ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ ಮನೋರಂಜನ್ ರವಿಚಂದ್ರನ್ ಅಭಿನಯದ ‘ಪ್ರಾರಂಭ‘ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಸದ್ಯದಲ್ಲೇ ಮಾತಿನ ಜೋಡಣೆ ಆರಂಭವಾಗಲಿದೆ. ಬೆಂಗಳುರು, ಚಿಕ್ಕಮಗಳೂರು, ಬಳ್ಳಾರಿ ಮುಂತಾದ ಕಡೆ ಚಿತ್ರೀಕರಣ ನಡೆದಿದೆ.
ಮನು ಕಲ್ಯಾಡಿ ರಚನೆ ಹಾಗೂ ನಿರ್ದೇಶನದ ಈ ಚಿತ್ರವನ್ನು ಜಗದೀಶ್ ಕಲ್ಯಾಡಿ ಅವರು ನಿರ್ಮಿಸುತ್ತಿದ್ದಾರೆ. ಮನು ಅವರು ಈ ಹಿಂದೆ ಹಲವು ಚಿತ್ರಗಳಿಗೆ ಸಂಭಾಷಣೆ ಬರೆದಿದ್ದಾರೆ.
ಪ್ರೇಮಕಥೆಯುಳ್ಳ ಈ ಚಿತ್ರದಲ್ಲಿ ಮನೋರಂಜನ್ ಅವರಿಗೆ ನಾಯಕಿಯಾಗಿ ಕೀರ್ತಿ ಅಭಿನಯಿಸಿದ್ದಾರೆ. ಇದು ಅವರಿಗೆ ಚೊಚ್ಚಲ ಚಿತ್ರ. ಉಳಿದಂತೆ ಕಡ್ಡಿಪುಡ್ಡಿ ಚಂದ್ರು, ಹನುಮಂತೇಗೌ, ರಾಘು ಶ್ರೀವಾಸ್ತವ್, ಶಾಂಭವಿ, ಸೂರಜ್(ಕಾಮಿಡಿ ಕಿಲಾಡಿಗಳು) ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಈ ಹಿಂದೆ ‘ಉಪ್ಪು ಹುಳಿ ಖಾರ‘ ಚಿತ್ರಕ್ಕೆ ಸಂಗೀತ ನೀಡಿದ್ದ, ಪ್ರಜ್ವಲ್ ಪೈ ಈ ಚಿತ್ರಕ್ಕೂ ಸಂಗೀತ ನೀಡುತ್ತಿದ್ದಾರೆ. ಸಂತೋಷ್ ನಾಯಕ್ ಈ ಚಿತ್ರದ ಹಾಡುಗಳನ್ನು ಬರೆದಿದ್ದಾರೆ. ಸುರೇಶ್ ಬಾಬು ಛಾಯಾಗ್ರಹಣ, ವಿಜಿ ಎಂ ಕುಮಾರ್ ಸಂಕಲನ, ವಿಕ್ರಂ ಮೋರ್ ಸಾಹಸ ನಿರ್ದೇಶನ ಹಾಗೂ ರವಿ ಸಂತೆಹೈಕ್ಲು ಕಲಾ ನಿರ್ದೇಶನ ಈ ಚಿತ್ರಕ್ಕಿದೆ.