ಐದು ಲಕ್ಷ ಹಣ ಕೊಡಬೇಕಾಗಿರುವ ಹುಡುಗನಿಗೆ ಚಿತ್ರದ ಖಳನಾಯಕ ಮನ ಬಂದಂತೆ ಹೊಡೆಯುತ್ತಿರುತ್ತಾನೆ. ಆ ಸಮಯಕ್ಕೆ ಅಲ್ಲಿಗೆ ಆಗಮಿಸಿದ ನಾಯಕಿ ಖಳನಾಯಕನ ಕುರಿತು ಆ ಹುಡುಗನಿಗೆ ಹೊಡೆಯಬೇಡವೆಂದು ಹೇಳುತ್ತಾಳೆ. ಮಾತು ಕೇಳದ ಖಳನಾಯಕನಿಗೆ ಹಾಗೂ ಚಿತ್ರದ ನಾಯಕಿಗೂ ಹೊಡೆದಾಟವಾಗುತ್ತದೆ. ಈ ಸನ್ನಿವೇಶವನ್ನು ನಗರದ ಯಶವಂತಪುರ ಮಾರುಕಟ್ಟೆಯಲ್ಲಿ ರಾಮು ಎಂಟರ್ ಪ್ರೈಸಸ್ನ ಮೂವತ್ತೆರಡನೇ ಕಾಣಿಕೆ ‘ಶಕ್ತಿ ಚಿತ್ರಕ್ಕಾಗಿ ನಿರ್ದೇಶಕ ಅನಿಲ್ ಚಿತ್ರಿಸಿಕೊಂಡರು. ಮಾಲಾಶ್ರೀ, ಶಯಾಜಿರಾವ್ ಶಿಂಧೆ ಮುಂತಾದವರು ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.
ಸಂಭಾಷಣೆಗಾರರಾಗಿದ್ದ ಅನಿಲ್ ಈ ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ ಬರೆಯುವುದರೊಂದಿಗೆ ನಿರ್ದೇಶನವನ್ನೂ ಮಾಡುತ್ತಿದ್ದಾರೆ. ಇದು ಇವರಿಗೆ ಚೊಚ್ಚಲ ಚಿತ್ರ. ಮಾಲಾಶ್ರೀ ಅವರು ವಿಭಿನ್ನ ಪಾತ್ರದಲ್ಲಿ ಅಭಿನಯಿಸುತ್ತಿರುವ ಈ ಚಿತ್ರದ ತಾರಾಬಳಗದಲ್ಲಿ ರವಿಶಂಕರ್, ಶಯಾಜಿರಾವ್ ಶಿಂಧೆ, ವಿನಯಾಪ್ರಸಾದ್, ಆಶಾಲತಾ, ಅವಿನಾಶ್, ಶರತ್ ಲೋಹಿತಾಶ್ವಾ, ಸಾಧುಕೋಕಿಲಾ, ಕುರಿಗಳು ಪ್ರತಾಪ್ ಮುಂತಾದವರಿದ್ದಾರೆ. ಥ್ರಿಲ್ಲರ್ಮಂಜು, ರವಿವರ್ಮ, ರಾಮ್ಲಕ್ಷ್ಮಣ್ ಮತ್ತು ಪಳನಿರಾಜ್ ಸಾಹಸ ನಿರ್ದೇಶನ, ಸುಧಾಕರ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಲಕ್ಷ್ಮಣ್ ರೆಡ್ಡಿ ಅವರ ಸಂಕಲನವಿದೆ.