೧೯೮೫ ರಲ್ಲಿ ಬೆಂಗಳೂರಿನ ಏರಿಯಾ ಒಂದರಲ್ಲಿ ನಡೆದ ಪ್ರೇಮ ಪ್ರಕರಣವನ್ನು ಗಣಪತಿ ಹಬ್ಬದ ನಿನ್ನೆಲೆಯಲ್ಲಿ ನಿರೂಪಿಸುವಲ್ಲಿ ನಿರ್ದೇಶಕ ನಾಗೇಂದ್ರ ಪ್ರಸಾದ್ ಯಶಸ್ವಿಯಾಗಿದ್ದಾರೆ. ಉತ್ಸವ್ ಮೂವೀಸ್ ಹಾಗೂ ಜಿ.ಟಿ. ಪ್ರೊಡಕ್ಷನ್ಸ್ ಲಾಂಛನದಲ್ಲಿ ಜಿ.ಟಿ. ಪಂಪಾಪತಿ ಅವರು ನಿರ್ಮಿಸುತ್ತಿರುವ ವಿನಾಯಕ ಗೆಳೆಯರ ಬಳಗ ಚಿತ್ರಕ್ಕೆ ಡಾ|| ನಾಗೇಂದ್ರ ಪ್ರಸಾದ್, ಕಥೆ-ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಈಗಾಗಲೇ ದೊಡ್ಡಬಳ್ಳಾಪುರದಲ್ಲಿ ೨೩ ದಿನಗಳ ಕಾಲ ಚಿತ್ರೀಕರಣ ನಡೆಸಿದ್ದು, ಕಳೆದವಾರ ಚಿತ್ರದ ಆರಂಭದಲ್ಲಿ ಬರುವ ವಿನಾಯಕ ಮಹೋತ್ಸವದ ಹಾಡೊಂದನ್ನು ಬೆಂಗಳೂರು ನಗರದಲ್ಲಿ ನಾಲ್ಕೈದು ದಿನಗಳ ಕಾಲ ಚಿತ್ರೀಕರಿಸಲಾಯಿತು. ಈಗಾಗಲೇ ಚಿತ್ರೀಕರಣ ಪೂರ್ಣಗೊಂಡು ಚಿತ್ರದ ಸಂಕಲನ ಕಾರ್ಯವನ್ನು ಕೆ.ಎಂ. ಪ್ರಕಾಶ್ ಯಶಸ್ವಿಯಾಗಿ ಮುಗಿಸಿದ್ದು, ಸಧ್ಯದಲ್ಲೇ ಮಾತಿನ ಮನೆಗೆ ಕೂಡ ತೆರಳಲಿದೆ. ವಿ. ಹರಿಕೃಷ್ಣರ ಸಂಗೀತ, ಸೇಫ್ಟಿ ಪ್ರಕಾಶ್ರ ಛಾಯಾಗ್ರಹಣ, ಮಳವಳ್ಳಿ ಸಾಯಿಕೃಷ್ಣರ ಸಂಭಾಷಣೆ, ಹೊಸಮನೆ ಮುರ್ತಿಯವರ ಕಲಾ ನಿರ್ದೇಶನ ಈ ಚಿತ್ರಕ್ಕಿದ್ದು, ವಿಜಯರಾಘವೇಂದ್ರ, ಮೇಘನ, ನವೀನ್, ಪ್ರತಾಪ್, ಮುನೀಶ್, ಪುಂಗ, ಗುರುರಾಜ ಹೊಸಕೋಟೆ, ಗುರುದತ್ ಹಾಗೂ ಶೋಭರಾಜ್ ತಾರಾಗಣದಲ್ಲಿದ್ದಾರೆ.