ತೆರೆ ಕಾಣುವ ಮುನ್ನವೇ ಯುವ ನಿರ್ದೇಶಕ ವಿನಯ್ ಭಾರದ್ವಾಜ್ ಅವರ *ಮುಂದಿನ ನಿಲ್ದಾಣ* ಚಿತ್ರವು ಎಲ್ಲೆಡೆಯೂ ಒಂದಲ್ಲ ಒಂದು ರೀತಿಯಲ್ಲಿ ಸದ್ದು ಮಾಡುತ್ತಲೇ ಇದೆ. ಮೊನ್ನೆಯಷ್ಟೇ ಟೀಸ್ ಮಾಡಲಾದ ಆ ಚಿತ್ರದ *ಮನಸೇ ಮಾಯ* ಹಾಡು ಯೂಟ್ಯೂಬ್, ಟಿಕ್ ಟಾಕ್ ಗಳಲ್ಲಿ ವೈರಲ್ ಆಗಿದ್ದು ದಿನದಿಂದ ದಿನಕ್ಕೆ ಅದರ ಕಾವು ಏರ್ತಾನೇ ಇದೆ. ಇದರ ಜೊತೆಯಲ್ಲಿಯೇ, ಕಾವೇರಿ ತಾಯಿಯ ಒಡಲಿನ ಕಾವನ್ನು ತಗ್ಗಿಸುವ ಪ್ರಯತ್ನಕ್ಕೂ ಚಿತ್ರ ತಂಡವು ಕೈಜೋಡಿಸಿದೆ!
ಹೌದು..ಚಿತ್ರದ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿರುವ ರಾಧಿಕಾ ನಾರಾಯಣ್, ಪ್ರವೀಣ್ ತೇಜ್ ಹಾಗೂ ಅನನ್ಯಾ ಕಶ್ಯಪ್ ಅವರನ್ನೊಳಗೊಂಡ ತಂಡವು *ಕಾವೇರಿ ಕೂಗು* ಖ್ಯಾತಿಯ ಈಶಾ ಫೌಂಡೇಶನ್’ನ ಸದ್ಗುರು ಅವರನ್ನು ಭೇಟಿ ಮಾಡಿತು.
ಕೊಂಚ ಹೊತ್ತು ಅವರೊಂದಿಗೆ ಕಾಲ ಕಳೆದ ಚಿತ್ರ ತಂಡವು “ಗುರೂಜೀ..ನಿಮ್ಮ ಮುಂದಿನ ನಿಲ್ದಾಣ ಯಾವುದು?” ಅಂತ ಸದ್ಗುರು ಅವರಲ್ಲಿ ಕೇಳಿಯೇ ಬಿಟ್ಟಿತು!
ಅದಕ್ಕೆ ಗುರೂಜಿ ನೀಡಿದ ಉತ್ತರವಂತೂ ಇದೀಗ ತುಂಬಾನೇ ಸುದ್ದಿ ಮಾಡ್ತಿದೆ. ಸದಾ ಕಾವೇರಿ ಉಳಿಸುವ ತನ್ನ ಅಭಿಯಾನದಲ್ಲಿಯೇ ಮಗ್ನರಾಗಿ ಅಲ್ಲಿ ಇಲ್ಲಿ ಸುತ್ತುತ್ತಲೇ ಇರುವ ಸದ್ಗುರು ಅವರು ನೀಡಿದ ಉತ್ತರವೇನು ಗೊತ್ತೇ..?
“ನನ್ನ ಮುಂದಿನ ನಿಲ್ದಾಣ ನಿರಂತರ” ಎಂಬುದು!
ಎಷ್ಟು ಅರ್ಥ ಗರ್ಭಿತವಾಗಿದೆ ಈ ಮಾತು ಅಲ್ಲವೇ? ಹಾಗೆ ನೋಡಿದರೆ ಸ್ವತಹಾ ಕಾವೇರಿ ತಾಯಿಯಲ್ಲಿ ಈ ಪ್ರಶ್ನೆಯನ್ನು ಕೇಳಿದರೂ ಸಿಗುವ ಉತ್ತರ ಅದುವೇ ಆಗಿರಬಹುದು. ಏನಂತೀರಾ?
ಸದಾ ಸಮಾಜದ ಉದ್ಧಾರಕ್ಕಾಗಿಯೇ ದುಡಿಯುವ ಸದ್ಗುರುವಿನಂಥವರಿಗೆ ವಿಶ್ರಾಂತಿಯೆಂಬುದು ಕನಸಿನ ಮಾತೇ ಸರಿ!
ಸದ್ಗುರುವಿನ ಮಾತಿನಿಂದ ಉತ್ತೇಜಿತರಾದ ಯುವ ನಟರು ಈಶಾ ಫೌಂಡೇಶನ್’ನ ಕಾವೇರಿ ಕೂಗು ಅಭಿಯಾನವನ್ನು ಬೆಂಬಲಿಸಿ ತಮ್ಮ ಬೈಟ್ ಕೂಡಾ ನೀಡಿದ್ರು. ಇನ್ನೂ ಒಂದು ಹೆಜ್ಜೆ ಮುಂದುವರಿದ ಈಶಾ ಫೌಂಡೇಶನ್ ರಾಧಿಕಾ ನಾರಾಯಣ್ ತಮ್ಮ ಬೈಟ್ ನಲ್ಲಿ ಹೇಳಿದ ಮಾತುಗಳನ್ನು ತಮ್ಮ ಅಧಿಕೃತ ವೀಡಿಯೋದಲ್ಲೂ ಪ್ರಕಟಿಸಿ ನಿಮ್ಮ ಜೊತೆ ನಾವಿದ್ದೇವೆ ಎಂದಿತು.
ಮುಂದಿನ ನಿಲ್ದಾಣ ಚಿತ್ರ ತಂಡವು ಸದಾ ಕಾವೇರಿಯ ಹಾಗೂ ಕನ್ನಡದ ನೆಲ, ಜುಲೈ ಹಾಗೂ ಭಾಷೆಯ ಉಳಿವಿಗೆ ಬದ್ಧವಾಗಿದೆ ಎಂಬ ಮಾತನ್ನು ಸದ್ಗುರುವಿನ ಜೊತೆ ಹಂಚಿಕೊಳ್ಳುತ್ತಾ, ಚಿತ್ರ ತಂಡವು ಬೆಂಗಳೂರಿಗೆ ಮರಳಿತು.