ಶ್ರೀಹೊನ್ನಾದೇವಿ ಕಂಬೈನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ‘ಅಂದುಕೊಂಡಂಗಲ್ಲ ಜೀವನ‘ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಕನಕಪುರ ರಸ್ತೆಯ ಲಕ್ಷ್ಮೀಪುರದ ಶ್ರೀಶನೇಶ್ವರ ದೇವಸ್ಥಾನದಲ್ಲಿ ನೆರವೇರಿತು. ಮಕ್ಕಳು ಹಳ್ಳಿ ಕಟ್ಟೆ ಮೇಲೆ ಆಟ ಆಡುವ ಮೊದಲ ಸನ್ನಿವೇಶಕ್ಕೆ ಮೈಕೋ ಚಾಮಯ್ಯ ಆರಂಭ ಫಲಕ ತೋರಿದರು. ಶಿವಕುಮಾರ್ ಕ್ಯಾಮೆರಾ ಚಾಲನೆ ಮಾಡಿದರು. ಕನಕಪುರ ರಸ್ತೆಯ ಕಗ್ಗಲಪುರ ಮುಂತಾದ ಕಡೆ ಚಿತ್ರಕ್ಕೆ ೩೦ದಿನಗಳ ಕಾಲ ಎರಡು ಹಂತದ ಚಿತ್ರೀಕರಣ ನಡೆಯಲಿದೆ.
ಕಾಲೇಜ್ ಹಾಗೂ ಕೌಟುಂಬಿಕ ಕಥಾ ಹಂದರ ಹೊಂದಿರುವ ಈ ಚಿತ್ರವನ್ನು ತೇಜಸ್ವಿನಿ ಕೆ ಬೆಳ್ತಂಗಡಿ ನಿರ್ದೇಶಿಸುತ್ತಿದ್ದಾರೆ. ಶ್ರೀನಿವಾಸಮೂರ್ತಿ ಅವರು ಬರೆದಿರುವ ಕಥೆಗೆ ತೇಜಸ್ವಿನಿ ಅವರೆ ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಅಭಿಜಿತ್ ವಿ ಅಳದಂಗಡಿ ಚಿತ್ರದ ಹಾಡುಗಳನ್ನು ಬರೆದು, ಸಂಗೀತ ನೀಡುತ್ತಿದ್ದಾರೆ. ಯೇಸು ಛಾಯಾಗ್ರಹಣ, ಶಿವರಾಜ್ ಮೇಹು ಸಂಕಲನ ಹಾಗೂ ವೈಲೆಂಟ್ ವೇಲು ಸಾಹಸ ನಿರ್ದೇಶನವಿರುವ ಈ ಚಿತ್ರಕ್ಕೆ ರಾಖಿಸೋನು ಹಿನ್ನಲೆ ಸಂಗೀತ ನೀಡುತ್ತಿದ್ದಾರೆ.
ರಾಘವ್, ಶಾಂತಕುಮಾರ್, ಪ್ರದೀಪ್, ಸುರಕ್ಷ, ಪದ್ಮಶ್ರೀ ಶೆಟ್ಟಿಗಾರ್, ಶ್ರೀನಿವಾಸ ಪ್ರಭು, ಸುಧಾ ಬೆಳವಾಡಿ, ಸೂರಜ್ (ಕಾಮಿಡಿ ಕಿಲಾಡಿಗಳು) ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.