ರೈತರ ಬದುಕು ಬವಣೆಯನ್ನು ಬಿಂಬಿಸುವ ಕಥಾಹಂದರ ಹೊಂದಿರುವ ನೇಗಿಲ ಒಡೆಯ ಚಿತ್ರದ ಹಾಡುಗಳ ಧ್ವನಿಸುರುಳಿ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ರೈತಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್ ಅವರು ಈ ಚಿತ್ರದ ಹಾಡುಗಳನ್ನು ಲೋಕಾರ್ಪಣೆ ಮಾಡಿದರು. ಧ್ವನಿಸುರುಳಿ ಬಿಡುಗಡೆ ನಂತರ ಮಾತನಾಡಿದ ಅವರು ಈ ನಿರ್ದೇಶಕರು ಹೊಸ ತಂಡವನ್ನು ಕಟ್ಟಿಕೊಂಡು ಈ ಚಿತ್ರವನ್ನು ಬಹಳ ಕಷ್ಟಪಟ್ಟು ಮಾಡಿದ್ದಾರೆ. ಈಗ ರೈತರು ಏನೆಲ್ಲಾ ಕಷ್ಟ, ತೊಂದರೆಗಳನ್ನು ಅನುಭವಿಸುತ್ತಾರೆ ಎಂಬುದರ ನೈಜ ಚಿತ್ರಣವನ್ನು ಈ ಚಿತ್ರದ ಮೂಲಕ ಹೇಳ ಹೊರಟಿದ್ದಾರೆ. ಈ ಸಮಾರಂಭದಲ್ಲಿ ಚಿತ್ರ ನಿರ್ದೇಶಕರ ಗುರುದೇಶಪಾಂಡೆ, ಗುರುರಾಜ ಹೊಸಕೋಟೆ, ನಟ ಬ್ಯಾಂಕ್ ಜನಾರ್ಧನ್, ಡಿಂಗ್ರಿ ನಾಗರಾಜ್, ಆಡುಗೋಡಿ ಶ್ರೀನಿವಾಸ್ ಇನ್ನು ಮುಂತಾದವರು ಸಮಾರಂಭದಲ್ಲಿ ಭಾಗವಹಿಸಿದ್ದರು. ವಿಶೇಷವಾಗಿ ಈ ಚಿತ್ರದಲ್ಲಿ ಅಂಧ ಗಾಯಕ ಮೆಹಬೂಬ್ ರೈತರ ಕುರಿತಂತೆ ಒಂದು ಹಾಡನ್ನು ಹಾಡಿದ್ದಾರೆ. ಈಗಾಗಲೇ ಈ ಚಿತ್ರವು ಬಿಡುಗಡೆಗೆ ಸಿದ್ಧವಾಗಿದೆ.
ಸೂರ್ಯೋದಯ ಮೂವಿಸ್ ಲಾಂಛನಲ್ಲಿ ನಾಗಳ್ಳಿ ಅನಂತ ರತ್ನಮ್ಮ (ಬಳ್ಳಾರಿ) ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಎನ್.ಕೃಷ್ಣಮೋಹನ್ಶೆಟ್ಟಿ ಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ವಿಕ್ಟರಿ ಡ್ಯಾನಿಯಲ್ ಸಂಗೀತ, ಎಸ್.ಬಾಲು ಛಾಯಾಗ್ರಹಣ, ಸಿ.ಎನ್.ಮೂರ್ತಿ ಚಿತ್ರಕಥೆ ಮತ್ತು ಸಹನಿರ್ದೇಶನ, ಅನಿಲ್ ಚಿನ್ನು ಸಂಕಲನ, ಕ್ರೇಜಿ ಶ್ರೀಧರ್ ನೃತ್ಯ ನಿರ್ದೇಶನ, ಹೇಮಂತಕುಮಾರ್, ಮಂಜುನಾಥ್ ಬಿ.ಆರ್, (ಮಾಸ್ತಿ ಮಂಜು) ಸಿ.ಎನ್.ಮೂರ್ತಿ ಸಾಹಿತ್ಯವಿದೆ. ಭಾನುಪ್ರಕಾಶ್ ಪ್ರಿಯಾಪಾಂಡೆ ಅಮರನಾಥ್ ಆರಾಧ್ಯ, ಬಲರಾಂ, ಜಯಣ್ಣ, ಜಂ ಶಿವು, ಬಳ್ಳಾರಿ ಮಂಜು, ಅಶೋಕ್, ನಾಗರಾಜ್, ಹೇಮಂತ್, ಮೂರ್ತಿ, ವೆಂಕಟೇಶ್, ಮಠಂ ನಾಗಭೂಷಣ್, ಯಾಸಿನ್, ಅಜಿತ್ ಮುಂತಾದವರ ತಾರಾಬಳಗವಿದೆ.