ರಾಜ್ ಉದಯ್ ಕಥೆ-ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಐರಾ ಚಿತ್ರದ ಮುಹೂರ್ತದ ಕಾರ್ಯಕ್ರಮ ಬನಶಂಕರಿಯಲ್ಲಿರುವ ಉದಯ್ ಹಾಗೂ ಅನಿಲ್ ಅವರ ಸಮಾಧಿಯ ಬಳಿ ನೆರವೇರಿತು. ಆಕ್ಸನ್ ಪ್ರಿನ್ಸ್ ಧೃವಸರ್ಜಾ ಚಿತ್ರದ ಮುಹೂರ್ತದ ದೃಶ್ಯಕ್ಕೆ ಆರಂಭ ಫಲಕ ತೋರಿಸಿದರು. ನಿರ್ಮಾಪಕರ ತಾಯಿಯವರಾದ ಶ್ರೀಮತಿ. ಮೇನಕರವರು ಕ್ಯಾಮರಾ ಚಾಲನೆ ಮಾಡಿದರು. ನಿರ್ದೇಶಕ ರಾಜ್ ಉದಯ್ Third Class, ಛಾಯಾ ಧೀರನ್ ಹಾಗೂ ಭಜರಂಗಿ-2 ಚಿತ್ರಗಳಲ್ಲಿ ವಿಲನ್ ಆಗಿ ಅಭಿನಯಿಸಿದ್ದಾರೆ. ಈಗ ಐರಾ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ಉದಯ್ ಅವರ ಅಕ್ಕನ ಗಂಡ ಕೂಡ ಆಗಿರುವ ರಾಜ್ ಉದಯ್ ತನ್ನ ಬಾಮೈದುನನ ಅಗಲಿಕೆಯ 3 ವರ್ಷಗಳ ಸ್ಮರಣೆಗಾಗಿ ಈ ಚಿತ್ರವನ್ನು ಮಾಡಿ ಅರ್ಪಿಸಲಿದ್ದಾರೆ. ಕರ್ನಾಟಕ ಹಾಗೂ ಕೇರಳ ಸೇರಿದಂತೆ ಹಲವಾರು ಲೊಕೇಶನ್ಗಳಲಿ 45 ದಿನಗಳ ಕಾಲ ಈ ಚಿತ್ರದ ಶೂಟಿಂಗ್ ನಡೆಸುವ ಪ್ಲಾನ್ ಚಿತ್ರತಂಡಕ್ಕಿದೆ. ನವೆಂಬರ್ ೭ಕ್ಕೆ ಅನಿಲ್ ಹಾಗೂ ಉದಯ್ ದುರಂತ ನಡೆದು ೩ ವರ್ಷಗಳಾಗುತ್ತದೆ. ಅವರಿಗೆ ಈ ಚಿತ್ರವನ್ನು ಅರ್ಪಣೆ ಮಾಡುವುದಾಗಿ ನಿರ್ದೇಶಕ ರಾಜ್ಉದಯ್ ತಿಳಿಸಿದರು.
ಶ್ರೀ ಅಂಗಳಾ ಪರಮೇಶ್ವರಿ ಮೂವಿ ಮೇಕರಸ್ ಲಾಂಛನದಲ್ಲಿ ಮಿರುನಾಳಿನಿ ನಾಯ್ಕರ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ವಿಘ್ನೇಶ್ ನಾಗೇಂದ್ರನ್ ಛಾಯಾಗ್ರಹಣ, ಕೌಶಿಕ್ ಹರ್ಷ ಸಂಗೀತ, ಶ್ರೀಕಾಂತ್ ಸಂಕಲನ, ಭೂಷಣ್ ನೃತ್ಯ ನಿರ್ದೇಶನ. ಕುಂಗ್ ಫೂ. ಚಂದ್ರು ಸಾಹಸ, ಅಶೋಕ್ದೇವ್ ಸಹಕಾರ ನಿರ್ದೇಶನವಿದೆ. ತಾರಾಬಳಗದಲ್ಲಿ ಶಿವು, ಕಾರ್ತಿ, ಅಕ್ಷತಾ ಆಯ್ಕೆಯಾಗಿದ್ದು, ಉಳಿದ ತಾರಾಬಳಗದ ಆಯ್ಕೆ ನಡೆಯುತ್ತಿದೆ.