ಹಾಲಿವುಡ್ ಶೈಲಿಯಲ್ಲಿ ಸಿದ್ಧವಾಗಲಿದೆ ಸೂಪರ್ ಹೀರೋ ಪರಿಕಲ್ಪನೆಯ ಕನ್ನಡ ಸಿನಿಮಾ
Posted date: 11 Sun, Oct 2020 – 05:25:21 PM

ಸ್ಯಾಂಡಲ್ವುಡ್ ಸಿನಿಮಾರಂಗ ಬದಲಾವಣೆಯ ಪರ್ವದತ್ತ ಸಾಗುತ್ತಿದೆ. ಹೊಸಬರ ನವನವೀನ ಪ್ರಯತ್ನಗಳಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅದೇ ರೀತಿ ನಿರ್ದೇಶಕ ಮನೋಜ್ ಪಿ. ನಡಲುಮನೆ ಚೊಚ್ಚಲ ಚಿತ್ರದಲ್ಲಿಯೇ ಇಡೀ ಭಾರತದಲ್ಲಿಯೇ ಯಾರೂ ಮಾಡದ ಹೊಸ ಪರಿಕಲ್ಪನೆಯ ಸಿನಿಮಾದೊಂದಿಗೆ ಆಗಮಿಸುತ್ತಿದ್ದಾರೆ. ಅವರ ಈ ಸಾಹಸಕ್ಕೆ ಯೂ ಕೆ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಶ್ರೀಮತಿ ಪೂಜಾ ವಸಂತ್ ಕುಮಾರ್ ಬಂಡವಾಳ ಹೂಡಿದ್ದಾರೆ.
ಈ ವಿಶೇಷ ಸಿನಿಮಾ ಫೀಮೇಲ್ ಸೂಪರ್ ಹೀರೋ ಪರಿಕಲ್ಪನೆಯಲ್ಲಿ ಸಿದ್ಧವಾಗಿದೆ. ನಟಿ ಅದಿತಿ ಪ್ರಭುದೇವ ಈ ಚಿತ್ರದಲ್ಲಿ ಸೂಪರ್ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಆ ಲೇಡಿ ಸೂಪರ್ ಹೀರೋ ಅವತಾರ ಹೇಗಿರಲಿದೆ? ಚಿತ್ರದ ಶೀರ್ಷಿಕೆ ಏನಿರಬಹುದು ಎಂಬ ಕುತೂಹಲಕ್ಕೆ ಅ. 24ರ ವರೆಗೆ ನೀವು ಕಾಯಲೇಬೇಕು.
ಈ ಹಿಂದೆ ‘ಯುಗ ಯುಗಗಳೇ ಸಾಗಲಿ’ ಚಿತ್ರ ನಿರ್ಮಾಣ ಮಾಡಿದ್ದ ನಿರ್ಮಾಪಕರಾದ ಶ್ರೀಮತಿ ಪೂಜಾ ವಸಂತ್ ಕುಮಾರ್, ಇದೀಗ ಬಹುವರ್ಷಗಳ ಬಳಿಕ ಈ ಚಿತ್ರದ ಮೂಲಕ ಎಂಟ್ರಿಕೊಟ್ಟಿದ್ದಾರೆ. ಅದೇ ರೀತಿ ನಿರ್ದೇಶಕ ಮನೋಜ್ಗಿದು ಮೊದಲ ಸಿನಿಮಾ. ಈ ಮೊದಲು ಕಿರುಚಿತ್ರ, ಟೆಲಿಫಿಲಂಗಳನ್ನು ಮಾಡಿದ ಅನುಭವ ಅವರಿಗಿದೆ.
ಕನ್ನಡದಲ್ಲಿ ಸದ್ಯ ಯಾರೂ ಮಾಡದ ಹೊಸ ಶೈಲಿಯ ಸಿನಿಮಾ ಇದು. ಭಾರತದಲ್ಲಿ ಫೀಮೇಲ್ ಸೂಪರ್ ಹೀರೋ ಚಿತ್ರಗಳು ಬಂದಿಲ್ಲ. ಆ ಪ್ರಯತ್ನವನ್ನು ಕನ್ನಡದಲ್ಲಿ ನಾವು ಮಾಡಿದ್ದೇವೆ. ಅಂತಾರಾಷ್ಟ್ರೀಯ ಮಟ್ಟದ ತಾಂತ್ರಿಕತೆ ಒಂದೆಡೆ ಕಾಣಿಸಿದರೆ, ಹಾಲಿವುಡ್ ಸಿನಿಮಾ ಶೈಲಿಯಲ್ಲಿಯೇ ಇಡೀ ಸಿನಿಮಾ ಸಿದ್ಧವಾಗಿದೆ. ಸಿಜೆ ಕೆಲಸ, ಕಲರ್ ಪ್ಯಾಟರ್ನ್, ವಿಎಫ್ಎಕ್ಸ್ ತುಂಬ ವಿಶೇಷವಾಗಿರಲಿದೆ ಎಂಬುದು ನಿರ್ದೇಶಕ  ಮನೋಜ್ ಅವರ ಮಾತು.
ಇನ್ನೊಂದು ವಿಶೇಷ ಏನೆಂದರೆ, ಲಾಕ್ಡೌನ್ನಲ್ಲಿಯೇ ಸೃಷ್ಟಿಯಾದ ಈ ಕಥೆಯನ್ನು ಕೇವಲ 30 ದಿನಗಳಲ್ಲಿ ಬೆಂಗಳೂರು, ತಾವರೆಕೆರೆ, ಯಲಹಂಕ ಸುತ್ತ ಮುತ್ತ ಚಿತ್ರೀಕರಣ ಮಾಡಲಾಗಿದೆ.  ಸದ್ಯ 15 ದಿನಗಳಲ್ಲಿ ಕ್ಲೈಮ್ಯಾಕ್ಸ್ ಚಿತ್ರೀಕರಣ ಮಾಡಿಕೊಳ್ಳುವ ಕೆಲಸ ಮಾತ್ರ ಬಾಕಿ ಉಳಿದಿದ್ದು, ಅದರ ಸಲುವಾಗಿ ಸೆಟ್ ನಿರ್ಮಾಣ ಕಾರ್ಯವೂ ಭರದಿಂದ ಸಾಗಿದೆ.  
ತಾಂತ್ರಿಕ ವರ್ಗವೇ ಇಡೀ ಚಿತ್ರದ ಜೀವಾಳ ಎನ್ನುವ ನಿರ್ದೇಶಕ ಮನೋಜ್, ಕನ್ನಡದಲ್ಲಿ ಈ ಸೂಪರ್ ಹೀರೋ ಪರಿಕಲ್ಪನೆಯ ಸಿನಿಮಾ ಹೊಸ ಬಗೆಯ ಕ್ರಾಂತಿಗೆ ನಾಂದಿ ಹಾಡಲಿದೆ ಎಂಬ ಭರವಸೆ ಅವರದ್ದು. ‘ಸಂಕಷ್ಟಕರ ಗಣಪತಿ’ ಸಿನಿಮಾ ಖ್ಯಾತಿಯ ಸಂಕಲನಕಾರ ವಿಜೇತ್ ಚಂದ್ರ, ಛಾಯಾಗ್ರಾಹಕ ಉದಯ್ ಲೀಲಾ, ಮತ್ತು ಸಂಗೀತ ನಿರ್ದೇಶಕ ರಿತ್ವಿಕ್ ಮುರಳೀಧರ್ ಈ ಮೂವರ ಕಾಂಬಿನೇಷನ್ ಈ ಸಿನಿಮಾದಲ್ಲಿಯೂ ಮುಂದುವರಿದಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed