ಶ್ರೀ ಸುದರ್ಶನ ಕ್ರಿಯೇಷನ್ಸ್ ಲಾಂಛನದ ಗೋಪಾಲಕೃಷ್ಣ ಹಾಗೂ ಮಹೇಶ್ ನಿರ್ಮಿಸಿರುವ ಗುಂಡ್ರ ಗೋವಿ, ಅನೇಕ ಕುತೂಹಲಗಳನ್ನು ಬಚ್ಚಿಟ್ಟುಕೊಂಡಿರುವ ಕಟ್ಟು ಮಸ್ತಾದ ಕಥಾವಸ್ತುವಿನೊಂದಿಗೆ ಹಳ್ಳಿಯ ಸೊಗಡಿನ ಲೇಪನದೊಂದಿಗೆ ಸಿದ್ಧವಾಗಿರುವ ಚಿತ್ರ ಈ ವಾರ ಸೆನ್ಸಾರ್ ಬಳಿ ಬಂದು ನಿಂತಿದೆ.
ಹಲವಾರು ಯಶಸ್ವಿ ಚಿತ್ರಗಳಲ್ಲಿ ಅಭಿನಯಿಸಿ ಕಡಕ್ ಆಗಿ ಕಾಣುವ ಕಡುಕಪ್ಪು ಬಣ್ಣದ ನಟ ಸತ್ಯ ರಂಗಭೂಮಿ ಹಿನ್ನಲೆಯುಳ್ಳ ಗಟ್ಟಿನಟ ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ನಾಯಕನಾಗಿ ನಿಲ್ಲುವ ಎಲ್ಲಾ ಸೂಚನೆಗಳು ಈಗಾಗಲೇ ಬಂದು ತಲುಪಿದೆ. ಅವಿದ್ಯಾವಂತ ಯುವಕನ ತವಕ ತಲ್ಲಣಗಳೇ ಅಲ್ಲದೆ ಮನೆಮಂದಿಗೆಲ್ಲಾ ಈ ಗುಂಡ್ರ ಗೋವಿ ಇಷ್ಟವಾಗ್ತಾನೆ ಎಂಬ ಬಲವಾದ ನಂಬಿಕೆ ಹೊತ್ತಿದ್ದಾರೆ ನಿರ್ದೇಶಕರಾದ ತಾರೇಶ್ ರಾಜ್.
ಭಾರತ ದೇಶ ಕಂಡ ಅಪ್ರತಿಮ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಬಳಿ ಸಹಾಯಕರಾಗಿ ದುಡಿದ ಫೀನಿಕ್ಸ್ ಗುಂಡ್ರ ಗೋವಿ, ಚಿತ್ರಕ್ಕೆ ನಾಲ್ಕು ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ. ಬಾಲಿವುಡ್ ಕೆಲವು ಚಿತ್ರಗಳಿಗೆ ಛಾಯಾಗ್ರಹಣ ಮಾಡಿರುವ ರಮೇಶ್ ಆಲ್ಟೆ ಈ ಚಿತ್ರದ ಛಾಯಾಗ್ರಾಹಕರು.
ಸತ್ಯ ಜೋಡಿಯಾಗಿ ಒಡ್ಯಾ ಮಾಡ್ಯಾರ ಚಿತ್ರದ ನಾಯಕಿ ನವ್ಯಶ್ರೀ ಅಭಿನಯಿಸಿದ್ದಾರೆ. ಶರತ್ ಲೋಹಿತಾಶ್ವ, ನೀನಾಸಂ ಅಶ್ವಥ್, ಆಶಾಲತಾ, ತಾರಾಗಣದಲ್ಲಿದ್ದಾರೆ.
ಮುಂದಿನ ತಿಂಗಳು ರಜತ ಪರದೆಯ ಮೇಲೆ ಗುಂಡ್ರ ಗೋವಿ, ರಾರಾಜಿಸಲಿದ್ದಾನೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.