ಲಾಕ್ ಡೌನ್ ನಂತರದ ಮೊದಲ ಚಿತ್ರವಾಗಿ ಮುಹೂರ್ತ ಆಚರಿಸಿಕೊಂಡ `ಆಸ್ಕರ್ ಕೃಷ್ಣ` ನಿರ್ದೇಶಿಸಿ, ನಾಯಕನಟರಾಗಿ ಅಭಿನಯಿಸಿರುವ `ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ` ಚಿತ್ರವು ತನ್ನ ಸಂಪೂರ್ಣ ಚಿತ್ರೀಕರಣವನ್ನು ಮುಗಿಸಿಕೊಂಡಿದೆ. ಆ ಮೂಲಕ ಲಾಕ್ಡೌನ್ ನಂತರ ಚಿತ್ರೀಕರಣ ಮುಗಿಸಿದ ಮೊದಲ ಕನ್ನಡ ಚಿತ್ರವೂ ಇದಾಗಿದೆ. ಬೆಂಗಳೂರು, ತುಮಕೂರು, ಕುಣಿಗಲ್ ಹಾಗೂ ಮುಂತಾದ ಸ್ಥಳಗಳಲ್ಲಿ ಬಿರುಸಿನಿಂದ ಚಿತ್ರೀಕರಣ ನಡೆಸಿದ ಚಿತ್ರತಂಡವು, ಇತ್ತೀಚೆಗೆ ಚಿತ್ರೀಕರಣದ ಕೊನೆಯ ದಿನ ಕುಂಬಳಕಾಯಿ ಹೊಡೆದು ಸಂಭ್ರಮಿಸಿದೆ.
ಲಾಕ್ ಡೌನ್ ಪರಿಸ್ಥಿತಿಯಿಂದ ಕೆಲಸವಿಲ್ಲದೆ ಕಂಗೆಟ್ಟಿದ್ದ ಚಿತ್ರದ ಕಾರ್ಮಿಕರಿಗೆ, ತಂತ್ರಜ್ಞರಿಗೆ ಹಾಗೂ ಕಲಾವಿದರಿಗೆ ಈ ಚಿತ್ರವು ವರವಾಗಿ ಪರಿಣಮಿಸಿದ್ದಲ್ಲದೇ, ಇತರೆ ಚಿತ್ರಗಳು ಚಿತ್ರೀಕರಣ ಪ್ರಾರಂಭಿಸಲು ಪ್ರೇರೇಪಣೆಯಾಯಿತು. ಮುಂದೆ ಚಿತ್ರಮಂದಿರಗಳು ತೆರೆದ ಕೂಡಲೇ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ಚುರುಕಿನಿಂದ ಕೆಲಸ ಮಾಡುತ್ತಿದೆ.
ಇದೊಂದು ಕಾಮಿಡಿ ಮಿಶ್ರಿತ ಕ್ರೈಂ ಕಥಾಹಂದರವುಳ್ಳ ಚಿತ್ರವಾಗಿದ್ದು, ಇದರಲ್ಲಿ ಸ್ನೇಹ, ಪ್ರೀತಿ, ದ್ವೇಷ, ರಾಜಕೀಯ, ಸಾಮಾಜಿಕ ಸ್ಥಿತಿ, ಕಾನೂನು ವ್ಯವಸ್ಥೆ ಇದೆಲ್ಲವೂ ಚಿತ್ರದಲ್ಲಿನ ಪಾತ್ರಗಳ ಮೂಲಕ ಅಭಿವ್ಯಕ್ತಿಗೊಂಡಿವೆ. ತಿಂಗಳುಗಳಿಂದ ಥಿಯೇಟರುಗಳಲ್ಲಿ ಸಿನಿಮಾ ನೋಡದೆ ಕಂಗೆಟ್ಟಿರುವ ಚಿತ್ರಪ್ರೇಮಿಗಳಿಗೆ ಇದೊಂದು ಫುಲ್ ಮೀಲ್ಸ್ ಆಗಲಿದೆ ಎನ್ನುತ್ತಾರೆ ನಿರ್ದೇಶಕ `ಆಸ್ಕರ್ ಕೃಷ್ಣ`.
ತಮ್ಮ ವಿಶಿಷ್ಟ ಹವ್ಯಾಸ ಹಾಗೂ ವ್ಯಕ್ತಿತ್ವದೊಂದಿಗೆ ಈಗಾಗಲೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಸೆವೆನ್ ರಾಜ್ ರವರು `ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ` ಚಿತ್ರವನ್ನು ನಿರ್ಮಿಸಿರುವುದರ ಜೊತೆಗೆ ಒಂದು ವಿಶೇಷ ಪಾತ್ರವನ್ನೂ ನಿರ್ವಹಿಸಿದ್ದಾರೆ. ಲೋಕೇಂದ್ರ ಸೂರ್ಯ ರವರು ಈ ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ ಒದಗಿಸಿ ಅತಿ ಮುಖ್ಯ ಪಾತ್ರವೊಂದನ್ನೂ ನಿಭಾಯಿಸಿದ್ದಾರೆ. ಮಲಯಾಳಿ ಚೆಲುವೆ `ಗೌರಿ ನಾಯರ್` ನಾಯಕಿಯಾಗಿ ಮಿಂಚಿದ್ದಾರೆ.
ಉಳಿದಂತೆ ಅನಂತ್ ಆರ್ಯನ್ ಸಂಗೀತ, ಗಗನ್ ಕುಮಾರ್ ಛಾಯಾಗ್ರಹಣ, ಮರಿಸ್ವಾಮಿ ಸಂಕಲನ, ವೈಲೆಂಟ್ ವೇಲು ಸಾಹಸ ಅಕುಲ್ ನೃತ್ಯ, ಶ್ರೀಧರ್ ಸಿಯಾ ಹಾಗೂ ಕೃಷ್ಣಕುಮಾರ್ ರವರ ಸಹನಿರ್ದೇಶನ ಈ ಚಿತ್ರಕ್ಕಿದೆ.