ಶ್ರೀಭೂಮಿಕ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸದ್ಗುಣಮೂರ್ತಿ ಅವರು ನಿರ್ಮಿಸಿರುವ ‘ಅಡಚಣೆಗಾಗಿ ಕ್ಷಮಿಸಿ‘ ಚಿತ್ರದ ಟೀಸರ್ ಇದೇ ತಿಂಗಳ ೧೦ರಂದು ಬಿಡುಗಡೆಯಾಗಲಿದೆ. ಪವರ್ಸ್ಟಾರ್ ಪುನೀತ್ರಾಜಕುಮಾರ್ ಟೀಸರ್ ಬಿಡುಗಡೆ ಮಾಡಲಿದ್ದಾರೆ. ಮಧುಸೂಧನ್, ಶ್ರೀನಿವಾಸ್, ಭಾರ್ಗವಿ ಕಿಶೋರ್, ನಾಗೇಶ್ ಕುಮಾರ್ ಈ ಚಿತ್ರದ ಸಹ ನಿರ್ಮಾಪಕರು.
ಕಳೆದ ಹನ್ನೆರಡು ವರ್ಷಗಳಿಂದ ಎಸ್.ಮಹೇಂದರ್, ಪಿ.ಎನ್. ಸತ್ಯ ಮುಂತಾದವರ ಜೊತೆ ಕೆಲಸ ಮಾಡಿ ಅನುಭವವಿರುವ ಭರತ್ ಎಸ್ ನಾವುಂದ್ ಈ ಚಿತ್ರದ ನಿರ್ದೇಶಕರು. ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು, ಗೀತರಚನೆ ಮಾಡಿರುವ ಭರತ್ ಅವರು ಸಾಹಸ ನಿರ್ದೇಶನವನ್ನು ಮಾಡಿದ್ದಾರೆ. ಸೈಕಲಾಜಿಕಲ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಈ ಚಿತ್ರಕ್ಕೆ ಮಡಿಕೇರಿಯಲ್ಲಿ ೨೨ದಿನಗಳ ಹಾಗೂ ಬೆಂಗಳೂರಿನಲ್ಲಿ ೧೦ದಿನಗಳ ಚಿತ್ರೀಕರಣ ನಡೆದಿದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ. ಐದು ಹಾಡುಗಳಿರುವ ಈ ಚಿತ್ರಕ್ಕೆ ಎಸ್.ಪ್ರದೀಪ್ ವರ್ಮ ಸಂಗೀತ ನೀಡಿದ್ದಾರೆ. ಕಳೆದ ೨೦ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಕೀಬೋರ್ಡ್ ವಾದಕರಾಗಿ ಕಾರ್ಯ ನಿರ್ವಹಿಸುತ್ತಿರುವ ಪ್ರದೀಪ್ ವರ್ಮ, ಕಾವೇರಿ ನಗರ, ಸ್ಟೈಲ್ ಕಿಂಗ್, ದಿ ಟೆರರಿಸ್ಟ್ ಮುಂತಾದ ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ರವಿವರ್ಮ ಛಾಯಾಗ್ರಹಣ ಹಾಗೂ ಅರ್ಜುನ್ ಕಿಟ್ಟು ಸಂಕಲನ ಈ ಚಿತ್ರಕ್ಕಿದೆ.
ಸಂಗೀತ ನಿರ್ದೇಶಕ ಎಸ್.ಪ್ರದೀಪ್ ವರ್ಮ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಶಿವಮಂಜು, ಕೆ.ಎಸ್.ಶ್ರೀಧರ್, ಶ್ರೀನಿವಾಸಪ್ರಭು, ಅರ್ಪಿತಾ ಗೌಡ, ಮೇಘ, ವಿದ್ಯಾ ಕುಲಕರ್ಣಿ, ಶ್ರೀನಿವಾಸ್, ಸುಶೀಲ್ ಕುಮಾರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.