ಬಹುನಿರೀಕ್ಷಿತ ಅಡ್ವೆಂಚರಸ್ ಕಾಮಿಡಿ ಕಥಾಹಂದರದ ``ಫಾರೆಸ್ಟ್``ಜನವರಿ 24ಕ್ಕೆ ರಾಜ್ಯಾದ್ಯಂತ‌.. 360 ಹೋರ್ಡಿಂಗ್ಸ್ ದಾಖಲೆ !
Posted date:
ಕಾಡಿನಲ್ಲಿ  ನಡೆಯುವ  ಅಡ್ವೆಂಚರಸ್  ಕಾಮಿಡಿ ಕಥಾಹಂದರ  ಹೊಂದಿರುವ ಫಾರೆಸ್ಟ್ ಚಿತ್ರವು ಇದೇ ತಿಂಗಳ  24ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆ ಕಾಣಲಿದೆ.  ಚಿತ್ರದ ಪ್ರಚಾರಕ್ಕಾಗಿ ನಿರ್ಮಾಪಕರಾದ ಎನ್.ಎಂ. ಕಾಂತರಾಜ್ ಅವರು ಧಾರಾಳವಾಗಿ  ಖರ್ಚು ಮಾಡುತ್ತಿದ್ದಾರೆ.  ಸಿನಿಮಾ ಮೇಕಿಂಗ್‌ನಲ್ಲೂ ಹಿಂದೆ ಬಿದ್ದಿರದ ನಿರ್ಮಾಪಕರು ಈಗ ಚಿತ್ರವನ್ನು  ಜನರಿಗೆ ತಲುಪಿಸುವ  ಪ್ರಾಮಾಣಿಕ ಪ್ರಯತ್ನವನ್ನು  ಮಾಡುತ್ತಿದ್ದಾರೆ.  ಒಂದು ಲೆಕ್ಕದ ಪ್ರಕಾರ ನೀರ್ಮಾಪಕ ಕಾಂತರಾಜ್ ಬರೀ ಲಕ್ಷವಲ್ಲ, ಕೋಟಿಯ ಲೆಕ್ಕದಲ್ಲಿ  ಹಣ ಖರ್ಚು ಮಾಡಿ ಫಾರೆಸ್ಟ್  ಚಿತ್ರದ ಪಬ್ಲಿಸಿಟಿ  ಮಾಡುತ್ತಿದ್ದಾರೆ.  ಇತ್ತೀಚೆಗೆ ತೆರೆಕಂಡ ಮ್ಯಾಕ್ಸ್ ಚಿತ್ರದ ಜತೆಗೆ  ಫಾರೆಸ್ಟ್ ಚಿತ್ರದ ಟ್ರೈಲರನ್ನೂ ಸಹ ರಿಲೀಸ್ ಮಾಡಿದ್ದು, ಮ್ಯಾಕ್ಸ್ ರಿಲೀಸಾದ ಎಲ್ಲ  ಚಿತ್ರಮಂದಿರಗಳಲ್ಲೂ  ಫಾರೆಸ್ಟ್ ಸಿನಿಮಾದ ಟ್ರೈಲರ್ ಪ್ರದರ್ಶನಗೊಳ್ಳುತ್ತಿದೆ,  ಇದಲ್ಲದೆ  ರಾಜ್ಯಾದ್ಯಂತ  ಇರುವ  ನಗರ ಪ್ರದೇಶಗಳ ಪ್ರಮುಖ ವೃತ್ತಗಳಲ್ಲಿ   ಸುಮಾರು360ಕ್ಕೂ  ಹೆಚ್ಚು ಫಾರೆಸ್ಟ್  ಚಿತ್ರದ  ಹೋರ್ಡಿಂಗ್ಸ್ ಗಳನ್ನು ಹಾಕಿಸಿದ್ದಾರೆ. ಸಾಮಾನ್ಯವಾಗಿ ಅದೂ ಬಿಗ್ ಬಜೆಟ್, ಬಿಗ್ ಸ್ಟಾರ್ ಕಾಸ್ಟ್ ಇರೋ ಚಿತ್ರಗಳಿಗೆ  ರಾಜ್ಯದ ಮೇನ್ ಸೆಂಟರ್‌ಗಳಲ್ಲಿ ಅತಿ ಹೆಚ್ಚು ಅಂದರೆ ಸುಮಾರು 50 ರಿಂದ 100 ಹೋರ್ಡಿಂಗ್ಸ್ ಹಾಕಿಸುವುದು  ನೋಡಿದ್ದೇವೆ,  ಆದರೆ  ಕನ್ನಡ ಚಿತ್ರವೊಂದಕ್ಕೆ  360ಹೋರ್ಡಿಂಗ್ಸ್ ಹಾಕಿಸಿರುವುದು  ಇದೇ ಮೊದಲು ಎನ್ನಬಹುದು. 
 
ಇದು  ತಮ್ಮ ಸಿನಿಮಾ ಮೇಲೆ ನಿರ್ಮಾಪಕರಿಗಿರುವ  ಪ್ರೀತಿ ಹಾಗೂ ನಂಬಿಕೆಯನ್ನು ತೋರಿಸುತ್ತದೆ,   ನಿಜಕ್ಕೂ   ಇಂಥಾ ನಿರ್ಮಾಪಕರನ್ನು ಕನ್ನಡ ಚಿತ್ರರಂಗ  ಉಳಿಸಿಕೊಳ್ಳಬೇಕು,  ಇಂಥ ನಿರ್ಮಾಪಕರು ಗೆದ್ದರೆ,  ಇವರು ಇನ್ನೂ ಇಂಥಾ ಹತ್ತು  ಚಿತ್ರಗಳನ್ನು  ನಿರ್ಮಾಣ ಮಾಡುತ್ತಾರೆ.  ಐದಾರು ವರ್ಷ ಚಿತ್ರರಂಗದಲ್ಲಿ ಕೆಲಸ ಮಾಡುವವರಿಗೆ  ಕೈತುಂಬ ಕೆಲಸ ಸಿಗುತ್ತದೆ, ಅಷ್ಟೇ ಅಲ್ಲ ಕನ್ನಡ ಚಿತ್ರರಂಗದ  ಹಿರಿಮೆ ದೇಶಾದ್ಯಂತ  ಬೆಳೆಯುತ್ತದೆ,  ಇತ್ತೀಚೆಗಷ್ಟೇ ಬಹದ್ದೂರ್ ಚೇತನ್ ಅವರು  ಬರೆದಿದ್ದ  ಪೈಸಾ ಪೈಸಾ ಪೈಸಾ ಹಾಡು  ಬಿಡುಗಡೆಯಾಗಿ, ಎಲ್ಲಾಕಡೆ  ವೈರಲ್ ಆಗಿದೆ, ತನ್ನ ಟೈಟಲ್ ಹಾಗೂ ಮೇಕಿಂಗ್‌ನಿಂದಲೇ ಸುದ್ದಿ ಮಾಡುತ್ತಿರುವ ಈ ಚಿತ್ರವು ವಿಭಿನ್ನ ಶೀರ್ಷಿಕೆ, ಸ್ಟಾರ್‌ಕಾಸ್ಟ್ ಹಾಗೂ ಕಾನ್ಸೆಪ್ಟ್ ನಿಂದಲೇ ದೊಡ್ಡಮಟ್ಟದ ನಿರೀಕ್ಷೆ ಹಾಗೂ ಕುತೂಹಲಗಳನ್ನು  ಹುಟ್ಟುಹಾಕಿದೆ. \ಈ ಚಿತ್ರದ ಹಾಡುಗಳಿಗೆ ಸಂಗೀತ ನಿರ್ದೇಶಕ ಧರ್ಮವಿಶ್ ಅವರು ಮ್ಯೂಸಿಕ್ ಕಂಪೋಜ್ ಮಾಡಿದ್ದಾರೆ.
 
ಬಹುನಿರೀಕ್ಷಿತ   ಫಾರೆಸ್ಟ್ ಚಿತ್ರವು 2025ರ ಜನವರಿ 24ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಸದಭಿರುಚಿಯ ಚಿತ್ರಗಳನ್ನು ನೀಡುವ ಹಂಬಲ ಹೊಂದಿರುವ ಎನ್.ಎಂ. ಕಾಂತರಾಜ್ ಅವರು ಎನ್.ಎಂ.ಕೆ. ಸಿನಿಮಾಸ್ ಬ್ಯಾನರ್ ಅಡಿಯಲ್ಲಿ  ಈ ಚಿತ್ರವನ್ನು ಅದ್ದೂರಿಯಾಗಿ  ನಿರ್ಮಾಣ ಮಾಡಿದ್ದಾರೆ.  
 
ಚಿತ್ರರಂಗದ ಮೇಲೆ  ಪ್ರೀತಿ ಹಾಗೂ  ಬಾಂಧವ್ಯ ಇಟ್ಟುಕೊಂಡಿರುವ  ನಿರ್ಮಾಪಕ  ಎನ್.ಎಂ. ಕಾಂತರಾಜು ಅವರು  ಚಿತ್ರದ ವೈಭವಕ್ಕೆ ಯಾವುದೇ  ಕೊರತೆಯಾಗದಂತೆ, ಧಾರಾಳವಾಗಿ ಖರ್ಚು ಮಾಡಿ  ಅದ್ದೂರಿಯಾಗಿ ಚಿತ್ರವನ್ನು ನಿರ್ಮಿಸಿದ್ದಾರೆ, ಬಜೆಟ್ ಎಷ್ಟಾದರೂ ಯೋಚಿಸದೆ ಸಿನಿಮಾ ಚೆನ್ನಾಗಿ ಬರಬೇಕೆಂಬ ಉದ್ದೇಶದಿಂದ  ಉದಾರವಾಗಿ ಹಣ ಹಾಕಿದ್ದಾರೆ. ಉಪಾಧ್ಯಕ್ಷ  ಖ್ಯಾತಿಯ  ಚಿಕ್ಕಣ್ಣ,  ಅಖಿರಾ ಖ್ಯಾತಿಯ  ಅನೀಶ್ ತೇಜೇಶ್ವರ್, ಫಸ್ಟ್ ರ‍್ಯಾಂಕ್ ರಾಜು ಖ್ಯಾತಿಯ ಗುರುನಂದನ್ ಹಾಗೂ ಹಿರಿಯನಟ ರಂಗಾಯಣ ರಘು ಅವರಂಥ ಸ್ಟಾರ್ ಕಲಾವಿದರುಗಳು ಅಭಿನಯಿಸಿರುವ ಮಲ್ಟಿಸ್ಟಾರರ್ ಚಿತ್ರ ಇದಾಗಿದ್ದು,  ಶೀರ್ಷಿಕೆಯೇ ಹೇಳುವಂತೆ  ದಟ್ಟ ಕಾಡಲ್ಲಿ ನಡೆಯುವ ಅಡ್ವೆಂಚರಸ್ ಕಾಮಿಡಿ ಕಥಾಹಂದರ ಈ ಚಿತ್ರದಲ್ಲಿದೆ. ಈ ಚಿತ್ರಕ್ಕೆ ಸತ್ಯಶೌರ್ಯ ಸಾಗರ್ ಹಾಗೂ ಚಂದ್ರಮೋಹನ್ ಸೇರಿ ಕಥೆ, ಚಿತ್ರಕಥೆ ರಚಿಸಿದ್ದಾರೆ. ಸತ್ಯಶೌರ್ಯ ಸಾಗರ್ ಅವರೇ ಈ ಚಿತ್ರದ  ಸಂಭಾಷಣೆ ಬರೆದಿದ್ದಾರೆ.
 
ಇದೊಂದು ಅಡ್ವೆಂಚರಸ್ ಕಾಮಿಡಿ ಕಥೆ ಇರುವ ಚಿತ್ರವಾಗಿದ್ದು   ಶತಮಾನದ ಅತಿದೊಡ್ಡ ಕಳ್ಳತನವೊಂದು ನಡೆದಿರುತ್ತದೆ, ಅದನ್ನು ಪೊಲೀಸರು ಹುಡುಕೊಂಡು ಹೋಗುವುದೇ ಚಿತ್ರದ ಮುಖ್ಯಕಥಾಹಂದರ. ಬೆಂಗಳೂರು, ಮಡಿಕೇರಿ, ಚಿಕ್ಕಮಗಳೂರು, ಸಂಪಾಜೆ ಫಾರೆಸ್ಟ್ ಹಾಗೂ ಮಲೆ ಮಾದೇಶ್ವರ ಬೆಟ್ಟದ ಸುತ್ತಮುತ್ತ 80ಕ್ಕೂ ಹೆಚ್ಚು ದಿನಗಳವರೆಗೆ ಚಿತ್ರೀಕರಣ ನಡೆಸಲಾಗಿದೆ.
 
ಆನಂದ್‌ರಾಜಾ ವಿಕ್ರಮ್ ಅವರ ಹಿನ್ನೆಲೆ ಸಂಗೀತ, ರವಿಕುಮಾರ್ ಅವರ  ಛಾಯಾಗ್ರಹಣ, ಅರ್ಜುನ್ ಕಿಟ್ಟು ಅವರ ಸಂಕಲನ, ಅಮರ್ ಅವರ ಕಲಾ ನಿರ್ದೇಶನ ಹಾಗೂ ಡಾ||ರವಿವರ್ಮ ಅವರ ಸಾಹಸ ನಿರ್ದೇಶನ ಫಾರೆಸ್ಟ್ ಚಿತ್ರಕ್ಕಿದೆ. ಶರಣ್ಯ ಶೆಟ್ಟಿ, ಅರ್ಚನಾ ಕೊಟ್ಟಿಗೆ, ಅವಿನಾಶ್, ಪ್ರಕಾಶ್ ತುಮ್ಮಿನಾಡು, ದೀಪಕ್ ರೈ ಪಾಣಂಜೆ, ಸೂರಜ್ ಪಾಪ್ಸ್, ಸುನೀಲ್‌ಕುಮಾರ್ ಉಳಿದ ತಾರಾಬಳಗದಲ್ಲಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed