ಕಲಾವಿದ ಯತಿರಾಜ್ ಅವರ ಮೂರು ಕಿರುಚಿತ್ರಗಳು
Posted date: 21 Thu, May 2020 – 12:33:14 PM

 ಇಡೀ ವಿಶ್ವಕ್ಕೆ  ಅಪಾಯ ಉಂಟು ಮಾಡಿರುವ ಕೊರೊನಾ ಎಂಬ ಮಹಾಮಾರಿಯ ಹೊಡೆತಕ್ಕೆ ಸಿಕ್ಕಿ ಎಲ್ಲಾ ದೇಶಗಳು ಲಾಕ್‌ಡೌನ್ ಆಗಿದೆ. ಇದರಿಂದ ಎಲ್ಲರೂ ಮನೆಯಲ್ಲೆ ಇರಬೇಕಾದ ಸಂದಿಗ್ಧ  ಪರಿಸ್ಥಿತಿ ಒದಗಿಬಂದಿದೆ. ಈ ಅವಧಿಯಲ್ಲಿ ಚಿತ್ರರಂಗದ ಒಂದಷ್ಟು ಮಂದಿ ಸಮಯ ವ್ಯರ್ಥ ಮಾಡದೆ ಇದರ ಕುರಿತಂತೆ ಜಾಗೃತಿ  ಮೂಡಿಸಲು ಕಿರುಚಿತ್ರಗಳನ್ನು ಮಾಡುತ್ತಾ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ್ದಾರೆ. ಆ ಸಾಲಿನಲ್ಲಿ ನಟ ಯತಿರಾಜ್ ಕೂಡ ಮೂರು ಚಿತ್ರಗಳನ್ನು ತಾವೇ ನಿರ್ದೇಶಿಸಿ, ನಟಿಸಿ, ನಿರ್ಮಿಸಿದ್ದಾರೆ.

ಹಣದ ಸಮಸ್ಯೆ ಕುರಿತಂತೆ "ನಿಮ್ಮತ್ರ ದುಡ್ಡಿದೆಯಾ?" ಎಂಬ ಕಿರುಚಿತ್ರದಲ್ಲಿ ಸರ್ಕಾರವು ದಿಢೀರ್ ಎಂದು ಎಲ್ಲಾ ವಹಿವಾಟುಗಳಿಗೆ ತಡೆ ಹಿಡಿದು ಜನರು ಹೊರ ಹೋಗದಂತೆ ಆದೇಶ ಹೊರಡಿಸಿರುತ್ತದೆ. ಇದರಿಂದ ಉಳಿತಾಯ ಮಾಡದೆ ಇರುವ ಜನರಿಗೆ ಹಣದ ಸಮಸ್ಯೆ ಯಾವ ರೀತಿ ಎದುರಾಗುತ್ತದೆ ಎಂಬುದನ್ನು ತೋರಿಸಲಾಗಿದೆ. ಹಾಗೆಯೇ ಭವಿಷ್ಯದ ಬಗ್ಗೆ ಯೋಚಿಸಿರಿ ಎಂಬುದಾಗಿ ಸಂದೇಶದಲ್ಲಿ ಹೇಳಲಾಗಿದೆ.

ಕೊರೊನಾ ವಾರಿಯರ‍್ಸ್ ಅಂದರೆ ವೈದ್ಯರು, ಪೊಲೀಸ್ ಇವರುಗಳ ಕೆಲಸ ಶ್ಲಾಘನೀಯವಾಗಿದೆ. ದಿನದ ೮-೧೦ ಗಂಟೆ ಸೇವೆ ಸಲ್ಲಿಸಿ ಮನೆಗೂ ಬಂದರೂ, ತುರ್ತು ಕರೆ ಬಂದಾಗ,  ಕುಟುಂಬ ಲೆಕ್ಕಿಸದೆ ಪುನ: ಕರ್ತವ್ಯಕ್ಕೆ ಹಾಜರಾಗುತ್ತಾರೆ. ಇದನ್ನು ನೋಡಿದಾಗ ನಿಜಕ್ಕೂ ಇಂತಹವರ  ಮೇಲೆ ಕನಿಕರ ಬಂದು, ಗೌರವ ಭಾವನೆ ಬರುವಂತೆ ಮಾಡುವುದು ಎರಡನೇ ಶಾರ್ಟ್ ಫಿಲಂ ಉದ್ದೇಶವಾಗಿದೆ.

ಮೂರು ಹಾಗೂ ಕೊನೆಯದು "ಎನಿಥಿಂಗ್ ಕ್ಯಾನ್ ಹ್ಯಾಪನ್ ಓವರ್ ಎ ಡ್ರಿಂಕ್ "?. ಲಾಕ್‌ಡೌನ್ ಸಮಯದಲ್ಲಿ ಬಾರ್, ವೈನ್ ಸ್ಟೋರ‍್ಸ್‌ಗಳನ್ನು ತೆರೆಯದಂತೆ ಆದೇಶ  ನೀಡಲಾಗಿತ್ತು. ಆದರೂ ಸಿರಿವಂತರು ಹೇಗೋ ತರಿಸಿಕೊಂಡು ಇಚ್ಚೆಯನ್ನು ಪೂರೈಸಿಕೊಳ್ಳುತ್ತಾರೆ.  ಬಡವರಿಗೆ ಅದು ಕೈಗೆಟುಕದು. ಇಂತಹುದೆ ಪರಿಸ್ಥಿತಿ ಕೆಳವರ್ಗದವನಿಗೆ ಒದಗಿಬಂದು, ಖಿನ್ನತೆಯಿಂದ ಎಣ್ಣೆ ಸಿಗಲಿಲ್ಲವೆಂದು ಆತ್ಮಹತ್ಯೆಗೆ ಶರಣಾಗುತ್ತಾನೆ. ಸದರಿ ಘಟನೆಯನ್ನು ಆಹಾರ ಸರಬರಾಜು ಮಾಡುವ ಹುಡುಗನೊಬ್ಬ ಶ್ರೀಮಂತ ಕುಡುಕನಿಗೆ ಹೇಳುತ್ತಾನೆ. ಇದರಿಂದ ಮನನೊಂದು ಅವನು  ತನ್ನ ಎಣ್ಣೆ ಬಾಟಲಿಯನ್ನು  ಕಸದಬುಟ್ಟಿಗೆ ಹಾಕುತ್ತಾನೆ.ಕುಡಿತ ಆರೋಗ್ಯಕ್ಕೆ ಒಳ್ಳೆಯದಲ್ಲವೆಂದು ಸಂದೇಶದ ಮೂಲಕ ಹೇಳಲಾಗಿದೆ.

ಮೂರು ಕಿರುಚಿತ್ರಗಳನ್ನು ಮನೆಯಲ್ಲಿಯೇ ಚಿತ್ರೀಕರಿಸಿ, ಇನ್ಸ್‌ಪೆಕ್ಟರ್, ವೈದ್ಯ, ಕುಡುಕ, ಸಪ್ಲೈಯರ್, ಗೆಳೆಯ ಎಲ್ಲಾ ಪಾತ್ರಗಳನ್ನು ಯತಿರಾಜ್ ಒಬ್ಬರೇ ನಿಭಾಯಿಸಿರುವುದು ವಿಶೇಷ. ಜೊತೆಗೆ ಕತೆ, ಚಿತ್ರಕತೆ,ಸಂಭಾಷಣೆ, ಸಂಕಲನ ಇವರದೆ ಆಗಿರುತ್ತದೆ. ಇವರ ವಿದ್ಯಾರ್ಥಿ ಸೋನು ಸಾಗರ ಶೂಟ್ ಮಾಡಲು ಸಹಾಯ ಮಾಡಿದ್ದಾರಂತೆ. ಎಲ್ಲವು ವೈರಲ್ ಆಗಿದ್ದು ವೀಕ್ಷಕರು, ಸಿನಿಪಂಡಿತರಿಂದ ಪ್ರಶಂಸೆಗೆ ಪಾತ್ರವಾಗಿದೆ..

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed