ಶಿವಮೊಗ್ಗ ಜಿಲ್ಲೆಯ ಕುಗ್ರಾಮವೊಂದರ ಪ್ರತಿಭಾವಂತ ವಿದ್ಯಾರ್ಥಿನಿಯಾದ ತನುಜಾ, ಕೊರೋನಾ ಸಮಯದಲ್ಲಿ ನೀಟ್ ಪರೀಕ್ಷೆ ಬರೆಯಲು ಹೋದಾಗ, ತಾಂತ್ರಿಕ ಕಾರಣಗಳಿಂದಾಗಿ ಪ್ರವೇಶಪತ್ರ ಸಿಗದೆ ವಂಚಿತಳಾಗುತ್ತಾಳೆ, ಆಗ ಪತ್ರಕರ್ತರೊಬ್ಬರ ಸಹಾಯದಿಂದ ಆಕೆ ಬೆಳಿಗ್ಗೆ ತನ್ನೂರಿಂದ ಹೊರಟು ೧.೩೦ಕ್ಕೆ ಬೆಂಗಳೂರು ತಲುಪಿ ಪರೀಕ್ಷೆ ಬರೆದ ನೈಜ ಸಾಹಸದ ಕಥಾನಕವನ್ನು ಎಳೆಎಳೆಯಾಗಿ ತೆರೆದಿಟ್ಟಿರುವ ಚಿತ್ರ ತನುಜಾ. ಈ ಚಿತ್ರಕ್ಕೆ ಹರೀಶ್ ಎಂಡಿ ಹಳ್ಳಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಮಾಜಿ ಸಿಎಂ ಬಿಎಸ್.ಯಡಿಯೂರಪ್ಪ, ಸಚಿವ ಸುಧಾಕರ್ ಹಾಗೂ ಪತ್ರಕರ್ತ ವಿಶ್ವೇಶ್ವರ ಭಟ್ ಈ ಮೂವರೂ ತಮ್ಮದೇ ಪಾತ್ರಗಳಿಗೆ ಅಭಿನಯಿಸಿದ್ದು ಚಿತ್ರದ ಹೈಲೈಟಾಗಿತ್ತು. ಈಚಿತ್ರ ಯಶಸ್ವಿಯಾಗಿ ೩೫ ದಿನಗಳನ್ನು ಪೂರೈಸಿ ೫೦ನೇ ದಿನದತ್ತ ಸಾಗುತ್ತಿದೆ. ಈ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಳ್ಳಲು ನಿರ್ದೇಶಕ ಹರೀಶ್ ಎಂಡಿ ಹಳ್ಳಿ ಅವರು ಮಾದ್ಯಮಗಳ ಮುಂದೆ ಹಾಜರಾಗಿದ್ದರು.
ನಮ್ಮ ಚಿತ್ರ ಇಷ್ಟು ದೊಡ್ಡಮಟ್ಟದಲ್ಲಿ ಪ್ರತಿಕ್ರಿಯೆ ತೆಗೆದುಕೊಳ್ಳುತ್ತೆ ಅಂತ ನಾನು ನಿರೀಕ್ಷಿಸಿರಲಿಲ್ಲ, ಮೊದಲ ವಾರ ಅಷ್ಟಾಗಿ ಜನ ಥೇಟರಿಗೆ ಬರಲಿಲ್ಲ, ಆದರೆ ನಂತರದ ದಿನಗಳಲ್ಲಿ ಸಿನಿಮಾದ ಕಲೆಕ್ಷನ್ ಹಾಗೂ ಥೇಟರ್ಗಳ ಸಂಖ್ಯೆ ಹೆಚ್ಚಾಗುತ್ತಾ ಹೋಯಿತು. ಒಂದೊಳ್ಳೇ ಸಬ್ಜೆಕ್ಟ್ಗೆ ನಿರ್ಮಾಪಕರು ಯಾವುದೇ ನಿರೀಕ್ಷೆ ಇಟ್ಟುಕೊಳ್ಳದೆ ಬಂಡವಾಳ ಹಾಕಿದ್ದಾರೆ. ಜೊತೆಗೆ ವಿಶ್ವೇಶ್ವರ ಭಟ್ಟರು ಹಾಗೂ ಪ್ರದೀಪ್ ಈಶ್ವರ್ ಅವರೆಲ್ಲ ನಮಗೆ ಸಾಥ್ ನೀಡಿದರು. ನಾನು ಕೇಳಿದ ಕೂಡಲೇ ಬಿಎಸ್ವೈ ಹಾಗೂ ಸುಧಾಕರ್ ಅವರುಗಳು ಬಂದು ಆ್ಯಕ್ಟ್ ಮಾಡುವ ಮೂಲಕ ಸಪೋರ್ಟ್ ಮಾಡಿದರು. ಈಗ ನಮ್ಮ ಚಿತ್ರವು ಹರಿಹರ, ಮಲೆಬೆನ್ನೂರು ಹಗರಿಬೊಮ್ಮನಹಳ್ಳಿ ಮುಂತಾದೆಡೆ 9 ತಾಲ್ಲೂಕುಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ವಿದೇಶಗಳಲ್ಲೂ ಚಿತ್ರವನ್ನು ಪ್ರದರ್ಶಿಸಿದಾಗ ಉತ್ತಮ ಪ್ರತಿಕ್ರಿಯೆ ದೊರಕಿತು. ನಿರ್ಮಲಾನಂದ ಸ್ವಾಮೀಜಿಗಳು ಸಿನಿಮಾ ವೀಕ್ಷಿಸಿದ ವಿಷಯ ಅರಿತ ಸುತ್ತೂರು ಶ್ರೀಗಳು ನಮ್ಮ ಮಕ್ಕಳೊಂದಿಗೆ ಸಿನಿಮಾ ನೋಡಬೇಕೆಂದು ಹೇಳಿದ್ದಾರೆ. ಅಲ್ಲದೆ ಸಿದ್ದಗಂಗಾ ಶ್ರೀಗಳು ತಮ್ಮ ಮಠದಲ್ಲಿ ಎಂಟು ಸಾವಿರ ವಿದ್ಯಾರ್ಥಿಗಳೊಂದಿಗೆ ತನುಜಾ ಚಿತ್ರವನ್ನು ವೀಕ್ಷಿಸಿದ್ದಾರೆ. ರಾಜ್ಯದ ಎಲ್ಲಾ ಮಕ್ಕಳಿಗೂ ನಮ್ಮ ಚಿತ್ರವನ್ನು ತಲುಪಿಸಬೇಕೆಂಬ ಗುರಿ ನಮ್ಮದು, ಅಲ್ಲದೆ ನಮ್ಮ ಚಿತ್ರ ಹಿಂದಿ ಭಾಷೆಗೆ ರೀಮೇಕ್ ಆಗುತ್ತಿದೆ, ಇಶಿಕಾ ಫಿಲಂ ಸೊಸೈಟಿಯವರು ನಮ್ಮ ಚಿತ್ರದ ಪ್ರೀಮಿಯರ್ ನೋಡಿ ಹಿಂದಿಗೆ ರೀಮೇಕ್ ಮಾಡಲು ಮುಂದೆ ಬಂದಿದ್ದಾರೆ, ನಾನೇ ನಿರ್ದೇಶನ ಮಾಡುತ್ತಿದ್ದೇನೆ. ಜೊತೆಗೆ ಚಿತ್ರದ ಡಬ್ಬಿಂಗ್ ರೈಟ್ಸ್ ಕೂಡ ಕೇಳಿದ್ದಾರೆ, ಬ್ಯುಸಿನೆಸ್ವೈಸ್ ನಿರ್ಮಾಪಕರು ಸೇಫಾಗಿದ್ದಾರೆ. ತುಂಬಾ ಜನ ಶಿಕ್ಷಣ ತಜ್ಞರುಗಳು ಚಿತ್ರ ನೋಡಿ ಮೆಚ್ಚಿಕೊಂಡಿದ್ದಾರೆ. ಕುಲಪತಿಗಳು, ಉಪಕುಲಪತಿಗಳು ಸಿನಿಮಾ ನೋಡಿ ಸಹಕಾರ ನೀಡುತ್ತಿದ್ದಾರೆ ಎಂದು ವಿವರಿಸಿದರು. ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಕಾಸರಗೋಡು ಚಿತ್ರದಲ್ಲಿ ನಟಿಸಿದ್ದ ಸಪ್ತಪಾವೂರು ತನುಜಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿರ್ಮಾಪಕರಾಗಿ ಚಂದ್ರಶೇಖರಗೌಡ, ಮನೋಜ್ ಬಿ.ಜಿ, ಜಿ.ಎ.ಭಾಸ್ಕರ್, ವಿವೇಕ್ ಶ್ರೀಕಂಠಯ್ಯ ಅಲ್ಲದೆ ಕೋ ಪ್ರೊಡ್ಯೂಸರ್ ಆಗಿ ಅನಿಲ್ ಷಡಕ್ಷರಿ, ಪ್ರಕಾಶ್ ಮದ್ದೂರು, ಗಿರೀಶ್ ಗೋವರ್ಧನ್ ಹಾಗೂ ಅವಿನಾಶ್ಗೌಡ ಕೈಜೋಡಿಸಿದ್ದು, ಲೈನ್ ಪ್ರೊಡ್ಯೂಸರ್ ಆಗಿ ಮಧುಕಲ್ಯಾಣ್ ಕಾರ್ಯನಿರ್ವಹಿಸಿದ್ದಾರೆ. ಪ್ರದ್ಯೋತ್ತನ್ ಅವರ ಸಂಗೀತ ಹಾಗೂ ರವೀಂದ್ರನಾಥ್.ಟಿ. ಅವರ ಛಾಯಾಗ್ರಹಣ ಚಿತ್ರಕ್ಕಿದೆ,