ಇತಿ ನಿನ್ನ ಪ್ರೀತಿಯ, ಅಪ್ಪಯ್ಯ, ಸಂಜು ವೆಡ್ಸ್ ಗೀತಾ, ಮತ್ತೆ ಮುಂಗಾರು, ಟೋನಿ ಹೀಗೆ ಮೊದಲಿಂದಲೂ ವಿಭಿನ್ನ ಪಾತ್ರಗಳನ್ನು ಮಾಡಿಕೊಂಡೇ ಬಂದಿರುವ ನಟ ಶ್ರೀನಗರ ಕಿಟ್ಟಿ, ಈಗ ಗೌಳಿ ಎಂಬ ವಿಶಿಷ್ಟ ಪಾತ್ರದ ಮೂಲಕ ಪೇಕ್ಷಕರ ಮುಂದೆ ಬರಲು ಅಣಿಯಾಗುತ್ತಿದ್ದಾರೆ, ಶೂರ ಅವರ ನಿರ್ದೇಶನದ ಗೌಳಿ ಚಿತ್ರದ ಮುಹೂರ್ತ ಕಾರ್ಯಕ್ರಮ ಇತ್ತೀಚೆಗೆ ಆರ್.ಪಿ.ಸಿ.ಲೇಔಟ್ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು. ಈ ಚಿತ್ರವನ್ನು ಸೋಹನ್ ಫಿಲಂ ಫ್ಯಾಕ್ಟರಿ ಮೂಲಕ ರಘು ಸಿಂಗಂ ಅವರು ನಿರ್ಮಾಣ ಮಾಡುತ್ತಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಚಿತ್ರರಂಗದಲ್ಲಿ ಛಾಯಾಗ್ರಾಹಕರಾಗಿ, ಸಹ ನಿರ್ದೇಶಕನಾಗಿ ಕೆಲಸ ಮಾಡಿರುವ ಸೂರ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ರಚಿಸಿ ನಿರ್ದೇಶನ ಮಾಡುತ್ತಿದ್ದಾರೆ. ನಿರ್ಮಾಪಕ, ನಿರ್ದೇಶಕ ಇಬ್ಬರಿಗೂ ಈ ಚಿತ್ರ ಮೊದಲ ಪ್ರಯತ್ನ. ಸೂರ ಅವರು ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಅವರನ್ನು ಈವರೆಗೆ ಯಾರೂ ತೋರಿಸಿರದಂಥ ವಿಭಿನ್ನ ಶೈಲಿಯ ಪಾತ್ರದಲ್ಲಿ ಪರಿಚಯಿಸಲಿದ್ದಾರೆ. ಗೌಳಿ ಚಿತ್ರದಲ್ಲಿ ನಾಯಕನ ಹೆಸರು. ಈ ಪದಕ್ಕೆ ಇನ್ನೊಂದು ಅರ್ಥವೂ ಇದೆ, ಹಾಲು ಮಾರುವವರನ್ನು ಗೌಳಿ ಎಂದು ಕರೆಯುತ್ತಾರೆ, ಗ್ರಾಮೀಣ ಪ್ರದೇಶದಿಂದ ಬಂದವರಿಗೆ ಈ ಹೆಸರು ಬಹುಬೇಗ ಅರ್ಥವಾಗಿಬಿಡುತ್ತದೆ.
ಇತ್ತೀಚೆಗಷ್ಟೇ ಗೌಳಿ ಚಿತ್ರತಂಡ ಚಿತ್ರದ ನಾಯಕನನ್ನು ಪರಿಚಯಿಸುವ ವಿಶೇಷ ಲುಕ್ವೊಂದನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ಕಿಟ್ಟಿ ಅವರು ಉದ್ದವಾದ ಕುರುಚಲು ಗಡ್ಡ ಬಿಟ್ಟುಕೊಂಡು ಕಾಣಿಸಿಕೊಂಡಿದ್ದಾರೆ. ಇಡೀ ಸಿನಿಮಾದಲ್ಲಿ ಕಿಟ್ಟಿ ಅವರದು ಇದೇ ಗೆಟಪ್ ಆಗಿರುತ್ತದೆ. ಅಲ್ಲದೆ ಪಾತ್ರಕ್ಕಾಗಿಯೇ ಮೂರು ತಿಂಗಳ ಕಾಲ ಪೂರ್ವ ಸಿದ್ದತೆ ಮಾಡಿಕೊಂಡಿದ್ದಾರೆ. ಇದೇ ತಿಂಗಳ ೨೧ರಿಂದ ಆರಂಭಿಸಿ ಯಲ್ಲಾಪುರ ಶಿರ್ಸಿ ಮುಂತಾದೆಡೆ ಗೌಳಿ ಚಿತ್ರದ ಚಿತ್ರೀಕರಣ ನಡೆಯಲಿದೆ. ಶಶಾಂಕ್ ಶೇಷಗಿರಿ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಈ ಚಿತ್ರದ ನಾಯಕಿಯಾಗಿ ಪಾವನಾಗೌಡ, ರಂಗಾಯಣ ರಘು ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.