ಕನ್ನಡ ರಾಜ್ಯೋತ್ಸವದ ತಿಂಗಳಿನಲ್ಲಿ ಕನ್ನಡ ನಾಡು ನುಡಿಯ ಕುರಿತ ಗಂಭೀರ ವಿಚಾರಗಳ ಸುತ್ತ ಮನರಂಜನಾತ್ಮಕವಾಗಿ ರೂಪಿಸಿರುವ ‘ಕಾಳಿದಾಸ ಕನ್ನಡ ಮೇಷ್ಟ್ರು’ ತೆರೆಗೆ ಬರುತ್ತಿದೆ. ಇದೇ ಶುಕ್ರವಾರ ರಿಲೀಸಾಗುತ್ತಿರುವ ಈ ಚಿತ್ರವನ್ನು ಗೀತ ಸಾಹಿತಿ ಕವಿರಾಜ್ ನಿರ್ದೇಶಿಸಿದ್ದಾರೆ.
ನವೆಂಬರ್ ತಿಂಗಳಿನಲ್ಲಿ ಮಾತಿನ ಮಲ್ಲ, ನವರಸ ನಾಯಕ ಜಗ್ಗೇಶ್ ಅಭಿನಯದ ಸಿನಿಮಾ ಬಿಡುಗಡೆ ಆಗುತ್ತಿರುವುದು ವಿಶೇಷ. ಮೇಘನ ಗಾಂವ್ಕರ್ ಈ ಚಿತ್ರದ ಕಥಾ ನಾಯಕಿ. ಈ ಚಿತ್ರದಲ್ಲಿ 21 ಜನ ಕನ್ನಡದ ನಾಯಕಿಯರು ಒಂದೇ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಅಸಲಿಗೆ ‘ಕಾಳಿದಾಸ ಕನ್ನಡ ಮೇಷ್ಟ್ರು’ ಕನ್ನಡ ವರ್ಸಸ್ ಇಂಗ್ಲಿಷ್ ವ್ಯಾಮೋಹದ ಕುರಿತಾದ ಸಿನಿಮಾ. ಕವಿರಾಜ್ ಈ ಹಿಂದೆ ‘ಮದುವೆಯ ಮಮತೆಯ ಕರೆಯೋಲೆ’ ಸಿನಿಮಾ ನಿರ್ದೇಶನ ಮಾಡಿದವರು. ಪೋಷಕ ಕಲಾವಿದರುಗಳಲ್ಲಿ ಅಂಬಿಕ, ತಬಲಾ ನಾಣಿ, ಟಿ ಎಸ್ ನಾಗಾಭರಣ, ಸುಂದರ್, ಯತಿರಾಜ್, ಉಷಾ ಭಂಡಾರಿ, ರಘು ರಾಮನಕೊಪ್ಪ, 16 ಮಕ್ಕಳಲ್ಲಿ ಪ್ರಣೀತಾ, ಆರ್ಯ, ಗೌತಮ್, ಗಣೇಶ ಶ್ರಾವಣಿ ಪ್ರಮುಖ ಪಾತ್ರ ಮಾಡಿದ್ದಾರೆ.
ಯು ಆರ್ ಉದಯಕುಮಾರ್ ಈ ಚಿತ್ರದ ನಿರ್ಮಾಪಕರು, ಗುರುಕಿರಣ್ ಈ ಚಿತ್ರಕ್ಕೆ ರಾಗ ಸಂಯೋಜನೆ ಮಾಡಿದ್ದಾರೆ. ಗುಂಡ್ಲುಪೇಟೆ ಸುರೇಶ್ ಛಾಯಾಗ್ರಹಣ, ಕೆ ಎಂ ಪ್ರಕಾಶ್ ಸಂಕಲನ, ಥ್ರಿಲ್ಲರ್ ಮಂಜು ಸಾಹಸ, ಮೋಹನ್ ಬಿ ಕೆರೆ ಕಲಾ ನಿರ್ದೇಶನ ಮಾಡಿದ್ದಾರೆ.