ಕೇರಳ ಮೂಲದ ಪ್ರವೀಶ್ ಕನ್ನಡದಲ್ಲಿ ಮೊದಲ ಬಾರಿಗೆ ತಯಾರಿಸುತ್ತಿರುವ ’ಕ್ರೇಜಿ ಕೃಷ್ಣ’ ಕಳೆದ ೧೮ನೇ ತಾರೀಖಿನಿಂದ ಚಿತ್ರೀಕರಣ ಪ್ರಾರಂಭಿಸಿ ಶ್ರೀರಂಗ ಪಟ್ಟಣದಲ್ಲಿ ಚಿತ್ರೀಕರಣಕ್ಕಾಗಿ ಬೀಡುಬಿಟ್ಟಿದೆ. ಇಲ್ಲಿಂದ ಹೈದರಾಬಾದಿಗೆ ದ್ವಿತೀಯ ಹಂತದ ಚಿತ್ರೀಕರಣ ಮಾಡಿಬರಲು ಯೋಜನೆ ಸಿದ್ದವಾಗಿದೆ ಎನ್ನುತ್ತಾರೆ ನಿರ್ಮಾಪಕರು.
ಇತ್ತೀಚೆಗಷ್ಟೆ ೧೮ ಗಂಟೆಗಳಲ್ಲಿ ಚಿತ್ತೀಕರಣ ಪೂರ್ತಿ ಮಾಡಿದ ’ಸುಗ್ರೀವ’ ಚಿತ್ರದ ನಿರ್ದೇಶಕ ಪ್ರಶಾಂತ್ ಮಾಂಬಳ್ಳಿ ’ಕ್ರೇಜಿ ಕೃಷ್ಣ’ ಚಿತ್ರದ ನಿರ್ದೇಶಕರು. ಈ ಚಿತ್ರದ ಕಥೆಯನ್ನು ನಿರ್ದೇಶಕರು ೩ ವರ್ಷಗಳ ಹಿಂದೆಯೇ ಸಿದ್ದ ಪಡಿಸಿದ್ದು ಹಳ್ಳಿಯ ಪರಿಸರದಲ್ಲಿ ಕೃಷ್ಣನ ನಾನಾ ಅವತಾರಗಳನ್ನು ಹಾಸ್ಯದ ಲೇಪನದೊಂದಿಗೆ ತಿಳಿಸುವುದು ಇವರ ಉದ್ದೇಶವಾಗಿದೆ.
ರಾಮ್ನಾರಾಯಣ್ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದು ಈ ಚಿತ್ರ ಹಳ್ಳಿಯೊಂದರಲ್ಲಿ ಹಾಗೂ ಹೋಟೆಲೊಂದರಲ್ಲಿ ಬಹುತೇಕ ಜರುಗಲಿದೆ ಎನ್ನುತ್ತಾರೆ. ತಂದೆಯ ತಪ್ಪನ್ನು ಹೆಗಲ ಮೇಲೆ ಹೊತ್ತ ನಾಯಕ ಪಡುವ ಬವಣೆಗಳನ್ನು ವಿವರಿಸಲಾಗುವುದು ಎಂದು ತಿಳಿಸುತ್ತಾರೆ.
೫ ಅಡಿ ೧೧ ಇಂಚು ಇರುವ ಕಟ್ಟುಮಸ್ತಾದ ಹಾಸನದ ಹುಡುಗ ಕಿಶನ್ ಈ ಚಿತ್ರದ ಕಥಾನಾಯಕ. ಕೇರಳ ಮೂಲದ ಸುರಭಿ ಸಂತೋಷ್ ಹಾಗೂ ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ ಈ ಚಿತ್ರದ ಕಥಾನಾಯಕಿಯರು.