ಲಕ್ಷ್ಮೀಶ್ರೀ ಕಂಬೈನ್ಸ್ ಲಾಂಛನದಲ್ಲಿ ಕೆ.ಮಂಜು ನಿರ್ಮಿಸಿರುವ ‘ಒಲವೇ ಜೀವನ ಲೆಕ್ಕಾಚಾರ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಪ್ರೇಮ ಕಥಾನಕವನ್ನು ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶಿಸಿದ್ದಾರೆ.
ನೈಜ ಘಟನೆ ಆಧಾರಿಸಿದ ಈ ಚಿತ್ರಕ್ಕೆ ನಿರ್ದೇಶಕರು ಪತ್ರಕರ್ತ ಜೋಗಿ ಅವರೊಡಗೂಡಿ ಚಿತ್ರಕಥೆ ಬರೆದಿದ್ದಾರೆ. ನಿರ್ದೇಶನಕ್ಕೆ ಸೀಮಿತರಾಗದ ನಾಗತಿಹಳ್ಳಿ ಚಂದ್ರಶೇಖರ್ ಅವರು ಚಿತ್ರಕ್ಕೆ ನಾಲ್ಕು ಅರ್ಥಗರ್ಭಿತ ಗೀತೆಗಳನ್ನು ರಚಿಸಿದ್ದಾರೆ. ಪ್ರಸಿದ್ದ ಸಂಗೀತ ನಿರ್ದೇಶಕ ಮನೋಮೂರ್ತಿ ಈ ವಿನೂತನ ಕಥಾನಕಕ್ಕೆ ರಾಗ ಸಂಯೋಜಿಸಿದ್ದಾರೆ. ಧ್ವನಿಸುರುಳಿಯ ಮೂಲಕ ಈಗಾಗಲೇ ಕೇಳುಗರಿಗೆ ತಲುಪಿರುವ ಚಿತ್ರದ ಗೀತೆಗಳ ಬಗ್ಗೆ ಉತ್ತಮ ಮಾತುಗಳು ಕೇಳಿ ಬರುತ್ತಿದೆ.
ನಿಸರ್ಗ ದೇವತೆಯ ತವರುಮನೆಯಂತಿರುವ ಸಕಲೇಶಪುರ, ಕರಾವಳಿ ಪ್ರದೇಶ ಮತ್ತು ಬೆಂಗಳೂರು ಸೇರಿದಂತೆ ಹಲವು ಕಡೆ ‘ಒಲವೇ ಜೀವನ ಲೆಕ್ಕಾಚಾರದ ಚಿತ್ರೀಕರಣ ನಡೆದಿದೆ. ಅಜಯ್ ವಿನ್ಸೆಂಟ್ ಛಾಯಾಗ್ರಹಣ, ಶಿವು ಸಂಕಲನವಿರುವ ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಹಾಗೂ ರಾಧಿಕಾ ಪಂಡಿತ್ ನಾಯಕ-ನಾಯಕಿಯರಾಗಿ ನಟಿಸಿದ್ದಾರೆ. ಡೈಸಿ ಬೋಪಣ್ಣ, ರಂಗಾಯಣ ರಘು, ಮಂಡ್ಯ ರಮೇಶ್ ಮುಂತಾದದವರು ಚಿತ್ರದ ತಾರಾಬಳಗದಲಿದ್ದಾರೆ.