ಉತ್ತರ ಭಾರತದ ನಟ ಸೋನು ಸೂದ್ ಮೊದಲಬಾರಿಗೆ ಕನ್ನಡ ಚಿತ್ರದಲ್ಲಿ ಅದೂ ಒಬ್ಬ ರೈತನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಚಿತ್ರ ಶ್ರೀಮಂತ. ಅವರ ಪಾತ್ರ ಚಿಕ್ಕದಾದರೂ ಇಡೀ ಚಿತ್ರದಲ್ಲಿರುತ್ತದೆ. ಹಾಸನ್ ರಮೇಶ್ ಅವರ ನಿರ್ದೇಶನದ ಈ ಚಿತ್ರದಲ್ಲಿ ರೈತನೇ ನಿಜವಾದ ಶ್ರೀಮಂತ ಎಂದು ಹೇಳಲಾಗಿದೆ. ಈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು. ನಾವು ಎಷ್ಟೇ ಮುಂದುವರಿದರೂ ರೈತನ ಕೊಡುಗೆ ನಮಗೆ ಬಹಳ ಮುಖ್ಯ ಎಂಬ ಸಂದೇಶದ ಜೊತೆ ರೈತನ ಬದುಕು, ಬವಣೆಗಳೊಂದಿಗೆ ಸ್ನೇಹ, ಪ್ರೀತಿ, ಬಾಂಧವ್ಯದ ಕಥೆ ಹೇಳುವ ಚಿತ್ರವಿದು. ನಾರಾಯಣಪ್ಪ, ಸಂಜಯ್ಬಾಬು ಹಾಗೂ ಹಾಸನ್ ರಮೇಶ್ ನಿರ್ಮಾಣದ ಜೊತೆಗೆ ನಿರ್ದೇಶಿಸಿರುವ ಈ ಚಿತ್ರದ ೮ ಹಾಡುಗಳಿಗೆ ಡಾ.ಹಂಸಲೇಖ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಎಸ್ ಪಿ ಬಿ ಅವರು ಹಾಡಿರುವ ಕೊನೆಯ ಹಾಡು ಈ ಚಿತ್ರದಲ್ಲಿದೆ.
ಯುವನಟ ಕ್ರಾಂತಿ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ನಾಯಕಿಯರಾಗಿ ಮುಂಬೈ ಬೆಡಗಿ ವೈಷ್ಣವಿ ಪಟುವರ್ಧನ್ ಹಾಗೂ ವೈಷ್ಣವಿ ಚಂದ್ರನ್ ಮೆನನ್ ಅಭಿನಯಿಸಿದ್ದಾರೆ. ಅಲ್ಲದೆ ನಟ ಚರಣರಾಜ್ ಕೂಡ ಈ ಚಿತ್ರದಲ್ಲಿದ್ದಾರೆ.
ಚಿತ್ರದ ನಿರ್ದೇಶಕ ಹಾಸನ್ ರಮೇಶ್ ಮಾತನಾಡುತ್ತಾ ಹಣ ಇರುವವರು ಮಾತ್ರವೇ ಶ್ರೀಮಂತರಲ್ಲ. ನಿಜವಾದ ಆರ್ಥದಲ್ಲಿ ಶ್ರೀಮಂತ ಎಂದರೆ ರೈತ. ಹೌದು, ಎಲ್ಲ ರೀತಿಯಿಂದಲೂ ರೈತನೇ ಶ್ರೀಮಂತ ಎನ್ನುವ ಅಭಿಪ್ರಾಯ ಎಲ್ಲರಿಂದಲೂ ಬಂದಿದೆ. ರೈತ ಒಂದು ವ್ಯಕ್ತಿಯಲ್ಲ, ಶಕ್ತಿ. ಆತನದು ಸಂಭ್ರಮದ ಬದುಕು ಎಂದು ಶ್ರೀಮಂತ ಚಿತ್ರದ ಮೂಲಕ ಹೇಳಹೊರಟಿದ್ದೇವೆ.
ನಮ್ಮ ದೇಶದಲ್ಲಿ ಶೇ.೮೦ರಷ್ಟು ಜನ ರೈತರೇ ಆಗಿದ್ದಾರೆ. ಈ ಥಾಟ್ ಇಟ್ಟುಕೊಂಡು ಮಾಡಿರುವ ಸಂಗೀತಮಯ ಚಿತ್ರವಿದು. ಚಿತ್ರದಲಲಿ ಎಲ್ಲ ಮನರಂಜನಾತ್ಮಕ ಅಂಶಗಳೂ ಇದೆ. ನಾಯಕಿ ಹಳ್ಳಿಯಲ್ಲೂ ಗ್ಲಾಮರ್ ಆಗಿ ಕಾಣಿಸಿಕೊಂಡಿದ್ದಾರೆ. ೮ ಗೀತೆಗಳ ಜೊತೆಗೆ ಒಗಟು, ಗಾದೆಗಳೂ ಚಿತ್ರದಲ್ಲಿವೆ ಎಂದು ಹೇಳಿದರು. ನಟಿ ಕಲ್ಯಾಣಿ ಮಾತನಾಡಿ ನಾನು ನಾಯಕನ ತಾಯಿ ಶಾಂತವ್ವನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದರು. ನಿರ್ಮಾಪಕ ಸಂಜಯಬಾಬು ಮಾತನಾಡಿ ರೈತನದು ಶ್ರೀಮಂತಿಕೆಯ ಬದುಕು ಎಂಬುದನ್ನು ಈ ಚಿತ್ರದಲ್ಲಿ ತೋರಿಸಿದ್ದಾರೆ ಎಂದರು. ಸಾಧುಕೋಕಿಲ, ರಮೇಶ್ ಭಟ್, ಕುರಿ ರಂಗ ಕೂಡ ಈ ಚಿತ್ರದಲ್ಲಿದ್ದಾರೆ.
ಕೆ.ಎಂ.ವಿಷ್ಣುವರ್ಧನ್ ಹಾಗೂ ರವಿಕುಮಾರ್ ಸನಾ ಅವರ ಕ್ಯಾಮೆರಾ ವರ್ಕ್, ಮಾಸ್ ಮಾದ ಸಾಹಸ, ಮದನ್ ಹರಿಣಿ, ಮೋಹನ್ ಅವರ ನೃತ್ಯ ನಿರ್ದೇಶನ, ಕೆ.ಎ. ಪ್ರಕಾಶ್ ಅವರ ಸಂಕಲನ ಈ ಚಿತ್ರಕ್ಕಿದೆ.