ಮೈಸೂರಿನಲ್ಲಿ `ಉಲ್ಲಾಸ ಉತ್ಸಾಹ` ಮನೆ ಮಾಡಲು ಈಗೇನು ದಸರೆಯ ಸಮಯವಲ್ಲ ಎಂಬ ಚಿಂತೆಬೇಡ. ಏಕೆಂದರೆ ಉಲ್ಲಾಸದ ಹುಡುಗ, ಉತ್ಸಾಹಿ ಯುವಕ ಗಣೇಶ್ ಅಭಿನಯದ ಇದೇ ಹೆಸರಿನ ಚಿತ್ರಕ್ಕೆ ಚಾಮುಂಡಿ ತವರಿನಲ್ಲಿ ಭರದ ಚಿತ್ರೀಕರಣ ನಡೆಯುತ್ತಿದೆ. ಸಾಂಸ್ಕೃತಿಕ ರಾಜಧಾನಿಯ ಸುಂದರ ಪರಿಸರದ ಮೈಸೂರು ಯುನಿವರ್ಸಿಟಿ ಬಳಿಯಲ್ಲಿ ಇತ್ತೀಚೆಗೆ ಗಣೇಶ್, ಯಾಮಿಗೌತಮಿ, ವಿಶ್ವ, ಮಿತ್ರ ಮುಂತಾದ ಸಹಕಲಾವಿದರ ಅಭಿನಯದಲ್ಲಿ ಹಲವು ಸನ್ನಿವೇಶಗಳು ಚಿತ್ರೀಕೃತವಾಗಿದೆ. ಪರಿಶುದ್ದ ಹಾಸ್ಯವನ್ನು ಮೆಚ್ಚುವ ಕನ್ನಡಿಗರಿಗೆ ಈ ಚಿತ್ರ ಹೆಚ್ಚಿನ ಮುದ ನೀಡಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.
ಕಾಂತಿಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಬಿ.ಪಿ.ತ್ಯಾಗರಾಜ್ ನಿರ್ಮಿಸುತ್ತಿರುವ ಈ ಚಿತ್ರವನ್ನು ದೇವರಾಜ್ ಪಾಲನ್ ನಿರ್ದೇಶಿಸುತ್ತಿದ್ದಾರೆ. ತೆಲುಗಿನ `ಉಲ್ಲಾಸಂಗ ಉತ್ಸಾಹಂಗ` ಕನ್ನಡದಲ್ಲಿ `ಉಲ್ಲಾಸ ಉತ್ಸಾಹ`ವಾಗಿ ನಿರ್ಮಾಣವಾಗುತ್ತಿದೆ. ಕರುಣಾಕರನ್ ಅವರ ಕತೆ, ಚಿತ್ರಕತೆಯಿರುವ ಈ ಚಿತ್ರಕ್ಕೆ ಜಿ.ವಿ.ಪ್ರಕಾಶ್ಕುಮಾರ್ ಸಂಗೀತವಿದೆ. ಜಿ.ಎಸ್.ವಿ.ಸೀತಾರಾಂ ಛಾಯಾಗ್ರಹಣ, ಪಿ.ಆರ್.ಸೌಂದರ್ರಾಜ್ ಸಂಕಲನ, ಇಮ್ರಾನ್ ನೃತ್ಯ, ರವಿಶಂಕರ್, ದತ್ತಣ್ಣ ನಿರ್ಮಾಣನಿರ್ವಹಣೆಯಿರುವ ಚಿತ್ರ್ರದ ತಾರಾಬಳಗದಲ್ಲಿ ಗಣೇಶ್, ಯಾಮಿಗೌತಮಿ, ರಂಗಾಯಣರಘು, ಸಾಧುಕೋಕಿಲಾ, ತುಳಸಿಶಿವಮಣಿ, ಪ್ರೀತಿಚಂದ್ರಶೇಖರ್, ದೊಡ್ಡಣ್ಣ, ವಿಶ್ವ, ಮಿತ್ರ ಮುಂತಾದವರಿದ್ದಾರೆ.