ಚಿತ್ರನಟ ಮೋಹನ್ ಬರೆಯುವ ಕಥೆ ಅಥವಾ ಸಂಭಾಷಣೆಗಳಲ್ಲಿ ಏನಾದರೂ ಒಂದು ವಿಶೇಷತೆ ಇದ್ದೇ ಇರುತ್ತದೆ. ಅದರಲ್ಲೂ ಹಾಸ್ಯ ಕಥೆಗಳನ್ನು ಕೂಡ ಅತ್ಯುತ್ತಮವಾಗಿ ಬರೆಯಬಲ್ಲರು. ಒಬ್ಬ ನಟನಾಗಿ, ನಿರ್ದೇಶಕನಾಗಿ ಸೈ ಎನಿಸಿಕೊಂಡ ಇನ್ನೊಬ್ಬ ವಿಶೇಷ ವ್ಯಕ್ತಿ ಎಂದರೆ ರಮೇಶ್ ಅರವಿಂದ್. ಇವರಿಬ್ಬರೂ ಒಟ್ಟಾಗಿ ನಟಿಸಿದ ಬಹುತೇಕ ಚಿತ್ರಗಳು ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿವೆ. ಮೋಹನ್ ಅವರೇ ಕಥೆ-ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಕೃಷ್ಣ ನೀ ಲೇಟಾಗಿ ಬಾರೋ ಚಿತ್ರದ ಬಾಕಿ ಉಳಿದಿದ್ದ ೨ ಹಾಡುಗಳನ್ನು ಕೇರಳದ ರಮ್ಯ ತಾಣಗಳಲ್ಲಿ ಚಿತ್ರೀಕರಿಸಿ, ಚಿತ್ರೀಕರಣಕ್ಕೆ ಅಂತ್ಯ ಹಾಡಲಾಯಿತು. ಮಹಿಳಾ ಕಾಲೇಜಿನ ಏಕೈಕ ಪುರುಷ ಉಪನ್ಯಾಸಕನಾಗಿ ರಮೇಶ್ ಹಾಗೂ ಫ್ಯಾಷನ್ ಫೋಟೋಗ್ರಾಫರ್ ಆಗಿ ಮೋಹನ್ ಹಾಗೂ ಇವರಿಬ್ಬರ ಜೋಡಿಯಾಗಿ ಆಧುನಿಕ ಹುಡುಗಿ ನೀತು, ಸಾಂಪ್ರದಾಯಿಕತೆಯ ಬೆಡಗಿ ನಿಧಿ ಸುಬ್ಬಣ್ಣ ಇವರೆಲ್ಲರ ನಡುವೆ ನಡೆಯುವ ಹಾಸ್ಯ ಪ್ರಸಂಗಗಳನ್ನು ಅತ್ಯಂತ ರಸವತ್ತಾಗಿ ನಿರೂಪಿಸಿದ್ದಾರೆ ನಿರ್ದೇಶಕ ಮೋಹನ್. ಎಂ.ಡಿ. ಪ್ರಕಾಶ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಪ್ರವೀಣ್ ಗೋಡ್ಕಿಂಡಿ ಅವರ ಸಂಗೀತ ಸಂಯೋಜನೆ, ಆರ್.ವಿ. ನಾಗೇಶ್ವರರಾವ್ ಅವರ ಛಾಯಾಗ್ರಹಣ, ಚಿನ್ನಿಪ್ರಕಾಶ್, ಲಾಲಿಪಪ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದ್ದು, ಹಿರಿಯ ನಟ ದತ್ತಣ್ಣ, ಸುಂದರ್, ದೊಡ್ಡಣ್ಣ ಪ್ರಮುಖ ತಾರಾಗಣದಲ್ಲಿದ್ದಾರೆ.