ಆದಿತ್ಯ ಕ್ರಿಯೇಶನ್ಸ್ ಅವರ ನಿರ್ಮಾಪಕ ಶಿವಾನಂದ ಮಾದಶೆಟ್ಟಿ ಅವರ ಬಹು ನಿರೀಕ್ಷಿತ ಚಿತ್ರ ’ರಣ’ ಮಧ್ಯಂತರದ ಅಂತ್ಯ ಭಾಗದ ಸನ್ನಿವೇಶ ಹಾಗೂ ಶೀರ್ಷಿಕೆ ಗೀತೆಯನ್ನು ಬಾಕಿ ಉಳಿಸಿಕೊಂಡಿದ್ದು ಇದೀಗ ಸಂಗೀತ ನಿರ್ದೇಶಕ ರಾಜೇಶ್ ರಾಮನಾಥ್ ಅವರ ಸ್ಟುಡಿಯೋದಲ್ಲಿ ಚಿತ್ರೇತರ ಚಟುವಟಿಕೆಗಳು ನಡೆಯುತ್ತಿದೆ.
ಖ್ಯಾತ ನಟ ೨೦೦ ಕ್ಕೂ ಹೆಚ್ಚು ಚಿತ್ರಗಳ ಸೋಲಿಲ್ಲದ ಸರದಾರ, ಮಂಡ್ಯದ ಗಂಡು ಅಂಬರೀಷ್ ಪಂಕಜ್ ನಾಯಕತ್ವದ ’ರಣ’ ಚಿತ್ರಕ್ಕೆ ಬಹುಮುಖ್ಯ ಸನ್ನಿವೇಶಗಳಲ್ಲಿ ಅಭಿನಯಿಸಿದ್ದಾರೆ. ಅಂಬರೀಷ ಪಂಕಜ್ ಅವರ ತಂದೆ ಎಸ್. ನಾರಾಯಣ್ ನಿರ್ದೇಶನದ ’ವೀರ ಪರಂಪರೆ’ ಚಿತ್ರದಲ್ಲಿ ಮಿಂಚಿದ್ದರು.
ಫೆಬ್ರವರಿ ೨೦೧೨ರ ಹೊತ್ತಿಗೆ ತೆರೆಯ ಮೇಲೆ ಬರುವ ಆಶಯವನ್ನು ನಿರ್ದೇಶಕ ಶ್ರೀನಿವಾಸ ಮೂರ್ತಿ ವ್ಯಕ್ತ ಮಾಡಿದ್ದಾರೆ. ಹೆಸರಾಂತ ನಿರ್ದೇಶಕರ ಬಳಿ ಸಹಾಯಕರಾಗಿ ದುಡಿದಿರುವ ಇವರು ಈ ಚಿತ್ರದಲ್ಲಿ ಸ್ವತಂತ್ರವಾಗಿ ನಿರ್ದೇಶನ ಮಾಡುತ್ತಾ ಹೊಸ ವಿಚಾರವನ್ನು ಪ್ರೇಕ್ಷಕರ ಮುಂದಿಟ್ಟು ಅವರು ಸ್ವಗತದಲ್ಲಿ ತೊಡಗುವಂತೆ ಮಾಡುತ್ತೇನೆ ಎನ್ನುತ್ತಾರೆ. ಲಕ್ಷ್ಮಣ್ ಅವರ ಕತೆ, ವಿ.ಶ್ರೀಧರ್ ಅವರ ಸಂಗೀತ, ರಾಜರತ್ನ ಅವರ ಛಾಯಾಗ್ರಹಣ, ಬಿ.ಎಸ್. ಕೆಂಪರಾಜ್ ಅವರ ಸಂಕಲನ ಈ ಚಿತ್ರಕ್ಕಿದೆ.
ನಾಯಕ ನಟ ಪಂಕಜ್ ಜೊತೆಯಾಗಿ ಸುಪ್ರೀತಾ, ಅರ್ಚನಾ ಹಾಗೂ ಸೋನಿಯಾ ಗೌಡ ನಾಯಕಿಯರಾಗಿ ಅಭಿನಯಿಸುತ್ತಿದ್ದಾರೆ. ಧರ್ಮ, ಶೋಭರಾಜ್, ಸುರೇಶ್ಚಂದ್ರ ಪೋಷಕ ಪಾತ್ರಗಳಲ್ಲಿ ಇದ್ದಾರೆ.