ಸ್ಮೈಫಾ ಅವಾರ್ಡ್‌ನಲ್ಲಿ ಸ್ಯಾಂಡಲ್‌ವುಡ್ ತಾರೆಯರು
Posted date: 06 Fri, Sep 2019 – 06:17:24 PM

 ಸಿನಿಮಾ ರಂಗದಲ್ಲಿ ಕೆಲಸ ಮಾಡಿದ ಪ್ರತಿಭಾವಂತರಿಗೆ ರಾಜ್ಯ, ರಾಷ್ಟ್ರಮಟ್ಟದಲ್ಲಿ ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಪದ್ಧತಿ ಬಹಳ ಕಾಲದಿಂದಲೂ ಬೆಳೆದು ಬಂದಿದೆ. ಇತ್ತೀಚಿನ ದಿನಗಳಲ್ಲಿ ಟ್ರೆಂಡ್ ಆಗಿರುವ ಕಿರು ಚಿತ್ರಗಳನ್ನು ಸ್ಮೈಫಾ (ಸ್ಟೋನ್ಡ್ ಮಂಕಿ ಇಂಟರ್‌ನ್ಯಾಷನಲ್ ಫಿಲಂ ಅವಾರ್ಡ್ ಫಾರ್ ಶಾರ್ಟ್ಸ್) ಸಂಸ್ಥೆ ಪ್ರೋತ್ಸಾಹಿಸಿ ಅದಲ್ಲಿ ಪ್ರತಿಭಾವಂತರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡಿದೆ. ಈ ಪ್ರಶಸ್ತಿ ಕಾರ್ಯಕ್ರಮದ ಮೂರನೇ ಆವೃತ್ತಿ ಕಳೆದ ಶನಿವಾರ ಸಂಜೆ ಬೆಂಗಳೂರಿನ ಶೆರಿಟಾನ್ ಹೊಟೇಲ್‌ನಲ್ಲಿ ಅದ್ಧೂರಿಯಾಗಿ ನೆರವೇರಿತು. ವರ್ಣರಂಚಿತ ನೃತ್ಯ ಕಾರ್ಯಕ್ರಮದೊಂದಿಗೆ ನಡೆದ ಈ ಸ್ಮೈಫಾ ಪ್ರಶಸ್ತಿ ಸಮಾರಂಭದಲ್ಲಿ ಕನ್ನಡ ಚಲನಚಿತ್ರರಂಗದ ಹಲವಾರು ಪ್ರಮುಖ ಕಲಾವಿದರು ಹಾಗೂ ತಂತ್ರಜ್ಞರು ಭಾಗವಹಿಸಿ ಕಾರ್ಯಕ್ರಮದ ಯಶಸ್ವಿಗೆ ಕಾರಣರಾದರು. ನಟ ಉಗ್ರಂ ಖ್ಯಾತಿಯ ಶ್ರೀಮುರುಳಿ, ಹಾಸ್ಯ ನಟ ಶರಣ್, ನಿರ್ಮಾಪಕ ಕರಿಸುಬ್ಬು ಭರಾಟೆ ನಿರ್ದೇಶಕ ಚೇತನ್‌ಕುಮಾರ್, ನಟಿ ರಾಧಿಕಾ ಚೇತನ್, ವಿನಯ್ ಭಾರದ್ವಾಜ್, ಭಾವನರಾವ್, ಪತ್ರಕರ್ತ ಜೋಗಿ ಹಾಗೂ ತಮಿಳು, ಮಲೆಯಾಳಂ ಹಾಗೂ ತೆಲುಗು ಚಿತ್ರರಂಗದ ಪ್ರಮುಖರು ಕೂಡ ಮುಖ್ಯ ಅತಿಥಿಗಳಾಗಿ ಆಗಮಿಸಿ ಪ್ರತಿಭಾವಂತರಿಗೆ ಪ್ರಶಸ್ತಿಗಳನ್ನು ನೀಡಿದರು. ೨೬೦ ಕ್ಕೂ ಹೆಚ್ಚು ಕಿರುಚಿತ್ರಗಳು ಈ ಸ್ಮೈಫಾ ಅವಾರ್ಡ್‌ಗೆ ಎಂಟ್ರಿಕೊಟ್ಟಿದ್ದು ಅದರಲ್ಲಿ ೪೦ ಶ್ರೇಷ್ಠ ಪ್ರತಿಭಾವಂತರನ್ನು ಗುರುತಿಸಿ ಗೌರವಿಸಲಾಗಿದೆ. ಸ್ಮೈಫಾ ಅವಾರ್ಡ್‌ನ ಅಧ್ಯಕ್ಷ ಡಾ|| ಸಾಯಿ ಅಶ್ಲೇಷ್ ಈ ಮೂರನೇ ಕಿರುಚಿತ್ರ ಪ್ರಶಸ್ತಿ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಇದರ ಜೊತೆಗೆ ಕನ್ನಡದ ಕೃಷ್ಣ ಕ್ರಿಯೇಷನ್‌ನ ಕೃಷ್ಣ ಸಾರ್ಥಕ್ ಕೂಡ ಕೈಜೋಡಿಸಿದ್ದರು.

ಅತ್ಯುತ್ತಮ ನಟ, ನಟಿ, ಸಂಗೀತ ನಿರ್ದೇಶಕರ, ಛಾಯಾಗ್ರಹಣ, ನಿರ್ದೇಶಕ, ಪೋಷಕ ನಟ, ಎಡಿಟರ್ ಹೀಗೆ ಹಲವಾರು ವಿಭಾಗಗಳಲ್ಲಿ ಕೆಲಸ ಮಾಡಿದ ದಕ್ಷಿಣ ಭಾರತದ ಕನ್ನಡ, ತೆಲುಗು, ತಮಿಳು, ಮಲೆಯಾಳಂನ ಕಿರುಚಿತ್ರ ಪ್ರತಿಭಾವಂತರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ನಟ ಶರಣ್ ಈ ಸಂದರ್ಭದಲ್ಲಿ ಮಾತನಾಡಿ ಅತ್ಯಂತ ಕಡಿಮೆ ಅವಧಿಯಲ್ಲಿ ಕಥೆ ಹೇಳುವುದು ತುಂಬ ಕಷ್ಟದ ಕೆಲಸ. ಅಂತಹ ಕಷ್ಟದ ಕೆಲಸವನ್ನು ನಿರ್ವಹಿಸಿದ ಎಲ್ಲಾ ಪ್ರತಿಭಾವಂತರಿಗೂ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು. ನಂತರ ನಟ ಶ್ರೀಮುರಳಿ ಮಾತನಾಡುತ್ತಾ ಈ ಸಂಸ್ಥೆ ಇನ್ನೂ ಹೆಚ್ಚು ಹೆಚ್ಚು ಪ್ರತಿಭಾವಂತರನ್ನು ಗುರುತಿಸಿ ಪ್ರಶಸ್ತಿಗಳನ್ನು ನೀಡುವಂತಾಗಲಿ ಇವರೆಲ್ಲರೂ ಬಲಿಷ್ಯದ ನಿರ್ದೇಶಕರು, ಸ್ಟಾರ್‌ಗಳು. ಇಂತಹವರಿಗೆ ಪ್ರಶಸ್ತಿ ನೀಡುತ್ತಿರುವ ಸ್ಮೈಫಾ ಸಂಸ್ಥೆಗೆ ನಮ್ಮ ಬೆಂಬಲ ಸದಾ ಇರುತ್ತದೆ ಎಂದು ಹೇಳಿದರು. ಕನ್ನಡ ವಿಭಾಗದಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ರಘುನಂದನ್ ಕಾನಡ್ಕ, ಅತ್ಯುತ್ತಮ ನಟ ಪ್ರಶಸ್ತಿಯನ್ನು ಗೋಪಾಲಕೃಷ್ಣ ದೇಶಪಾಂಡೆ, ಅತ್ಯುತ್ತಮ ಕಿರುಚಿತ್ರವಾಗಿ ಲಚ್ಚವ್ವ ವಿಮರ್ಶಕರ ಅತ್ಯುತ್ತಮ ಕಿರುಚಿತ್ರವಾಗಿ ಮಹಾನ್ ಹುತಾತ್ಮ, ಅತ್ಯುತ್ತಮ ಸಂಗೀತ ನಿರ್ದೇಶಕರಾಗಿ ವಿಶಾಖ್ ರಾಮ್‌ಪ್ರಸಾದ್, ಅತ್ಯುತ್ತಮ ಛಾಯಾಗ್ರಾಹಕರಾಗಿ ಅರ್ಜುನಶೆಟ್ಟಿ ಹಾಗೂ ಕಾರ್ತಿಕ್ ವಿ ಮಳ್ಳೂರ್ ಪ್ರಶಸ್ತಿಗಳನ್ನು ಸ್ವೀಕರಿಸಿದರು.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed