ಲೆಜೆಂಡ್ ಇಂಟರ್ ನ್ಯಾಷನಲ್ ಗ್ರೂಪ್ ಸಂಸ್ಥೆ ಮೂಲಕ ನಿರ್ಮಾಣವಾಗುತ್ತಿರುವ ‘ಅಂದರ್ ಬಾಹರ್‘ ಚಿತ್ರಕ್ಕೆ ಪ್ರಸಾದ್ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಹಾಡುಗಳ ಧ್ವನಿಮುದ್ರಣ ಆರಂಭವಾಗಿದೆ.
ಫಣೀಶ್ ಎಸ್ ರಾಮನಾಥಪುರ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದ ನಾಯಕರಾಗಿ ಶಿವರಾಜಕುಮಾರ್ ಅಭಿನಯಿಸುತ್ತಿದ್ದಾರೆ. ಪಾರ್ವತಿ ಮೆನನ್ ಚಿತ್ರದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಉಳಿದ ತಾರಾಗಣದ ಆಯ್ಕೆ ನಡೆಯುತ್ತಿದೆ.
ಆಸ್ಕರ್ ಪ್ರಶಸ್ತಿ ಪಡೆದ ಜೈಹೋ ಹಾಡಿನಲ್ಲಿ ಹಾಡಿದ್ದ ವಿಜಯಪ್ರಕಾಶ್ ಈ ಚಿತ್ರದ ಸಂಗೀತ ನಿರ್ದೇಶಕರು. ಮೂಲತಃ ಮೈಸೂರಿನವರಾದ ವಿಜಯ್ಪ್ರಕಾಶ್ ಗಾಯಕರಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕರುಗಳಾದ ಇಳಯರಾಜ, ಎ.ಆರ್.ರೆಹಮಾನ್ ಮುಂತಾದವರ ಬಳಿ ಸಂಗೀತದ ಅನುಭವ ಪಡೆದುಕೊಂಡಿದ್ದಾರೆ.
ಹಿಂದಿ, ತೆಲಗು, ತಮಿಳು ದೇಶದ ಇತರ ಭಾಷೆಯ ಸಿನಿಮಾಗಳಿಗೆ ಸಂಗೀತ ನಿರ್ದೇಶಕರಾಗುವ ಅವಕಾಶ ಬಂದರೂ ಕನ್ನಡದ ‘ಅಂದರ್ ಬಾಹರ್‘ ಚಿತ್ರದ ಕಥೆಯನ್ನು ಮೆಚ್ಚಿ ಸಂಗೀತ ನೀಡಲು ಒಪ್ಪಿರುವುದು ಸಂತಸದ ಸಂಗತಿ.
ಎಂ.ಎಸ್.ರಮೇಶ್ ಸಂಭಾಷಣೆ ಬರೆದಿರುವ ಈ ಚಿತ್ರದ ಚಿತ್ರೀಕರಣ ಜನವರಿ ಹದಿನೈದರಿಂದ ಆರಂಭವಾಗಲಿದೆ. ಮೈಸೂರು, ಕೋಲಾರ, ಕಾರವಾರ, ಗೋವಾ ಹಾಗೂ ಗುಜರಾತಿನಲ್ಲಿ ಚಿತ್ರೀಕರಣ ನಡೆಯಲಿದೆ.