ಗಂಧದಗುಡಿಯ `ಬುದ್ದಿವಂತ` ಉಪೇಂದ್ರ ಅಭಿನಯದ `ದುಬೈಬಾಬು` ಚಿತ್ರಕ್ಕೆ ದುಬೈನಲ್ಲಿ ಭರದ ಚಿತ್ರೀಕರಣ ನಡೆಯುತ್ತಿದೆ. ಎಂಟು ದಿನಗಳಲ್ಲಿ ಎರಡು ಹಾಡು ಹಾಗೂ ಸಾಹಸ ಸನ್ನಿವೇಶವೊಂದು ಆ ಶ್ರೀಮಂತ ನಗರದಲ್ಲಿ ಚಿತ್ರೀಕೃತವಾಗಲಿದೆ. ನಾಯಕ ಉಪೇಂದ್ರನೊಂದಿಗೆ ಬೆಡಗಿಯರಾದ ಸಲೋನಿ ಹಾಗೂ ನಿಖಿತಾ ಕೂಡ ದೂರದ ದುಬೈಗೆ ಪಯಣ ಬೆಳೆಸಿದ್ದಾರೆ. ಹಲವು ವರ್ಷಗಳ ನಂತರ ಅಭಿನಯಕ್ಕೆ ಮರಳಿರುವ ಕುಮಾರ್ಗೋವಿಂದ್ ಕೂಡ ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ. ತೈಲನಗರದಲ್ಲಿ ನಡೆಯುವ ಸಾಹಸ ಸನ್ನಿವೇಶಕ್ಕೆ ಥ್ರಿಲ್ಲರ್ಮಂಜು, ರವಿವರ್ಮ ಸಾಹಸ ಸಂಯೋಜಿಸಿದರೆ ಹಾಡುಗಳಿಗೆ ತ್ರಿಭುವನ್, ಫ಼ೈವ್ಸ್ಟಾರ್ ಗಣೇಶ್ ನೃತ್ಯ ನಿರ್ದೇಶನ ಮಾಡುತ್ತಿದ್ದಾರೆ. ಮಾತಿನ ಭಾಗದ ಚಿತ್ರೀಕರಣ ಪೂರೈಸಿರುವ ಭಾಗಕ್ಕೆ ಡಬ್ಬಿಂಗ್ ಕೂಡ ಪೂರ್ಣವಾಗಿದೆ. ಒಟ್ಟಿನಲ್ಲಿ ಶ್ರೀಮಂತಿಕೆಯಿಂದ ಮೂಡಿಬರಲಿರುವ ದುಬೈಬಾಬು ನೋಡುಗರನ್ನು ಸಂತಸದ ಕಡಲಲ್ಲಿ ತೇಲಿಸುವುದು ಖಚಿತ.
ಹಿಂದೆ ಗೌರಮ್ಮ, ಕುಟುಂಬದಂತಹ ಯಶಸ್ವಿ ಚಿತ್ರಗಳನ್ನು ನೀಡಿದ ಶೈಲೇಂದ್ರಬಾಬು ಶೈಲೇಂದ್ರ ಪ್ರೊಡಕ್ಷನ್ಸ್ ಲಾಂಛನದಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ನಾಗಣ್ಣ ಚಿತ್ರಕತೆ ಬರೆದು ನಿರ್ದೇಶಿಸುತ್ತಿರುವ `ದುಬೈಬಾಬು` ಚಿತ್ರಕ್ಕೆ ಮುಂಬೈನ ಅನಿಲ್ಜವೇರಿ ಅವರ ಛಾಯಾಗ್ರಹಣವಿದೆ. ಮುಸ್ಸಂಜೆಮಾತು ಖ್ಯಾತಿಯ ವಿ.ಶ್ರೀಧರ್ ಅವರ ಸಂಗೀತ, ಗೋವರ್ಧನ್ ಸಂಕಲನ, ಥ್ರಿಲ್ಲರ್ಮಂಜು ಸಾಹಸ, ಅಣ್ಣಯ್ಯ ಕಲೆ, ಕೇಶವಾದಿತ್ಯ ಸಂಭಾಷಣೆ, ತ್ರಿಭುವನ್ ನೃತ್ಯ, ಪ್ರಶಾಂತ್ ಸಹನಿರ್ದೇಶನ, ಮುರುಳಿ ನಿರ್ಮಾಣನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಉಪೇಂದ್ರ, ನಿಖಿತಾ, ಸಲೋನಿ, ಕುಮಾರ್ಗೋವಿಂದ್, ಆರ್ಯನ್ವೈದ್ಯ, ಸುಂದರರಾಜ್, ರಾಜೇಶ್, ದ್ವಾರಕೀಶ್, ಸೂರ್ಯಪಲ್ಲಕ್ಕಿ, ಎಂ.ಎಸ್.ಉಮೇಶ್ ಮುಂತಾದವರಿದ್ದಾರೆ.