ನಮ್ಮ ರಾಜ್ಯದಲ್ಲಿ ಕೊರೋನ ಆರ್ಭಟ ಕಡಿಮೆಯಾಗುತ್ತಿರುವ ಬೆನ್ನಲ್ಲೇ, ಕನ್ನಡ ಚಿತ್ರರಂಗದ ಚಟುವಟಿಕೆಗಳು ಗರಿಗೆದರುತ್ತಿದೆ. ನೂತನ ಚಿತ್ರಗಳ ಆರಂಭವೂ ಹೆಚ್ಚಾಗುತ್ತಿದೆ.
ನಟ ಜೆ ಕೆ (ಜಯರಾಂ ಕಾರ್ತಿಕ್) ನಾಯಕರಾಗಿ ನಟಿಸುತ್ತಿರುವ ಐರಾವನ್ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಗವಿಪುರಂನ ಕಾಲಭೈರವೇಶ್ವರ ಸನ್ನಿಧಿಯಲ್ಲಿ ನೆರವೇರಿತು.
ದೇವರ ಮೇಲೆ ಸೆರೆಹಿಡಿಯಲಾದ ಮೊದಲ ದೃಶ್ಯಕ್ಕೆ ನಿರಂತರ ಗಣೇಶ್ ಅವರು ಆರಂಭ ಫಲಕ ತೋರಿದರು. ತುಮಕೂರಿನ ಶ್ರೀ ಶ್ರೀ ಸಾಗರ ಮಹಾಸ್ವಾಮಿಗಳು ಕ್ಯಾಮೆರಾ ಚಾಲನೆ ಮಾಡಿದರು.
ನಿರಂತರ ಗಣೇಶ್ ಅವರು ತಮ್ಮ ನಿರಂತರ ಪ್ರೊಡಕ್ಷನ್ಸ್ ಮೂಲಕ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ರಾಮ್ಸ್ ರಂಗಾ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
ಹಲವು ಚಿತ್ರಗಳಿಗೆ ಸಹ ಹಾಗೂ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿರುವ ರಾಮ್ಸ್ ರಂಗಾ ಅವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ.
ಸಸ್ಪೆನ್ಸ್ ಥ್ರಿಲ್ಲರ್ ಕಥೆ ಆಧಾರಿತ ಈ ಚಿತ್ರಕ್ಕೆ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ.
ಎಸ್.ಪ್ರದೀಪ್ ವರ್ಮ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ದೇವೇಂದ್ರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಅರ್ಜುನ್ ಸಾಹಸ ನಿರ್ದೇಶನ ಹಾಗೂ ವಲ್ಲಭ ಅವರ ನಿರ್ಮಾಣ ನಿರ್ವಹಣೆಯಿದೆ.
ಜೆ ಕೆ, ವಿವೇಕ್, ಅದ್ವಿತಿ ಶೆಟ್ಟಿ, ಅವಿನಾಶ್, ಕೃಷ್ಣ ಹೆಬ್ಬಾರ್ , ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.