ಎಸ್.ವಿ.ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ `ಜೋಶ್` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ನೂತನ ಪ್ರತಿಭೆಗಳ ಸಮಾಗಮದಲ್ಲಿ ಸಿದ್ದವಾಗಿರುವ ಈ ಚಿತ್ರ ಪರಿಶುದ್ದ ಮನೋರಂಜನೆಯಿಂದ ಕೂಡಿದ್ದು ಎಲ್ಲಾ ವರ್ಗದ ಜನರಿಗೂ ಮೆಚ್ಚುಗೆಯಾಗಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.
ಜನಪ್ರಿಯ ವಾಹಿನಿಗಳಲ್ಲಿ ನಡೆಯುವ ಸ್ಪರ್ಧಾ ಕಾರ್ಯಕ್ರಮಗಳಿಗೆ ಪ್ರತಿಭೆಗಳನ್ನು ಸಂದರ್ಶಿಸಿ ಆಯ್ಕೆ ಮಾಡುವುದ್ದನ್ನು ಕೇಳಿ ತಿಳಿದಿದ್ದೇವೆ. ಆದರೆ ನಿರ್ಮಾಪಕ ಎಸ್.ವಿ.ಬಾಬು ಅವರು ಕನ್ನಡ ಚಿತ್ರರಂಗದಲ್ಲಿ ಯಾರೂ ಮಾಡದ ಸಾಹಸ ಮಾಡಿ ಸೈ ಅನಿಸಿಕೊಂಡವರು. ಕರುನಾಡಿನಲ್ಲಿರುವ ಸಿನೆಮಾಸಕ್ತ ಕಲಾವಿದರನ್ನು ಸೂಕ್ತ ಸ್ಥಳಕ್ಕೆ ಆಹ್ವಾನಿಸಿ, ತಾವು ಹಾಗೂ ನಿರ್ದೇಶಕರು ಜಂಟಿಯಾಗಿ ಅವರನ್ನು ಸಂದರ್ಶಿಸಿ ಪ್ರತಿಭಾವಂತರಿಗೆ ತಮ್ಮ ಚಿತ್ರದಲ್ಲಿ ಪಾತ್ರ ನೀಡಿದ ಹಿರಿಮೆ ಎಸ್.ವಿ.ಬಾಬು ಅವರದು.
ನಾವು ಅಂದುಕೊಂಡ ರೀತಿಯಲ್ಲಿ ಚಿತ್ರ ಮೂಡಿ ಬಂದಿದ್ದು ಪ್ರೇಕ್ಷಕ ಮಹಾಪ್ರಭುಗಳು ನಮ್ಮ ಕೈ ಹಿಡಿಯುವುದರಲ್ಲಿ ಸಂಶಯವಿಲ್ಲ. ನಾವು ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದು ಖಂಡಿತಾ ಎನ್ನುತ್ತಾರೆ ನಿರ್ದೇಶಕ ಶಿವಮಣಿ.
ಕರ್ನಾಟಕದ ರಮಣೀಯ ಸ್ಥಳಗಳಲ್ಲಿ ಚಿತ್ರೀಕರಣವಾಗಿರುವ ಈ ಚಿತ್ರವನ್ನು ಎಸ್.ವಿ.ಬಾಬು ಅವರ ಪುತ್ರ ಸಂಜಯ್ ಬಾಬು ನಿರ್ಮಿಸಿದ್ದಾರೆ. ಶಿವಮಣಿ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ವರ್ಧನ್ ಸಂಗೀತ ಸಂಯೊಜಿಸಿದ್ದಾರೆ, ಬಿ.ಎ.ಮಧು ಸಂಭಾಷಣೆ, ಕೆ.ಎಂ.ಪ್ರಕಾಶ್ ಸಂಕಲನ, ಮೋಹನ್ ಕಲೆ, ನಾಗೇಂದ್ರಪ್ರಸಾದ್, ಕವಿರಾಜ್, ಹೃದಯ ಶಿವ ಹಾಗೂ ಆನಂದ್ ಗೀತರಚನೆ, ರವಿವರ್ಮ, ಜಾಲಿ ಬಾಸ್ಟಿನ್ ಸಾಹಸ, ಸ್ಟಾನ್ಲಿ ಡಿ ಕೋಸ್ಟಾ, ನೋಬಲ್, ಬೃಂದಾ ನೃತ್ಯ, ಮೈಸೂರ್ ಕೃಷ್ಣ ನಿರ್ಮಾಣ ನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ರಾಕೇಶ್, ವಿಷ್ಣು, ಅಕ್ಷಯ್, ಅಲೋಕ್, ಅಮಿತ್, ಜಗನ್ನಾಥ್, ಪೂರ್ಣ, ಸ್ನೇಹ, ಚೇತನ್, ಕರಿಬಸವಯ್ಯ, ರೋಮ ಗಣೇಶ್, ಮಂಡ್ಯ ರಮೇಶ್, ತುಳಸಿ ಶಿವಮಣಿ, ಸುಧಾ ಬೆಳವಾಡಿ ಮುಂತಾದವರಿದ್ದಾರೆ.