ಜ಼ೀ ಕನ್ನಡ ವಾಹಿನಿಯಲ್ಲಿ ಸೋಮ-ಶುಕ್ರವಾರ ರಾತ್ರಿ ೮:೩೦ ಕ್ಕೆ ಮೂಡಿಬರುತ್ತಿರುವ ಮಹಾದೇವಿ ಧಾರಾವಾಹಿ ಹೊಸ ರೂಪ, ಹೊಸ ಕಳೆಯೊಂದಿಗೆ ಹೊಸ ತಿರುವು ಪಡೆದುಕೊಳ್ಳುತ್ತಿದೆ.
ಯಶಸ್ವಿ ೯೦೦ ಸಂಚಿಕೆಗಳನ್ನು ಪೂರೈಸಿ ಮುನ್ನುಗ್ಗುತ್ತಿರುವ ಮಹಾದೇವಿಯ ಮುದ್ದು ಪುಟ್ಟಿ ಹಿರಣ್ಮಯಿಯ ಅಧ್ಯಾಯ ಮುಕ್ತಾಯಗೊಳ್ಳುತ್ತಿದೆ. ಫೆಬ್ರುವರಿ ೪, ಸೋಮವಾರದಿಂದ ೨೦ ವರ್ಷದ ತರುಣಿ ಹಿರಣ್ಮಯಿಯ ಪ್ರವೇಶವಾಗುತ್ತಿದೆ. ಇದರೊಂದಿಗೆ ಕಥೆಯ ಮಜಲು ಸಹ ಬದಲಾಗುತ್ತಿದೆ. ಹಳೆಯ ಕಥೆ ಹಾಗೂ ಪಾತ್ರಗಳ ಪರ್ವ ಮುಗಿದು ಹೊಸ ಪಾತ್ರಗಳು ತೆರೆದುಕೊಳ್ಳಲಿವೆ.
ತನ್ನವರನ್ನೆಲ್ಲ ಕಳೆದುಕೊಂಡ ಪುಟ್ಟ ಹಿರಣ್ಮಯಿ ಒಂಟಿಯಾಗಿ ಊರು ಬಿಟ್ಟು ದೂರ ಹೋಗುತ್ತಾಳೆ. ಅರ್ಚಕರೊಬ್ಬರ ನೆರವಿನಿಂದ ಅಪಾಯಕಾರಿ ಸರ್ಪವನ ದಾಟುತ್ತಾಳೆ. ಕಾಡುದಾರಿಯಲ್ಲ ಮುಳ್ಳು ಚುಚ್ಚಿ ತೊಂದರೆ ಅನುಭವಿಸುತ್ತಿದ್ದ ಆನೆ ಮರಿಯ ಕಾಲಿನ ಮುಳ್ಳು ತೆಗೆದು ಉಪಚರಿಸುತ್ತಾಳೆ.
ಅಲ್ಲಿಂದ ಪಯಣ ಮುಂದುವರಿಸಿದಂತೆ ಆನೆಮರಿಯೂ ಹಿಂಬಾಲಿಸಿ ಬರುತ್ತದೆ. ತುಂಬ ದೂರ ಕ್ರಮಿಸಿದ ಹಿರಣ್ಮಯಿ ಮೂಕಾಂಬಿಕೆ ದೇವಸ್ಥಾನಕ್ಕೆ ಬರುತ್ತಾಳೆ. ಭಕ್ತಿಪರವಶಳಾಗಿ ಹಾಡುತ್ತಾಳೆ. ಆಕೆಯ ಗಾನಮಾಧುರ್ಯಕ್ಕೆ ಮನಸೋತ ಅದೇ ದೇಗುಲದ ನಾದಸ್ವರ ವಾದಕ ವರದರಾಜ ಆಕೆಯನ್ನು ದತ್ತುಪಡೆದು ಸಾಕುತ್ತಾರೆ. ತಮ್ಮ ಸಂಗೀತ ಜ್ಞಾನವನ್ನು ಧಾರೆ ಎರೆಯುತ್ತಾರೆ. ಬೆಳೆದು ದೊಡ್ಡವಳಾಗುತ್ತ ಹಿರಣ್ಮಯಿ ನಾದಸ್ವರ ವಾದಕಿಯಾಗಿ ತನ್ನ ಭಕ್ತಿ, ಭಾವ, ಸ್ವರ-ಶ್ರುತಿ ಶುದ್ಧಿಯಿಂದ ಸುತ್ತಮುತ್ತ ಒಳ್ಳೆಯ ಹೆಸರು ಗಳಿಸುತ್ತಾಳೆ.
ಒಮ್ಮೆ ದೇವಸ್ಥಾನದಲ್ಲಿ ಹಿರಣ್ಮಯಿಯ ನಾದಸ್ವರ ಸೇವೆ ನಡೆಯುತ್ತಿದ್ದಾಗ ಆಗಮಿಸಿದ ಕಥಾನಾಯಕ ಸೂರ್ಯ ಹಣತೆಯ ದೀಪದಲ್ಲಿ ಸಿಗರೇಟು ಹೊತ್ತಿಸಲು ಮುಂದಾಗುತ್ತಾನೆ. ಇದನ್ನು ತಡೆದ ಹಿರಣ್ಮಯಿ ಜನರ ಎದುರು ಆತನ ಕೆನ್ನೆಗೆ ಬಾರಿಸಿ ಬುದ್ಧಿ ಹೇಳುತ್ತಾಳೆ. ಇದು ಅವಳ ಜೀವನದಲ್ಲಿ ಊಹಿಸಲಾಗದ ತಿರುವುಗಳಿಗೆ ಕಾರಣವಾಗುತ್ತದೆ.
ಮಹಾದೇವಿಯ ವಿಶೇಷತೆ ಎಂದರೆ ಆನೆಯೂ ಒಂದು ಪಾತ್ರವಾಗಿರುವುದು. ಚಿಕ್ಕವಳಾಗಿದ್ದಾಗ ಹಿರಣ್ಮಯಿಯನ್ನು ಹಿಂಬಾಲಿಸಿ ಬಂದ ಆನೆಮರಿ ಬೆಳೆದು ದೊಡ್ಡದಾಗಿರುತ್ತದೆ. ಹಿರಣ್ಮಯಿಯ ಸುಖ ದುಃಖ ಹಂಚಿಕೊಳ್ಳುವ ಸ್ನೇಹಿತನಾಗಿ, ಕಾಪಾಡುವ ಸೋದರನಾಗಿ ದೇವಸ್ಥಾನದ ಆನೆಯಾಗಿ ತನ್ನ ಛಾಪು ಒತ್ತಿರುತ್ತದೆ. ಹಿರಣ್ಮಯಿಯ ಜೀವನದ ಏಳುಬೀಳುಗಳಿಗೆ ಮೂಕಸಾಕ್ಷಿಯಾಗಿರುತ್ತದೆ.
ಮಹಾದೇವಿ ಶೀರ್ಷಿಕೆಗೆ ತಕ್ಕಂಥೆ ಧಾರಾವಾಹಿಯಲ್ಲಿ ಮೂಕಾಂಬಿಕೆ ಅಮ್ಮನವರ ಪಾತ್ರ ಪ್ರಧಾನವಾಗಿದೆ. ಹಿರಣ್ಮಯಿ ಮತ್ತು ಅಮ್ಮನವರ ನಂಟು ಹೊಸ ಬಗೆಯದು. ಕಥೆಯ ಕುತೂಹಲಕರ ಘಟ್ಟದಲ್ಲಿ ಅಮ್ಮನವರ ಪಾತ್ರ ತೆರೆದುಕೊಳ್ಳುತ್ತದೆ ಮತ್ತು ಕಥೆ ಊಹಿಸಲಾಗದ ಘಟ್ಟಕ್ಕೆ ಹೊರಳುತ್ತದೆ.
ತರುಣಿ ಹಿರಣ್ಮಯಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಹೊಸ ನಟಿ ಗಗನಾ. ನಾಯಕ ಸೂರ್ಯನ ಪಾತ್ರದಲ್ಲಿ ವಿವೇಕ್ ಸಿಂಹ, ಸಾಕುತಂದೆ ವರದರಾಜ್ ಪಾತ್ರದಲ್ಲಿ ರಂಗನಟ ಧರ್ಮೇಂದ್ರ ಅರಸ್ ನಟಿಸುತ್ತಿದ್ದಾರೆ. ಉಳಿದಂತೆ ದೊಡ್ಡ ತಾರಾಗಣವೇ ಮಹಾದೇವಿ ಧಾರಾವಾಹಿಯಲ್ಲಿದೆ.
ಗ್ರಾಫಿಕ್ಸ್ ವಿನ್ಯಾಸದ ಹೊಣೆ ಹೊತ್ತಿದೆ ಉಘೇ ಉಘೇ ಮಾದೇಶ್ವರ ಖ್ಯಾತಿಯ ಮುಂಬಯಿನ ಚಿತ್ರಮುದ್ರಾ ಸಂಸ್ಥೆ.
ಜ಼ೀ ಕನ್ನಡದ ಧಾರಾವಾಹಿ ಸರಣಿಗಳಲ್ಲಿ ಮಹಾದೇವಿ ತನ್ನದೇ ಛಾಪು ಮೂಡಿಸಿದೆ. ವೀಕ್ಷಕರಿಗೆ ದೇವಿಯೊಂದಿಗೆ ವಿಶೇಷ ನಂಟಿದೆ. ಅವರ ಭಾವನೆಗಳನ್ನು ಅರಿತು ಹಿರಣ್ಮಯಿಯ ಕಥೆಯನ್ನು ಮುಂದುವರಿಸಲು ವಾಹಿನಿ ನಿರ್ಧರಿಸಿತು ಎನ್ನುತ್ತಾರೆ ಚಾನೆಲ್ನ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು.
ಹೊಸ ವರ್ತಮಾನಕ್ಕೆ ತೆರೆದುಕೊಳ್ಳುತ್ತಿರುವ ಮಹಾದೇವಿ ಧಾರಾವಾಹಿಯನ್ನು ಹೊಸ ರೂಪದಲ್ಲಿ ಕಟ್ಟಿಕೊಡುವುದು ಒಂದು ಸವಾಲಿನ ಕೆಲಸ. ಈ ಸವಾಲನ್ನು ಎದುರಿಸಿ ವೀಕ್ಷಕರ ಮನ ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ ಎನ್ನುತ್ತಾರೆ ನಿರ್ದೇಶಕ ರಮೇಶ್ ಇಂದಿರಾ.
ಫೆಬ್ರವರಿ ೪, ಸೋಮವಾರದಿಂದ ರಾತ್ರಿ ೮:೩೦ ಕ್ಕೆ ಹೊಸ ರೂಪದಲ್ಲಿ ಮಹಾದೇವಿ ಪ್ರಸಾರವಾಗಲಿದೆ.