ಯುವಜನರ ಮೇಲೆ ಆನ್ ಲೈನ್ ಆಟಗಳ ಪ್ರಭಾವ, ಐಶಾರಾಮಿ ಜೀವನಕ್ಕಾಗಿ ಯುವಕರನ್ನು ಬಲೆಗೆ ಬೀಳಿಸಿಕೊಂಡು ವಂಚಿಸುವ ಯುವತಿ, ಇದೆಲ್ಲವೂ ಪೋಷಕರ ಮೇಲೆ ಯಾವರೀತಿ ಪರಿಣಾಮ ಬೀರುತ್ತದೆ, ಮಕ್ಕಳು ಇದಕ್ಕೆ ಅಡಿಕ್ಟ್ ಆಗಿ ತಮ್ಮ ಜೀವನವನ್ನು ಹೇಗೆ ಹಾಳು ಮಾಡಿಕೊಳ್ತಾರೆ ಎಂದು ಈ ಚಿತ್ರದ ಮೂಲಕ ನಿರ್ದೇಶಕ ಗಂಗಾಧರ್ ಸಾಲಿಮಠ ಅವರು ಹೇಳಲು ಪ್ರಯತ್ನಿಸಿದ್ದಾರೆ.
ವಾಸ್ತವ ಜಗತ್ತು ಮತ್ತು ಭ್ರಮಾಲೋಕದ ಸುತ್ತ ನಡೆಯುವ ಘಟನೆಗಳನ್ನೊಳಗೊಂಡ ಕಥಾಹಂದರ ಹೊಂದಿರೋ ಈ ಚಿತ್ರದಲ್ಲಿ ಯುವಜನರ ಮನಸ್ಥಿತಿಯೇ ಮೇನ್ ಕಾನ್ಸೆಪ್ಟ್.
ಜೀವನದಲ್ಲಿ ನಡೆಯುವ ಸರಿ ಮತ್ತು ತಪ್ಪುಗಳು ಕೆಲವೊಮ್ಮೆ ನಮ್ಮ ಗ್ರಹಿಕೆಗೂ ಸವಾಲೊಡ್ಡುತ್ತವೆ. ತನ್ನದೇ ಆದ ಭ್ರಮೆಯಲ್ಲಿ ಮುಳುಗಿದ್ದ ಯುವಕನೊಬ್ಬನನ್ನು ವಾಸ್ತವ ಜಗತ್ತಿಗೆ ಕರೆತರಲು ಮಾನಸಿಕ ತಜ್ಞರೊಬ್ಬ ಡಾ.ರಾಮ್, ಯಾವರೀತಿ ಟ್ರೀಟ್ಮೆಂಟ್ ನೀಡಿದರು ಎಂಬುದನ್ನು ಈ ಚಿತ್ರದ ಮೂಲಕ ನಿರ್ದೇಶಕರು ಹೇಳಲು ಪ್ರಯತ್ನಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಆಟಗಳಿಗೆ ನಮ್ಮ ಯುವಕ, ಯುವತಿಯರು ಹೇಗೆ ಅಡಿಕ್ಟ್ ಆಗಿದ್ದಾರೆ ಎಂಬ ಕಂಟೆಂಟ್ ಮೇಲೆ ಚಿತ್ರಕಥೆ ಸಾಗುತ್ತದೆ.
ಫ್ಯಾಮಿಲಿ ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ವಿಜಯ್ ರಾಘವೇಂದ್ರ ಸೈಕ್ರಿಯಾಟಿಸ್ಟ್ ಡಾ.ರಾಮ್ ಆಗಿ ನಟಿಸಿದ್ದಾರೆ.
ಕೆಲ ಯುವತಿಯರು ಹೇಗೆ ಯುವಕರನ್ನು ತಮ್ಮ ಬಲೆಗೆ ಬೀಳಿಸಿಕೊಂಡು ಯಾಮಾರಿಸಿ, ಅವರ ಪೋಷಕರಿಂದ ಹಣ ವಸೂಲಿ ಮಾಡುತ್ತಾರೆ ಎಂಬುದನ್ನು ಸಹ ಹೇಳಲಾಗಿದೆ, ಚಿಕ್ಕ ವಯಸಿನಲ್ಲೇ ಹಾರ್ವರ್ಡ್ ಯುನಿವರ್ಸಿಟಿಯಲ್ಲಿ ಪಿಹೆಚ್ಡಿ ಮಾಡಿದ ಡಾ.ರಾಮ್ (ವಿಜಯ ರಾಘವೇಂದ್ರ), ಅತಿಯಾದ ಒತ್ತಡದಿಂದ ಡಿಪ್ರಶನ್ಗೆ ಒಳಗಾಗಿದ್ದ ಚಿತ್ರನಟಿ ಶನಾಯ(ಶೃತಿ ಪ್ರಕಾಶ್)ಳಿಗೆ ಚಿಕಿತ್ಸೆ ನೀಡುತ್ತಲೇ ಆಕೆಯನ್ನು ಪ್ರೀತಿಸುತ್ತಾನೆ, ಆದರೆ ಆಕೆಯನ್ನು ಉಳಿಸಿಕೊಳ್ಳಲಾಗಲಿಲ್ಲವಲ್ಲ ಎಂಬ ಕೊರಗಿನಿಂದ ತನ್ನ ಫಾರಂ ಹೌಸ್ನಲ್ಲಿ ಒಂಟಿಯಾಗಿ ವಾಸವಿರುತ್ತಾನೆ, ಇತ್ತ ಶ್ರೀಧರ್(ರವಿಭಟ್) ತಾರಾ(ಅಪರ್ಣ) ದಂಪತಿಯ ಏಕಮಾತ್ರ ಪುತ್ರನಾದ ಅಭಿ (ಜೈ) ಯಾವಾಗಲೂ ಆನ್ಲೈನ್ ಗೇಮ್ ಆಡುವುದರಲ್ಲೇ ಮುಳುಗಿರುತ್ತಾನೆ, ಆತನಿಗೊಬ್ಬ ಗೆಳತಿಯೂ ಇದ್ದು, ಆಕೆಯ ಹೆಸರು ಜೂಲಿ(ಇಶಿತಾಸಿಂಗ್). ಆಕೆಯನ್ನು ಅಭಿ ತೀರ ಹಚ್ಚಿಕೊಂಡಿರುತ್ತಾನೆ, ಆತನ ಮನೆಯಲ್ಲೂ ಸಹ ಜೂಲಿಯನ್ನು ಸೊಸೆ ಎಂದು ಒಪ್ಪಿಕೊಂಡಿರುತ್ತಾರೆ. ಆದರೆ ಇದ್ದಕ್ಕಿದ್ದಂತೆ ಮರಣ ಹೊಂದುವ ಜೂಲಿಯ ಅಗಲಿಕೆ ಅಭಿ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ.
ಮಾನಸಿಕ. ಸ್ಥೈರ್ಯವನ್ನೇ ಕಳೆದುಕೊಂಡ ಅಭಿ ಡಿಪ್ರೆಶನ್ಗೆ ಹೋಗುತ್ತಾನೆ, ಮಗನನ್ನು ಈ ಅಸ್ವಸ್ಥತೆಯಿಂದ ಹೊರತರಲು ಪ್ರಯತ್ನಿಸುವ ತಂದೆ, ತಾಯಿ ಹಲವಾರು ವೈದ್ಯರ ಬಳಿ ಹೋದರೂ ಪ್ರಯೋಜನವಾಗಲ್ಲ, ಕೊನೆಗೆ ಡಾ.ರಾಮ್ರನ್ನು ಸಂಪರ್ಕಿಸುವಂತೆ ಸಲಹೆ ಬಂದಾಗ, ಮೊದಲು ಈ ಕೇಸ್ ತೆಗೆದುಕೊಳ್ಳಲು ಒಪ್ಪದ ರಾಮ್ ನಂತರ ಸ್ವೀಕರಿಸುತ್ತಾನೆ. ಅಭಿಯ ಪೂರ್ತಿ ಇತಿಹಾಸ ತಿಳಿದುಕೊಂಡು ತನ್ನದೇ ಆದ ರೀತಿ ಚಿಕಿತ್ಸೆ ನೀಡುತ್ತ ಹೋಗುತ್ತಾನೆ. ಚಿತ್ರದ ಕೊನೆಯಲ್ಲಿ ಅಭಿ ಮೊದಲಿನಂತಾದನೇ, ಜೂಲಿಯನ್ನು ಕೊಲೆ ಮಾಡಿಸಿದರ್ಯಾರು ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕುತ್ತದೆ, ಈ ಘಟನೆಗಳ ಹಿಂದಿರುವ ರಹಸ್ಯ, ಕಾಣದ ಕೈ ಪ್ರಯತ್ನ ಇದೆಲ್ಲವೂ ಬಯಲಾಗುತ್ತದೆ. ಒಬ್ಬ ತಾಯಿ ತನ್ನ ಮಗನಿಗಾಗಿ ಏನೆಲ್ಲ ಮಾಡಬಹುದು ಎಂಬುದನ್ನು ಚಿತ್ರದಲ್ಲಿ ಹೇಳಲಾಗಿದೆ,
ಸೈಕ್ರಿಯಾಟಿಸ್ಟ್ ಡಾ.ರಾಮ್ ಪಾತ್ರದಲ್ಲಿ ವಿಜಯ್ ರಾಘವೇಂದ್ರ ಗಂಭೀರ ಅಭಿನಯ ನೀಡಿದ್ದಾರೆ. ಸೈಬರ್ ಕ್ರೈಂ ತನಿಖಾಕಾರಿಯಾಗಿ ಭಾನಾರಾವ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಚಿತ್ರನಟಿ ಶನಾಯ ಪಾತ್ರದಲ್ಲಿ ಶ್ರುತಿ ಪ್ರಕಾಶ್ ಅಲ್ಲದೆ ಅಭಿ ಪಾತ್ರದಲ್ಲಿ ಜೈ ಉತ್ತಮ ಅಭಿನಯ ನೀಡಿದ್ದಾರೆ. ನೆಗೆಟಿವ್ ಶೇಡ್ ಪಾತ್ರಕ್ಕೆ ಇಶಿತಾಸಿಂಗ್ ನ್ಯಾಯ ಒದಗಿಸಿದ್ದಾರೆ.
ಡೀಸ್ ಫಿಲಂ ಬ್ಯಾನರ್ ಅಡಿ ನಿರ್ಮಾಣವಾದ ಈ ಚಿತ್ರಕ್ಕೆ ಗಂಗಾಧರ ಸಾಲಿಮಠ ಆಕ್ಷನ್ ಕಟ್
ಹೇಳಿದ್ದು, ವರುಣ್ ಡಿಕೆ ಅವರ ಕ್ಯಾಮೆರಾ ವರ್ಕ್ ಚಿತ್ರಕ್ಕೆ ಪೂರಕವಾಗಿದೆ. ಅಶ್ವಿನ್ ಹೇಮಂತ್ ಅವರ ಸಂಗೀತವೂ ಚಿತ್ರದ ಓಟಕ್ಕೆ ಸಹಕಾರಿಯಾಗಿದೆ.