ಕೃಷ್ಣಯ್ಯ ಹಾಗೂ ಮೋಹನ್ ನಿರ್ಮಾಣದ ಕರಿ ಚಿರತೆ ಚಿತ್ರಕ್ಕೆ ಬಾಂಬೆಯಿಂದ ಐಟಂ ನೃತ್ಯಗಾರ್ತಿ ರಚನಾಮೌರ್ಯ ಬಂದು ನರ್ತಿಸಿ ಹೋಗಿದ್ದಾರೆ. ಗಜ ಹಾಗೂ ರಾಮ್ ಯಶಸ್ವಿ ಚಿತ್ರಗಳ ನಿರ್ದೆಶಕ ಮಾದೇಶ್ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಬ್ಲಾಕ್ ಕೋಬ್ರ ವಿಜಯ್ ಕರಿ ಚಿರತೆಯಾಗಿ ಅಭಿನಯಿಸುತ್ತಿದ್ದಾರೆ. ಈಗಾಗಲೇ ಮೈಸೂರು ಹಾಗೂ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆದಿದ್ದು, ಬಾಕಿ ಉಳಿದ ಹಾಡೊಂದನ್ನು ಮಾಗಡಿ ರಸ್ತೆಯ ಸನ್ವ್ಯಾಲಿ ಕ್ಲಬ್ನಲ್ಲಿ ಮೊನ್ನೆ ಚಿತ್ರೀಕರಿಸಲಾಯಿತು. ರಂಗಾಯಣರಘು ರಸ್ತೆ ಪಕ್ಕದಲ್ಲಿದ್ದ ಡಾಬಾ ಒಂದಕ್ಕೆ ಬರುತ್ತಾರೆ. ಅಲ್ಲಿ, ನಟಿ ರಚನಾಮೌರ್ಯ ಹಾಗೂ ಸಂಘಡಿಗರ ಅಮೋಘ ನೃತ್ಯ ಪ್ರದರ್ಶನ ಇರುತ್ತದೆ. ಕಳೆದ ಮಂಗಳವಾರದಿಂದ ಮೂರು ದಿನಗಳ ಕಾಲ ಈ ಹಾಡನ್ನು ಚಿತ್ರೀಕರಿಸಲಾಯಿತು.
ಜೀವನದಲ್ಲಿ ನಮಗಿರುವ ಆಸೆ ಒಂದಾಗಿದ್ದರೆ, ನಡೆಯುವುದೇ ಬೇರೆಯಾಗಿರುತ್ತದೆ. ಆ ರೀತಿಯ ಘಟನೆ ನಾಯಕನ ಜೀವನದಲ್ಲಿ ಆದಾಗ ಆತ ಭ್ರಮನಿರಸನಗೊಂಡು ಹುಚ್ಚನಂತಾಗುತ್ತಾನೆ. ನಾಯಕ ವಿಜಯ್ ಈ ಪಾತ್ರವನ್ನು ತುಂಬಾ ಚೆನ್ನಾಗಿ ಮಾಡಿದಾರೆ ಎನ್ನುತ್ತಾರೆ ನಿರ್ದೇಶಕ ಮಾದೇಶ್. ಶರ್ಮಿಳಾ ಮಾಂಡ್ರೆ ಹಾಗೂ ಯಜ್ಞ ಶೆಟ್ಟಿ ಇಬ್ಬರು ನಾಯಕಿಯರಿದ್ದು, ಜೈಜಗದೀಶ್, ರಂಗಾಯಣರಘು ಸಂಗೀತ, ಸುಧಾ ಬೆಳವಾಡಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಸಾಧುಕೋಕಿಲರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.