರಸಾದನ ಈ ಚಿತ್ರಕ್ಕಿದೆ. ಈ ಚಿತ್ರದ ಪ್ರಮುಖ ತಾರಾಬಳಗದಲ್ಲಿ ಬಾಲಕಲಾವಿದರಾದ ಮಾಸ್ಟರ್ ವಿ.ಕ್ರಿ.ವಿಕಾಸ್, ಗಜೇಂದ್ರಗೌಡ, ಎಂ.ಪ್ರಜ್ವಲ್, ಎಂ.ಕುಶಲ್ ಮಾಧವ್, ನೀತನ್ ಕೆ. ಗೌಡ, ಪೂರ್ವಿಕ, ವಿ.ಕ್ರಿ. ವಿವೇಕ್ ನಟಿಸಿದ್ದು, ಉಳಿದಂತೆ ಟಿಸಿ. ರಾಜೇಂದ್ರ, ಆರ್.ಮಂಜು, ರಾಕೇಶ್, ಕುಶಾಲ್ಕುಮಾರ್ ಉಳಿದ ತಾರಾಗಣದಲ್ಲಿದ್ದಾರೆ.