ಗಡಿನಾಡು ಬೆಳಗಾವಿ ಭಾಗದಲ್ಲಿ ನಡೆಯುವ ಕಥೆ ಹೊಂದಿರುವ, ಡಾಲಿ ಧನಂಜಯ ಅಭಿನಯದ ಚಿತ್ರ ಗುರುದೇವ ಹೊಯ್ಸಳ. ಇತ್ತೀಚೆಗೆ ಈ ಚಿತ್ರದ ಟ್ರೈಲರನ್ನು ಕಿಚ್ಚ ಸುದೀಪ್ ಅವರು ಬಿಡುಗಡೆಗೊಳಿಸಿ ತಂಡಕ್ಕೆ ಶುಭ ಹಾರೈಸಿದರು. ಧನಂಜಯ ಅಭಿನಯದ ೨೫ನೇ ಚಿತ್ರ ಇದಾಗಿದ್ದು, ಇದೇ ತಿಂಗಳ 30ರಂದು ರಾಜ್ಯಾದ್ಯಂತ ತೆರೆಕಾಣುತ್ತಿದೆ. ವಿಜಯ್ ಎನ್. ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ಡಾಲಿ ಧನಂಜಯ್ ಒಬ್ಬ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗುರುದೇವ್ ಹೊಯ್ಸಳ ಆಗಿ ತೆರೆಯ ಮೇಲೆ ಅಬ್ಬರಿಸಿದ್ದಾರೆ.
ಸುಂದರ ವೇದಿಕೆಯಲ್ಲಿ ಮಾತನಾಡಿದ ಕಿಚ್ಚ ಸುದೀಪ್ ಈ ಚಿತ್ರದ ಟ್ರೈಲರ್ ನನಗೆ ತುಂಬಾ ಇಷ್ಟವಾಯಿತು, ಆದರೆ ಒಬ್ಬ ಪೊಲೀಸ್ ಅಂದ ಮೇಲೆ ಧನಂಜಯ್ಗೆ ಮೀಸೆ ಇರಬೇಕಿತ್ತು, ಇದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಎಂದು ಧನಂಜಯ್ಗೆ ಸಲಹೆ ನೀಡಿದರು. ಅಲ್ಲದೆ ಅಜನೀಶ್ ಅವರ ಮ್ಯೂಸಿಕ್ ನೆಕ್ಸ್ ್ಟ ಲೆವೆಲ್ಗೆ ತಗೊಂಡು ಹೋಗುತ್ತೆ. ಅಚ್ಯುತ್ ಧನಂಜಯ್ ಕಾಂಬಿನೇಶನ್ ತುಂಬಾ ಚೆನ್ನಾಗಿದೆ. ಕಾರ್ತೀಕ್ ನನಗೆ ಬಹಳ ಬೇಕಾದಂಥ ಸ್ನೇಹಿತರು, ಈ ವೇದಿಕೆಯಲ್ಲಿ ಪ್ರತಿಯೊಬ್ಬರೂ ಸಂಸ್ಥೆಯ ಬಗ್ಗೆ ಮಾತಾಡುವುದನ್ನು ಕೇಳಿ ಸಂತಸವಾಯ್ತು, ಧನಂಜಯ್ ಫಸ್ಟ್ ಸಿನಿಮಾಗೆ ನಾನೇ ಕ್ಲಾಪ್ ಮಾಡಿದ್ದೆ, ಆಗಲೇ ೨೫ ಸಿನಿಮಾ ಮುಗಿಸಿದ್ದಾರೆ, ನಾನು ಇನ್ನೂ ಎಂಟು ಸಿನಿಮಾ ದಾಟಿಲ್ಲ, ಸಿನಿಮಾಗೆ ಬಂದಾಗ ಜನ ನನ್ನ ಒಪ್ತಾರಾ ಎಂಬ ಭಯ ಇರಬೇಕು, ಒಪ್ಪಿದಮೇಲೆ ಅವರನ್ನು ಎಂಟರ್ಟೈನ್ ಮಾಡುವ ಶಕ್ತಿ ಇರಬೇಕು ಎಂದು ಹೇಳಿದರು. ವೇದಿಕೆಯಲ್ಲಿ ನಿರ್ಮಾಪಕ ಯೋಗಿ ರಾಜ್, ಖಳನಾಯಕರಾಗಿ ಕಾಣಿಸಿಕೊಂಡಿರುವ ನವೀನ್ ಶಂಕರ್, ಪ್ರತಾಪ್ ನಾರಾಯಣ್, ಅಚ್ಯುತ್ಕುಮಾರ್ ನಾಯಕಿ ಅಮೃತಾ ಅಯ್ಯಂಗಾರ್ ಎಲ್ಲರೂ ತಂತಮ್ಮ ಪಾತ್ರಗಳ ಬಗ್ಗೆ ಮಾತನಾಡಿದರು, ಚಿತ್ರದಲ್ಲಿ ೪ ಹಾಡುಗಳನ್ನು ಸುಂದರವಾಗಿ ಮಾಡಿಕೊಟ್ಟಿರುವ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ತಮ್ಮ ಕೆಲಸದ ಮೂಲಕವೇ ಎಲ್ಲರಿಂದ ವಿಶೇಷ ಮೆಚ್ಚುಗೆಗೆ ಪಾತ್ರರಾದರು. ಅಲ್ಲದೆ ನಿರ್ದೇಶಕ ಸಂತೋಷ್ ಆನಂದರಾಮ್, ಚಿತ್ರಕ್ಕೆ ಡೈಲಾಗ್ ಬರೆದ ಮಾಸ್ತಿ, ಛಾಯಾಗ್ರಾಹಕ ಕಾರ್ತೀಕ್ ಕೂಡ ಹೊಯ್ಸಳನ ವಿಶೇಷತೆ ಕುರಿತು ಮಾತನಾಡಿದರು.
ಕೆ.ಆರ್.ಜಿ.ಸ್ಟುಡಿಯೋಸ್ ಬ್ಯಾನರ್ ಮೂಲಕ ಯೋಗಿ. ಜಿ.ರಾಜ್ ಹಾಗೂ ಕಾರ್ತಿಕ್ಗೌಡ ಸೇರಿ ನಿರ್ಮಿಸಿರುವ ಗುರುದೇವ್ ಹೊಯ್ಸಳ ಚಿತ್ರವು ಮಾರ್ಚ್ ೩೦ರಂದು ವಿಶ್ವದಾದ್ಯಂತ ಕನ್ನಡ ಭಾಷೆಯಲ್ಲಿಯೇ ಬಿಡುಗಡೆಯಾಗಲಿದೆ. ಒಂದು ಸೋಷಿಯಲ್ ಮೆಸೇಜ್ ಇಟ್ಟುಕೊಂಡು ಬರುತ್ತಿರುವ ಪಕ್ಕಾ ಕಮರ್ಷಿಯಲ್ ಸಿನೆಮಾ ಇದಾಗಿದ್ದು ನಿರ್ದೇಶಕ ವಿಜಯ್ ಎನ್ ಅವರು ಚಿತ್ರಕ್ಕೆ ಮೊದಲಬಾರಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಗುರುದೇವ್ ಹೊಯ್ಸಳನಿಗೆ ಜೋಡಿಯಾಗಿ ಬೆಡಗಿ ಅಮೃತಾ ಅಯ್ಯಂಗಾರ್ ಕಾಣಿಸಿಕೊಂಡಿದ್ದು, ನವೀನ್ ಶಂಕರ್, ಅವಿನಾಶ್, ಪ್ರತಾಪ್ ನಾರಾಯಣ್, ರಾಜೇಶ್ ನಟರಂಗ, ನಾಗಭೂಷಣ್ ಹಾಗೂ ಇತರರು ಈ ಚಿತ್ರದಲ್ಲಿ ನಟಿಸಿದ್ದಾರೆ.