ಕಳೆದ ಹಲವಾರು ವರ್ಷಗಳಿಂದ ಚಲನಚಿತ್ರರಂಗದಲ್ಲಿ ಸಂಗೀತ ನಿರ್ದೇಶಕನಾಗಿ ಸೇವೆ ಸಲ್ಲಿಸುತ್ತಿರುವ ಗುರುರಾಜ್ ಅವರು ಈಗ ಮತ್ತೊಂದು ಸಾಹಸಕ್ಕೆ ಮುಂದಾಗಿದ್ದಾರೆ. ನಾಟಕ ಪ್ರೇಮಿಗಳಿಗೆ ಹಾಗೂ ಕಲಾವಿದರಿಗೆ ಉಪಯೋಗವಾಗಲೆಂದು ಸುಸಜ್ಜಿತ ಹಾಗೂ ಅತ್ಯಾಧುನಿಕ ಸೌಲಭ್ಯಗಳುಳ್ಳ ನೂತನ ಸಭಾಂಗಣವನ್ನು ನಿರ್ಮಿಸಿದ್ದಾರೆ. ಬಸವನಗುಡಿ, ಗಾಂಧಿಬಜಾರ್ ಹಾಗೂ ಚಾಮರಾಜಪೇಟೆಯ ಸುತ್ತಮುತ್ತಲಿನ ಭಾಗದ ಕಲಾಸಕ್ತರಿಗೆ ಅನುಕೂಲಕರವಾಗಲೆಂದು ಸೌಂಡ್ ಆಫ್ ಮ್ಯೂಸಿಕ್ ಖ್ಯಾತಿಯ ಗುರುರಾಜ್ ಅವರು ಗುರು ವೇದಿಕೆ ಎಂಬ ಸುಸಜ್ಜಿತವಾದ ಆಡಿಟೋರಿಯಂನ್ನು ರಾಮಕೃಷ್ಣ ಮಠದ ಬಳಿ ಆರಂಭಿಸಿದ್ದಾರೆ. ಇಲ್ಲಿ ನಾಟಕ, ರಂಗತಾಲೀಮು, ಕರೋಕೆ ಕ್ಲಬ್ ಹಾಗೂ ಇತರೆ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲು ಹಾಗೂ ರಹರ್ಸಲ್ ಹಾಲ್ ಥರವೂ ಇದನ್ನು ಉಪಯೋಗಿಸಬಹುದು. ಅಲ್ಲದೆ ಸಿನಿಮಾ ಫೋಟೋಶೂಟ್, ಆಡ್ ಫಿಲಂನಂಥ ಸಿನಿಮಾ ಸಂಬಧಿತ ಚಟುವಟಿಕೆಗಳಿಗೆ ಹಾಗೂ ಪತ್ರಿಕಾಗೋಷ್ಟಿಗಳನ್ನು ಸಹ ಆಯೋಜಿಸಲು ಅನುಕೂಲವಾಗುವಂತೆ ಸುಮಾರು ೭೫ ಆಸನಗಳುಳ್ಳ ವಿಶೇಷ ದ್ವನಿ ಹಾಗೂ ಬೆಳಕಿನ ವ್ಯವಸ್ಥೆ ಹೊಂದಿರುವ ಹವಾನಿಯಂತ್ರಿತ ಸಭಾಂಗಣವನ್ನು ಇಲ್ಲಿ ನಿರ್ಮಿಸಲಾಗಿದೆ. ಈ ಗುರು ವೇದಿಕೆಯನ್ನು ಚಲನಚಿತ್ರ ನಿರ್ಮಾಪಕರಾದ ಕೆ.ಆರ್. ಮುರಳೀಕೃಷ್ಣ ಅವರು ಇತ್ತೀಚೆಗೆ ಉದ್ಘಾಟಿಸಿದರು. ಆಸಕ್ತರು ಗುರು ವೇದಿಕೆ, ೧೧೪, ಹಯವದನರಾವ್ ರಸ್ತೆ, ರಾಮಕೃಷ್ಣ ಮಠದ ಬಳಿ, ಬಸವನಗುಡಿ ಬೆಂಗಳೂರು. ಇಲ್ಲಿ ಸಂಪರ್ಕಿಸಬಹುದು.
ಮಂಗಳವಾರ ರಜಾದಿನ ಕ್ಷೌರಿಕರಿಗೆ ರಜಾದಿನ
ಮಂಗಳವಾರ ಬಂತೆಂದರೆ ಕ್ಷೌರಿಕರ ಅಂಗಡಿಗಳಿಗೆಲ್ಲಾ ರಜಾದಿನ. ಇದೇ ಟೈಟಲ್ ಇಟ್ಟುಕೊಂಡು ಹೊಸಬರ ತಂಡವೊಂದು ಚಿತ್ರ ನಿರ್ಮಾಣ ಮಾಡುತ್ತಿದೆ. ತ್ರಿವರ್ಗ ಫಿಲಂಸ್ ಲಾಂಛನದಲ್ಲಿ ಟೀಮ್ ತ್ರಿವರ್ಗ ನಿರ್ಮಾಣ ಮಾಡುತ್ತಿರುವ ಮಂಗಳವಾರ ರಜಾದಿನ ಎಂಬ ಈ ಚಿತ್ರಕ್ಕೆ ಈಗಾಗಲೇ ೧೪ ದಿನಗಳ ಕಾಲ ಚಿತ್ರೀಕರಣವನ್ನು ಸಹ ನಡೆಸಲಾಗಿದೆ. ಒಬ್ಬ ಬಾರ್ಬರ್ ಜೀವನದ ಹಾದಿಯ ಮೇಲೆ ಈ ಚಿತ್ರದ ಕಥಾನಕವನ್ನು ಹೆಣೆಯಲಾಗಿದ್ದು, ಆತನ ಕನಸು, ಗುರಿಯ ಸುತ್ತ ಈ ಚಿತ್ರದ ಕಥೆ ನಡೆಯುತ್ತದೆ. ತನ್ನ ಗುರಿಗೋಸ್ಕರ ಆತ ಏನೆಲ್ಲ ಮಾಡುತ್ತಾನೆ ಎಂಬುದನ್ನು ಕಮರ್ಷಿಯಲ್ ವೇನಲ್ಲಿ ಹೇಳುವ ಪ್ರಯತ್ನವನ್ನು ನಿರ್ದೇಶಕ ಯುವಿನ್ ಮಾಡಿದ್ದಾರೆ. ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಜವಾಬ್ದಾರಿಯನ್ನು ಯುವಿನ್ ಅವರೇ ಹೊತ್ತಿದ್ದಾರೆ. ಈ ಚಿತ್ರದ ಶೇ.೬೦ರಷ್ಟು ಭಾಗದ ಕಥೆ ನಡೆಯುವುದು ಒಂದು ಕಟಿಂಗ್ ಷಾಪ್ನಲ್ಲೇ ಎನ್ನುವುದು ಇಲ್ಲಿ ವಿಶೇಷ.
ಉದಯಲೀಲಾ ಈ ಚಿತ್ರದ ಛಾಯಾಗ್ರಾಹಕರಾಗಿದ್ದು, ಪ್ರಚೋಟ್ ಡಿ ಸೋಜಾ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಮಧುಕುಮಾರ್ ಸಂಕಲನಕಾರರಾಗಿದ್ದಾರೆ. ಕಿರಿಕ್ ಪಾರ್ಟಿಯ ಚಂದನ್ ಆಚಾರ್ಯ, ಲಾಸ್ಯ ನಾಗರಾಜ್ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆ, ಹರಿಣಿ, ನಂದನ್ ರಾಜ್, ಜಹಾಂಗೀರ್, ರಜನೀಕಾಂತ್ ಈ ಚಿತ್ರದ ಉಳಿದ ಪಾತ್ರಗಳಲ್ಲಿ ನಟಿಸುತ್ತಿದ್ದು, ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ಸ್ಟಾರ್ ನಟರೊಬ್ಬರ ಸ್ಪೆಷಲ್ ಎಂಟ್ರಿ ಇರುತ್ತದೆ.