ಪಿ.ವಾಸು ನಿರ್ದೇಶನದಲ್ಲಿ ಸೂಪರ್ಸ್ಟಾರ್ ಉಪೇಂದ್ರ ನಾಯಕನಾಗಿ ಅಭಿನಯಿಸುತ್ತಿರುವ ‘ಆರಕ್ಷಕ ಚಿತ್ರಕ್ಕೆ ಕೇರಳದಲ್ಲಿ ಇಪ್ಪತ್ತು ದಿನಗಳ ಚಿತ್ರೀಕರಣ ನಡೆದಿದೆ. ಸಾಂಸ್ಕೃತಿಕ ನಗರಿ ಮೈಸೂರು ಹಾಗೂ ಚೆನ್ನಪಟ್ಟಣಗಳಲ್ಲಿ ಚಿತ್ರೀಕರಣ ಪೂರೈಸಿದ ಚಿತ್ರತಂಡ ಕೇರಳದತ್ತ ಪಯಣಿಸಿತ್ತು. ಈಗ ಕೇರಳದಿಂದ ಬೆಂಗಳೂರಿಗೆ ‘ಆರಕ್ಷಕನ ತಂಡದ ಆಗಮನವಾಗಿದೆ. ಉಪೇಂದ್ರ, ರಾಗಿಣಿ, ಶಯಾಜಿ ಶಿಂಧೆ ಹಾಗೂ ಸಹ ಕಲಾವಿದರು ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.
ಉದಯರವಿ ಫ಼ಿಲಂಸ್ ಲಾಂಛನದಡಿಯಲ್ಲಿ ಕೃಷ್ಣಪ್ರಜ್ವಲ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಆಗಸ್ಟ್ ನಾಲ್ಕರಿಂದ ಅಬ್ಬಾಯಿನಾಯ್ಡು ಸ್ಟುಡಿಯೋದಲ್ಲಿ ನಿರ್ಮಿಸಲಾಗುತ್ತಿರುವ ಸೆಟ್ನಲ್ಲಿ ಚಿತ್ರೀಕರಣ ನಡೆಯಲಿದೆ.
ನಿರ್ದೇಶಕರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಗುರುಕಿರಣ್ ಸಂಗೀತವಿರುವ ಚಿತ್ರಕ್ಕೆ ಪಿ.ಕೆ.ಎಚ್ ದಾಸ್ ಅವರ ಛಾಯಾಗ್ರಹಣವಿದೆ. ಸುರೇಶ್ ಅರಸ್ ಸಂಕಲನ, ವೇಣು ಕಲಾ ನಿರ್ದೇಶನ, ಡಿಫ಼ರೆಂಟ್ ಡ್ಯಾನಿ ಸಾಹಸ ನಿರ್ದೇಶನ ಮತ್ತು ಚಂಪಕಧಾಮ ಬಾಬು ನಿರ್ಮಾಣ ನಿರ್ವಹಣೆಯಿರುವ ಈ ಚಿತ್ರದ ತಾರಾಬಳಗದಲ್ಲಿ ಉಪೇಂದ್ರ, ಸೀತಾ, ಸದಾ, ರಾಗಿಣಿ, ಶಯಾಜಿ ಶಿಂಧೆ, ಶರಣ್ ಮುಂತಾದವರಿದ್ದಾರೆ.