ಹೊಂಬಾಳೆ ಫಿಲಂಸ್ ಲಾಂಛನದಲ್ಲಿ ಮೂಡಿಬಂದಿದ್ದ ಕೆಜಿಎಫ್ ಸಿನಿಮಾ ಇಡೀ ಭಾರತೀಯ ಚಿತ್ರರಂಗ ಮಾತ್ರವಲ್ಲ, ಜಾಗತಿಕ ಸಿನಿಮಾ ಜಗತ್ತು ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ್ದು ಎಲ್ಲರಿಗೂ ತಿಳಿದಿರುವ ವಿಚಾರ. ಈ ಚಿತ್ರದ ತಾಂತ್ರಿಕ ಶ್ರೀಮಂತಿಕೆ, ಕ್ರಿಯಾಶೀಲತೆ, ಕಲಾವಿದರ ನೈಪುಣ್ಯತೆಯನ್ನು ಕಂಡು ಎಲ್ಲರೂ ಬೆರಗಾಗಿದ್ದರು.
ಕೆಜಿಎಫ್ ಚಿತ್ರವನ್ನು ಅಷ್ಟು ದೊಡ್ಡ ಮಟ್ಟಕ್ಕೆ ಕೊಂಡೊಯ್ದಿದ್ದ ನಿರ್ಮಾಪಕ ವಿಜಯ ಕಿರಗಂದೂರು ಅವರ ನಿರ್ಮಾಣದಲ್ಲಿ ಕೆ.ಜಿ.ಎಫ್. ಚಾಪ್ಟರ್೨ ಇಂದು ಮುಹೂರ್ತ ಆಚರಿಸಿಕೊಂಡಿದೆ. ಕಂಠೀರವ ಸ್ಟುಡಿಯೋದಲ್ಲಿ ಇಂದು ಮುಹೂರ್ತ ಸಮಾರಂಭ ನೆರವೇರಿದೆ. ನಿರ್ದೇಶಕ ಪ್ರಶಾಂತ್ ನೀಲ್ ರವರ ತಾಯಿ ಶ್ರೀಮತಿ ಭಾರತಿ ಸುಭಾಷ್ ಕ್ಯಾಮೆರಾ ಸ್ವಿಚ್ ಆನ್ ಮಾಡಿದರು. ನಿರ್ಮಾಪಕ ವಿಜಯ್ ಕಿರಗಂದೂರು ಅವರ ಸಹೋದರ ಮಂಜಣ್ಣ ಕ್ಲಾಪ್ ಮಾಡಿದರು. ಕೆ.ಜಿ.ಎಫ್ ಚಾಪ್ಟರ್೨ ಚಿತ್ರ ಏಪ್ರಿಲ್ ತಿಂಗಳಿನಿಂದ ಚಿತ್ರೀಕರಣ ಪ್ರಾರಂಭವಾಗಲಿದೆ.
ಪ್ರಶಾಂತ್ ನೀಲ್ ಕಥೆ ಚಿತ್ರಕಥೆ, ನಿರ್ದೇಶನ, ಸಂಭಾಷಣೆ ಪ್ರಶಾಂತ್ ನೀಲ್, ಚಂದ್ರಮೌಳಿ, ಕೆ ಭುವನ್ ಛಾಯಾಗ್ರಹಣ, ರವಿ ಬಸ್ರೂರ್ ಸಂಗೀತ, ಶಿವಕುಮಾರ್ ಕಲಾ ನಿರ್ದೇಶನ ಚಿರುವ ಈ ಚಿತ್ರಕ್ಕೆ ಕಾರ್ತಿಕ್ ಮತ್ತು ರಾಮರಾವ್ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ, ಚಂಪಕಧಾಮ ಬಾಬು, ಕುಮಾರ್, ಗಗನ್ ಮೂರ್ತಿ ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದೆ.
ತಾರಾಗಣದಲ್ಲಿ ರಾಕಿಂಗ್ ಸ್ಟಾರ್ ಯಶ್, ಅನಂತ್ ನಾಗ್, ಶ್ರೀನಿಧಿ ಶೆಟ್ಟಿ, ಮಾಳವಿಕಾ, ಮಾಸ್ಟರ್ ಅನಮೋಲ್, ನಾಗಾಭರಣ, ಗೋವಿಂದೇಗೌಡ, ಅವಿನಾಶ್, ರಾಮ್, ಲಕ್ಕಿ, ಅಯ್ಯಪ್ಪ ಶರ್ಮ ಮುಂತಾದವರಿದ್ದಾರೆ.