ಗಿಣಿ ಹೇಳಿದ ಕಥೆ ಚಿತ್ರ ಒಂದು ಉತ್ಸಾಹಿ ಯುವ ಪಡೆಯನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದೆ. ಹೊಸಾ ಆವೇಗ ಹೊಂದಿರೋ ಹುರುಪಿನ ತಂಡದಿಂದಲೇ ಈ ಚಿತ್ರ ರೂಪುಗೊಂಡಿದೆ. ಈಗಾಲೇ ತನ್ನ ಅಚ್ಚ ಕನ್ನಡದ ಟೈಟಲ್ ಸೇರಿದಂತೆ ನಾನಾ ದಿಕ್ಕಿನಿಂದ ಸುದ್ದಿಯಲ್ಲಿರುವ ಈ ಚಿತ್ರ ಬಿಡುಗಡೆಗೆ ದಿನಾಂಕ ನಿಗಧಿಯಾಗಿದೆ. ಇದೇ ತಿಂಗಳ ೧೧ರಂದು ಗಿಣಿ ಹೇಳಿದ ಕಥೆ ಬಿಡುಗಡೆಯಾಗಲಿದೆ.
ಈ ತಂಡದ ಸಾರಥಿಯಾಗಿರುವ ದೇವ್ ರಂಗಭೂಮಿ ಪಾಲಿಗೆ ಹುರುಪು, ಉತ್ಸಾಹಗಳ ಜೊತೆಗೆ ಅನುಭವವೇ ಮುಖ್ಯ ಆಧಾರ. ಹಾಗೆ ನೋಡಿದರೆ ಈ ಚಿತ್ರ ಬಹು ಪಾಲು ಜವಾಬ್ದಾರಿಗಳಿಗೆ ಅವರೇ ಹೆಗಲು ಕೊಟ್ಟಿದ್ದಾರೆ. ಈ ಚಿತ್ರವನ್ನು ಬುದ್ಧ ಚಿತ್ರಾಲಯದ ಮೂಲಕ ನಿರ್ಮಾಣ ಮಾಡಿರುವುದು ಅವರೇ. ಇದರಲ್ಲದೇ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನೂ ಬರೆದು ನಾಯಕನಾಗಿಯೂ ದೇವ್ ನಟಿಸಿದ್ದಾರೆ. ಇದರ ಹಿಂದಿರೋದು ಬರೀ ಹುರುಪು ಅಂದುಕೊಂಡರೆ ಖಂಡಿತಾ ತಪ್ಪಾಗುತ್ತೆ. ಅದಕ್ಕೆ ದೇವ್ ಅವರ ಅಗಾಧ ಅನುಭವಗಳೂ ಸಾಥ್ ಕೊಟ್ಟಿವೆ.
ರಂಗಭೂಮಿಯೊಂದಿಗೆ ದಶಕಗಳ ಕಾಲ ನಂಟು ಹೊಂದಿ ಹಲವಾರು ನಾಟಕಗಳಲ್ಲಿ ನಟಿಸಿರುವವರು ದೇವ್. ರಂಗಭೂಮಿಯ ಅನುಭವ ಅವರ ಅಸಲೀ ಶಕ್ತಿ. ಇದಲ್ಲದೇ ಕಿರುತೆರೆಯ ಕೆಲ ಧಾರಾವಾಹಿಗಳಿಗೆ ಸಂಭಾಷಣೆ ಕೂಡಾ ಅವರು ಬರೆದಿದ್ದಾರೆ. ಅವರೇನು ಏಕಾಏಕಿ ಚಿತ್ರರಂಗಕ್ಕೆ ಬಂದಿಲ್ಲ. ಬರುವುದಕ್ಕೂ ಮುಂಚೆ ಅದರ ಬಗ್ಗೆ ಪರಾಮಾರ್ಶೆ ನಡೆಸಿದ್ದಾರೆ. ಈವತ್ತಿಗೆ ಗಿಣಿ ಹೇಳಿದ ಕಥೆ ಎಲ್ಲರಿಂದಲೂ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಬಹು ನಿರೀಕ್ಷಿತ ಚಿತ್ರವಾಗಿಯೂ ಬಿಂಬಿತವಾಗಿದೆ.
ಅದೆಲ್ಲದಕ್ಕೆ ದೇವ್ ಅವರ ಅಪಾರ ಅನುಭವ, ಶ್ರದ್ಧೆಯೇ ಕಾರಣ. ಸಾಮಾನ್ಯವಾಗಿನ ಯಾವುದಾದರೂ ತಪ್ಪಿದ್ದರೆ ಅದನ್ನು ಗಂಭೀರವಾಗಿ ಹೇಳಿದಾಗ ಆಗೋ ಪರಿಣಾಮಕ್ಕಿಂತಾ, ತಮಾಶೆಯಾಗಿ ಹೇಳಿದರೆ ಆಗಬಹುದಾದ ಪರಿಣಾಮವೇ ಹೆಚ್ಚು ಎಫೆಕ್ಟಿವ್. ಈ ಚಿತ್ರದ ಕಥೆಯಲ್ಲಿ ಬರೋ ಗಂಭೀರ ಅಂಶಗಳನ್ನೂ ಕೂಡಾ ತಮಾಶೆಯಾಗಿಯೇ ಹೇಳೋ ಪ್ರಯೋಗ ನಡೆದಿದೆಯಂತೆ.
ಈ ಚಿತ್ರ ಮಾಮೂಲಿ ಶೈಲಿಯದ್ದಲ್ಲ ಮತ್ತು ಪ್ರೇಕ್ಷಕರಿಗೆ ಹೊಸಾ ಅನುಭವ ನೀಡಲಿದೆ ಅನ್ನೋದರಲ್ಲಿ ಯಾವ ಸಂಶಯವೂ ಇಲ್ಲ. ಯಾಕೆಂದರೆ ದೇವ್ ಈ ಚಿತ್ರಕ್ಕೆ ಸಿದ್ಧಗೊಂಡಿರೋ ಶ್ರದ್ಧೆಯೇ ಅಂಥಾದ್ದಿದೆ. ಈ ಚಿತ್ರಕ್ಕಾಗಿ ಕಥೆ ಬರೆದು ಸ್ಕ್ರಿಫ್ಟ್ ರೆಡಿ ಮಾಡಲು ದೇವ್ ತೆಗೆದುಕೊಂಡಿದ್ದು ಬರೋಬ್ಬರಿ ನಾಲಕ್ಕು ವರ್ಷ. ಅಷ್ಟರ ಮಟ್ಟಿಗೆ ಆರಂಭಿಕವಾಗಿಯೇ ಕಾಳಜಿ, ಎಚ್ಚರ ವಹಿಸಿ ಈ ಚಿತ್ರವನ್ನ ರೂಪಿಸಲಾಗಿದೆ.