ಬ್ಯಾಡ್ಮಿಂಟನ್ ಆಟ ಮತ್ತು ಛಾಯಾಗ್ರಹಣದಲ್ಲಿ ಆಸಕ್ತಿಯಿರುವ ನನ್ನ ಮಗಳು ಯಾಕೆ ಗಣಿತದ ಕಠಿಣ ಸೂತ್ರಗಳನ್ನು ಅಧ್ಯಯನ ಮಾಡಬೇಕು ಅಂತ ನನಗೆ ಅರ್ಥವೇ ಆಗುತ್ತಿಲ್ಲ. ರಾತ್ರಿಹಗಲೂ ಕಷ್ಟಪಟ್ಟು ಕಾಮರ್ಸ್, ಸ್ಟಾಟಿಸ್ಟಿಕ್ಸ್ ಮತ್ತು ಕಮರ್ಷಿಯಲ್ ಲಾ ಓದಿದ ನಾನು ಮೂವತ್ತೈದು ವರ್ಷಗಳಿಂದ ಮಾಡುತ್ತಿರುವ ಕೆಲಸ ಬರೆವಣಿಗೆ, ಪತ್ರಿಕೋದ್ಯಮ. ಹೀಗೆ ನಮಗೆ ಬೇಡದ್ದನ್ನು ಕಲಿಸಲಿಕ್ಕೆ ಇಡೀ ಜಗತ್ತೇ ಪಿತೂರಿ ಮಾಡುತ್ತಿರುತ್ತದೆ. ಅಂಥ ವ್ಯವಸ್ಥೆಯ ಕುರಿತು ಅರ್ಥಪೂರ್ಣ ಭಾಷ್ಯವೊಂದನ್ನು ಬರೆದಿದ್ದಾರೆ ನಿರ್ದೇಶಕ ಸಂತೋಷ್ ಆನಂದರಾಮ್. ಪುನೀತ್ ಅಭಿನಯಿಸಿರುವ ಯುವರತ್ನ ಸಿನಿಮಾವನ್ನು ಬಿಡುವು ಮಾಡಿಕೊಂಡು ನೋಡಿ. ನಾವು ನಿತ್ಯ ಕಾಣುವ ಪುಟ್ಟ ಪಾತ್ರಗಳು, ನಮಗೆಲ್ಲ ಆದರ್ಶವಾಗಿದ್ದ ಕಾಲೇಜು ಪ್ರಿನ್ಸಿಪಾಲ್, ನಾವು ಕಲಿತ ಕಾಲೇಜಿನ ಮೇಲಿರುವ ಪ್ರೀತಿ-ಎಲ್ಲವನ್ನೂ ಈ ಸಿನಿಮಾ ನಮ್ಮೊಳಗೆ ಮರುಕಳಿಸುವಂತೆ ಮಾಡುತ್ತದೆ. ಯುವರತ್ನ ನೋಡುತ್ತಿದ್ದಾಗ, ನಮ್ಮ ಸ್ಕೂಲಲ್ಲಿ ಬೆಲ್ ಹೊಡೆಯುತ್ತಿದ್ದ ಪ್ಯೂನ್ ಶೀನಪ್ಪ ನನಗೆ ಮತ್ತೆ ಸಿಕ್ಕಿದ. ನಮ್ಮ ಜೀವನಪ್ರೀತಿ ಒಂಚೂರು ಹೆಚ್ಚುವಂತೆ ಮಾಡುವ ಸಿನಿಮಾ ಇದು.
ನಾನು ಸರ್ಕಾರಿ ಶಾಲೆಯ ವಿದ್ಯಾರ್ಥಿ ಅಂತ ಹೇಳಲು ಮತ್ತಷ್ಟು ಹೆಮ್ಮೆಯಾಗುತ್ತಿದೆ. ಥ್ಯಾಂಕ್ಸ್, ಸಂತೋಷ್ ಆನಂದರಾಮ್, ಪುನೀತ್ ಮತ್ತು ವಿಜಯ್ ಕಿರಗಂದೂರು.
-ಜೋಗಿ
ಸರ್ಕಾರಿ ಪ್ರಥಮದರ್ಜೆ ಕಾಲೇಜು, ಉಪ್ಪಿನಂಗಡಿ